ಕುವೈತ್ ಕನ್ನಡ ಕೂಟದ ಕ್ರಿಸ್ಮಸ್ ಮತ್ತು ಹೊಸ ವರ್ಷದ ಕಾರ್ಯಕ್ರಗಳೊಂದಿಗೆ ವಾರ್ಷಿಕ ಸರ್ವ ಸದಸ್ಯ ಸಭೆ; ಹೊಸ ಕಾರ್ಯಕಾರಿ ಸಮಿತಿ ಆಯ್ಕೆ |
ಪ್ರಕಟಿಸಿದ ದಿನಾಂಕ : 2010-01-10
ಜನವರಿ, ೮, ೨೦೧೦. ಕುವೈತ್ ಕನ್ನಡ ಕೂಟದ ರಜತಮಹೋತ್ಸವ ವರ್ಷದ ಅಂತಿಮ ಕಾರ್ಯ ಕ್ರಮವಾದ ಕ್ರಿಸ್ಮಸ್, ಹೊಸವರ್ಷದ ಕಾರ್ಯಕ್ರಮದ ಜೊತೆಗೆ ಕೂಟದ ಸರ್ವಸದಸ್ಯ ಸಭೆಯನ್ನು ಇಂದು ಕುವೈತಿನ ಸಾಲ್ಮಿಯಾದಲ್ಲಿರುವ ಭಾರತೀಯ ಸಮುದಾಯ ಹಿರಿಯ ಹೆಮ್ಮಕ್ಕಳ ಪಾಠ ಶಾಲೆ (Indian Comminity Senior Girls School) ಆಯೋಜಿಸಲಾಗಿತ್ತು. ಶ್ರೀಮತಿ ಮಾಧವಿ ಕುಲಕರ್ಣಿಯವರ ನೇತೃತ್ವದ ಗಣಪತಿ ಸ್ತುತಿಯೊಂದಿಗೆ ಕೂಟದ ಕಾರ್ಯಕ್ರಮಗಳ ಶುಭಾರಂಭವಾಯಿತು.


ಕನ್ನಡದ ಮೇರು ವ್ಯಕ್ತಿತ್ವಗಳಾದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಮತ್ತು ಭಾವಗೀತೆಗಳಿಗೆ ಅದಮ್ಯ ಭಾವ ತುಂಬಿದ ಗಾಯನ ಗಾರುಡಿಗ ಶ್ರೀ.ಸಿ. ಅಶ್ವಥ್ ರ ಅಗಲಿದ ಚೇತನಗಳಿಗೆ ಚಿರ ಶಾಂತಿ ಕೋರಿ ಮೌನಾರಾಧನೆಯನ್ನು ಅರ್ಪಿಸಲಾಯಿತು.

ಕು.ಮೈತ್ರಿ ಮೂರ್ತಿಯ ಕೂಚುಪುಡಿ ಶೈಲಿಯ ಸರಸ್ವತಿ ಸ್ತುತಿ ನೃತ್ಯ ಮತ್ತು ಕುಮಾರಿಯರಾದ ರಶ್ಮಿನಾಯಕ್ ಮತ್ತು ಅನುಷಾರ ಭರತನಾಟ್ಯಂ ಶೈಲಿಯ ತೋಡಿಮಂಗಲಂ ಸಭಿಕರ ಮನ ಸೂರೆಗೊಂಡವು.

ಕೂಟದ ಮಕ್ಕಳ ವಿವಿಧ ನೃತ್ಯ ಕಾರ್ಯಕ್ರಮ ಪುಟಾಣಿಗಳ ಪ್ರತಿಭೆಗೆ ಹಿಡಿದ ಕನ್ನಡಿಯಾಗಿತ್ತು. ಕೂಟದ ಯುವ ಪ್ರತಿಭೆ ಶ್ರೀ. ದಿನೇಶ್ ಮೂರ್ತಿಯ ಮೈಕೆಲ್ ಜಾಕ್ಸನ್ ಡಾನ್ಸ್ ಯುವಕ ಯುವತಿ ಯರನ್ನು ಕುಣಿವಂತೆ ಮಾಡಿತು.

ಕೂಟದ ನಾಡಿಯಂತೆ ಕೆಲಸಮಾಡುತ್ತಿರುವ ‘ಮರಳ ಮಲ್ಲಿಗೆ‘ ಪತ್ರಿಕೆ ರಜತ ಮಹೋತ್ಸವಕ್ಕೆ ವಿಶೇಷ ಮೆರುಗನ್ನು ನೀಡುವಂತೆ ವರ್ಣಮಯ ಮಾಹಿತಿ-ಪ್ರತಿಭಾ ದರ್ಪಣವಾಗಿ ಹೊರಹೊಮ್ಮಿ ತ್ತು. ಎಂದಿನಂತೆ ಮರಳ ಮಲ್ಲಿಗೆಯ ಅಂತಿಮ ಸಂಚಿಕೆಯ ಅನಾವರಣ ಮಾಡಿ ಮಾತನಾಡಿದ ಕೂಟದ ಅಧ್ಯಕ್ಷರಾದ ಶ್ರೀ ನಕ್ರೆ ಶತೀಶ್ಚಂದ್ರ ಶೆಟ್ಟರು ವರ್ಷದ ಎಲ್ಲ ಕಾರ್ಯಕ್ರಮಗಳಿಗಾಗಿ ಶ್ರಮಿ ಸಿದ ತನ್ನ ಸಹಯೋಗಿಗಳನ್ನು, ವಿವಿಧ ಸಮಿತಿಗಳ ಸದಸ್ಯರನ್ನೂ, ಸ್ವಯಂಸೇವೀ ಸದಸ್ಯರುಗಳ ನ್ನು ಅಭಿವಂದಿಸಿದರು. ಮರಳ ಮಲ್ಲಿಗೆಯ ವರ್ಷವಿಡೀ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಶೆಟ್ಟರು ಇದರಲ್ಲಿದ್ದ ಎಲ್ಲಸದಸ್ಯರ ಪಾಲುದಾರಿಕೆಯನ್ನು ಸ್ಮರಿಸಿದರು.

ಡಾ. ಸುರೇಂದ್ರ ನಾಯಕರ ಮಧುರ ಗಾಯನ ಕಾರ್ಯಕ್ರಮಗಳಿಗೆ ವಿಶೇಷ ರಂಗನ್ನು ನೀಡಿತ್ತು, ಅದರಲ್ಲೂ ಅವರ ನೇತೃತ್ವದಲ್ಲಿ ಪ್ರಸ್ತುತಪಡಿಸಿದ, ಕೂಟದ ಸದಸ್ಯರಾದ ಶ್ರೀಮತಿ ಸುಗುಣಾ ಮಹೇಶ್ ಮತ್ತು ಡಾ. ಆಜಾದ್ ರವರು ರಚಿಸಿದ ‘ತೈಲ ಸಿರಿಯ‘ ಸಮೂಹಗಾನ ಪ್ರತಿಧ್ವನಿಸುವ ಕರತಾಡನಕ್ಕೆ ಪಾತ್ರವಾಯಿತು. ಈ ಹಾಡು ಕನ್ನಡ ನಾಡೋಜ ಡಾ. ನಿಸಾರ್ ಅಹ್ಮದ್ ರ ಜೋಗದ ಸಿರಿಯ ಧಾಟಿಯಲ್ಲಿ ಸಂಯೋಜಿಸಲಾದ ಈ ಹಾಡು ಹೇಗೆ ಕೂಟ ಚಟುವಟಿಕೆಗಳ ಮೂಲಕ ಕುವೈತಿನಲ್ಲಿ ನಾಡು-ನುಡಿ ಸೇವೆಯಲ್ಲಿ ತೊಡಗಿದೆ ಎಂಬುದನ್ನು ದರ್ಶಿಸಿತು. ಯುವ ಪ್ರತಿಭೆಗಳಾದ ಶ್ರೀ. ಸುರೇಶ್ ಸಾಲಿಯಾನ್, ಕುಮಾರಿ ವಿಚಿತಾ ಚಿನ್ಮಯ ಮುಂತಾದವರ ಗಾಯನ ಎಲ್ಲರ ಮನಸೂರೆಗೊಂಡಿತು.

ಕ್ರಿಸ್ ಮಸ್ ಆಚರಣೆಯ ಹಿಂದಿನ ಘಟನೆಗಳ ದೃಶ್ಯಾವಳಿಹೊತ್ತ ಪ್ರಹಸನ ಮತ್ತು ಸಾಂತಾ ಕ್ಲಾಸ್ ನ ಮಕ್ಕಳನ್ನು ಆಕರ್ಶಿಸುವ ಚಾಕೊಲೇಟ್ ಮಳೆ ಇತ್ಯಾದಿ ಕಾರ್ಯಕ್ರಮಗಳ ನಂತರ ಹೊಸವರ್ಷಕ್ಕೆ ಶುಭಸ್ವಾಗತ ಕೋರಲಾಯಿತು. ಕೂಟದ ಸದಸ್ಯರ ಇ-ವಿಳಾಸ ಹೊತ್ತಿಗೆಯ ಅನಾವರಣ ಮಾಡಿ ಅದನ್ನು ಶ್ರೀ. ಚಿನ್ಮಯರವರು ಸದಸ್ಯರಿಗೆ ಪರಿಚಯಿಸಿದರು.

ವರ್ಷದ ಆಯ-ವ್ಯಯಗಳ ವರದಿಯನ್ನು ಮಂಡಿಸಿದ ಕೂಟದ ಖಜಾಂಚಿ ಶ್ರೀ. ಗಿರೀಶ್ ಶೆಣೈ ರವರು ಆಯ್ಕೆಯಾಗಲಿರುವ ಕಾರ್ಯಕಾರಿಣಿಗೆ ಶುಭಕೋರಿದರು.

ಚುನಾವಣಾ ಅಧಿಕಾರಿಯಾಗಿ ಶ್ರೀ ಸುಧಕರ್ ಶೆಟ್ಟರು ರಜತ ಮಹೋತ್ಸವದ ಕಾರ್ಯಕಾರಿಣಿ ಮತ್ತು ಇತರ ಸಮಿತಿಗಳ ಅಮೋಘ ಕಾರ್ಯಕ್ಷಮತೆಯನ್ನು ಶ್ಲಾಘಿಸಿ ಮುಂಬರುವ ವರ್ಷದ ಕೂಟದ ಕಾರ್ಯಕಾರಿಣಿಯ ಗಾತ್ರ ತಗ್ಗಿಸುವ ರಜತೋತ್ಸವ ಸಮಿತಿಯ ಶಿಫಾರಸ್ಸನ್ನು ಸರ್ವ ಸದಸ್ಯರ ಅನುಮೋದನೆಗೆ ಪ್ರಸ್ತುತ ಪಡಿಸಿದರು ಅದನ್ನು ಅನುಮೋದಿಸಲಾಯಿತು.
ಅದರಂತೆ ನಾಲ್ಕು ಸಮಿತಿಯ ಹುದ್ದೆಗಳಾದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಮತ್ತು ಖಜಾಂಚಿಗಳಿಗಾಗಿ ನಾಮಾಂಕನ ಅನುಮೋದನೆಗಳನ್ನು ಆಹ್ವಾನಿಸಿದರು.
ಅದರಂತೆ ವಿವಿಧ ಅವಿರೋಧವಾಗಿ ಆಯ್ಕೆಯಾದ ೨೦೧೦ರ ಕಾರ್ಯಕಾರಿ ಸಮಿತಿ ಅಧ್ಯಕ್ಷರು: ಶ್ರೀ ಹರ್ಷರಾವ್; ಉಪಾಧ್ಯಕ್ಷರು: ಶ್ರೀಮತಿ ಸುಭದ್ರ ಸೂರನ; ಪ್ರಧಾನ ಕಾರ್ಯದರ್ಶಿ: ಶ್ರೀ ಅನಿಲ್ ಪ್ರಭು ಮತ್ತು ಖಜಾಂಚಿ: ಶ್ರೀ ರೇವಣಸಿದ್ದಪ್ಪ ಹೊಂಬಾಳಿ.
ಹೊಸ ಸಮಿತಿಗೆ ಶುಭಕೋರಿ ರಾಷ್ಟ್ರಗೀತೆಯೊಂದಿಗೆ ಸಮಾರಂಭ ಕೊನೆಗೊಂಡಿತು.
ವರದಿಯ ವಿವರಗಳು |
 |
ಕೃಪೆ : ಡಾ.ಆಜಾದ್/ ಚಿತ್ರ-ಮೋಹನ್ದಾಸ್ ಕಾಮತ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-01-10
|
|
|