|
ಪ್ರಕಟಿಸಿದ ದಿನಾಂಕ : 2009-12-31
{ ಪತಿಗೆ ಭಾರತಿ ವಿದಾಯ}
ಬೆಂಗಳೂರು: ಕನ್ನಡ ಚಿತ್ರರಂಗದ ನಾಯಕತ್ವ ವಹಿಸಿದ್ದ ರಾಜಕುಮಾರ್ ಅವರ ಸಮಾಧಿಯೇ ಇನ್ನೂ ಪೂರ್ಣಗೊಂಡಿಲ್ಲ. ಅಷ್ಟರಲ್ಲಿ ರಾಜ್ಕುಮಾರ್ ಅವರ ನಂತರದ ಸ್ಥಾನ ತುಂಬಿದ್ದ ಹಿರಿಯ ನಟ ವಿಷ್ಣುವರ್ಧನ್ ಅಸ್ತಂಗತರಾಗಿದ್ದಾರೆ. ರಾಜ್ಕುಮಾರ್ ನಿಧನರಾದ ನಂತರ, ಕನ್ನಡ ಚಿತ್ರರಂಗದಲ್ಲಿ ಆವರಿಸಿರುವ ಶೂನ್ಯವನ್ನು ತುಂಬಬೇಕು. ನಾಯಕತ್ವ ವಹಿಸಿಕೊಳ್ಳಬೇಕು ಎಂದು ವಿಷ್ಣುವರ್ಧನ್ ಅವರನ್ನು ಚಿತ್ರರಂಗದ ಬಹುತೇಕರು ಕೇಳಿಕೊಂಡರು. ಅವರ ಕುಚುಕುಕುಚುಕು ಗೆಳೆಯ ಅಂಬರೀಷ್ ಕೂಡ ಹೇಳಿದ್ದರು. ಆದರೆ ವಿಷ್ಣು ಅದನ್ನು ನಯವಾಗಿ ನಿರಾಕರಿಸಿದ್ದರು. ಅಂಬರೀಷ್ ಅವರೇ ನಾಯಕತ್ವ ವಹಿಸಲಿ ಎಂದು ಸಲಹೆ ಮಾಡಿದರು.
ವಿಷ್ಣುವರ್ಧನ್ ಅವರ ಆರೋಗ್ಯ ಆಗಾಗ ಕೈಕೊಡುತ್ತಿದ್ದುದೂ ಇದಕ್ಕೆ ಕಾರಣ. ಕಳೆದ ಎರಡು ವರ್ಷಗಳಿಂದ ಅವರು ಖಿನ್ನರಾಗಿದ್ದುದಕ್ಕೂ ಅದೇ ಕಾರಣ. ಮಧುಮೇಹ ಅವರನ್ನು ಹಣ್ಣು ಮಾಡಿತ್ತು. ಆದರೆ ಅಭಿನಯದ ವಿಷಯ ಬಂದಾಗ, ಕಥೆ ಕೇಳುವಾಗ ವಿಷ್ಣು ಎಲ್ಲವನ್ನೂ ಮರೆಯುತ್ತಿದ್ದರು. ವಿಷ್ಣು ಅವರ ಜತೆ ಚಿತ್ರರಂಗ ಪ್ರವೇಶಿಸಿದವರೆಲ್ಲಾ ನಿವೃತ್ತರಾದರು. ಪೋಷಕ ಪಾತ್ರಗಳತ್ತ ಜರುಗಿದರು. ಆದರೆ ವಿಷ್ಣು ನಾಯಕನಟ ಸ್ಥಾನದಿಂದ ಅಲುಗಾಡಲೇ ಇಲ್ಲ. ಅವರ 200 ನೇ ಚಿತ್ರ “ಆಪ್ತ ರಕ್ಷಕ” ಬಿಡುಗಡೆಗೆ ಸಿದ್ಧವಾಗಿತ್ತು. ಇನ್ನೂರು ಚಿತ್ರಗಳೆಂದರೆ ನಾಯಕನಟನ ಪಾಲಿಗೆ ಹೆಗ್ಗಳಿಕೆಯೇ ಹೌದು. ‘ಆಪ್ತ ಮಿತ್ರ’ ಚಿತ್ರದ ಯಶಸ್ಸು ಗೊತ್ತೇ ಇದೆ. ಮನೋವೈದ್ಯನಾಗಿ ವಿಷ್ಣುವರ್ಧನ್ ಅಭಿನಯ ಕೂಡ, ವಿಷ್ಣು ಅವರಿಗೂ ಅದು ಒಂದು ಬ್ರೇಕ್. ದ್ವಾರಕೀಶ್ ಅವರಿಗೂ ಜೀವದಾನ. ಚಿತ್ರರಂಗಕ್ಕೂ ಟಾನಿಕ್. ’ಆಪ್ತಮಿತ್ರ’ ಯಶಸ್ಸಿನ ಸ್ಫೂರ್ತಿಯಲ್ಲಿ ಅದರ ಭಾಗ-2 ‘ಆಪ್ತ ರಕ್ಷಕ’ ಚಿತ್ರವನ್ನು ತಯಾರಿಸಲಾಗಿದೆ. ವಿಷ್ಣುವರ್ಧನ್ ಅವರಿಗೆ ವಿಶೇಷ ಗೆಟಪ್ ಇದೆ. ಅವರ ಅಭಿನಯವೂ ಮೆರೆಯಲಿದೆ ಎಂಬ ಸುದ್ದಿಗಳಿವೆ. ’ಆಪ್ತ ಮಿತ್ರ’ ಕನ್ನಡದಲ್ಲಿ ತಯಾರಿಸುವಾಗಲೇ ಶಕುನಗಳು ಸರಿ ಇರಲಿಲ್ಲ. ಆ ಚಿತ್ರದ ನಾಯಕಿ ಸೌಂದರ್ಯ ಚಿತ್ರೀಕರಣ ಮುಕ್ತಾಯವಾದ ನಂತರ ಆಪಘಾತದಲ್ಲಿ ಕಣ್ಮರೆಯಾದರು. ಆನಂತರ ಸಿನಿಮಾ ಸೂಪರ್ಡೂಪರ್ ಹಿಟ್ ಆಯಿತು. ಚಿತ್ರದಲ್ಲಿ ಅದ್ಭುತ ವಾಗಿ ನಟಿಸಿದ್ದ ಸೌಂದರ್ಯ ಇನ್ನಿಲ್ಲವಾಗಿದ್ದರು. ‘ಆಪ್ತ ರಕ್ಷಕ’ ಚಿತ್ರ ತಯಾರಾಗುವಾಗ ಚಿತ್ರದ ನಾಯಕಿ ನಾಗವಲ್ಲಿ ಪಾತ್ರಧಾರಿ ಸಂಧ್ಯಾಗೆ ಭಯವೋ ಭಯ. ಅದೇ ತರಹದ ಚಿತ್ರವಾಗಿರುವುದ ರಿಂದ ನಾಯಕಿ ಸಾವು ನಿಶ್ಚಿತ. ಹೀಗಾಗಿ ಪ್ರತೀ ಬಾರಿ ಚಿತ್ರೀಕರಣ ವಾಗುವಾಗಲೂ ಆತಂಕ ವ್ಯಕ್ತ ಮಾಡುತ್ತಿದ್ದರಂತೆ. ಇಡೀ ಚಿತ್ರತಂಡಕ್ಕೆ ಅಂತಹ ಆತಂಕ ಇದ್ದೇ ಇತ್ತು. ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು, ‘ಅಬ್ಬಾ ಇನ್ನೇನು ಆತಂಕ ಕಳೆಯಿತು’ ಎನ್ನುತ್ತಿರುವಂತೆಯೇ ಚಿತ್ರದ ನಾಯಕ ನಟನನ್ನೇ ವಿಧಿ ಸೆಳೆದುಕೊಂಡು ಬಿಡುವುದೇ?
ಚಿತ್ರರಂಗದಲ್ಲಿ 37 ವರ್ಷಗಳ ಕಾಲ ನಾಯಕನಟರಾಗಿಯೇ ಉಳಿದ ವಿಷ್ಣುವರ್ಧನ್ ಅವರದು ಒಂದು ರೀತಿಯಲ್ಲಿ ವರ್ಣರಂಜಿತ ಚಿತ್ರಜೀವನ. ಪತ್ನಿ ಭಾರತಿ, ಅಳಿಯ ಅನಿರುದ್ಧ ಹೀಗೆ ಚಿತ್ರರಂಗದ ಕುಟುಂಬವೇ ಅವರ ಸುತ್ತ ಇತ್ತು. ತಂದೆ ಎಚ್.ಎಲ್.ನಾರಾಯಣರಾವ್ ಅವರೂ ನಾಟಕಗಳನ್ನು ಬರೆದವರು, ಚಿತ್ರಕಥೆ, ಸಿನಿಮಾಗಳಿಗೆ ಸಂಭಾಷಣೆ ಬರೆದವರು. ಮೈಸೂರಿನ ಚಾಮುಂಡಿಪುರಂನಲ್ಲಿ 1950 ರಲ್ಲಿ ಹುಟ್ಟಿದ ಸಂಪತ್ಕುಮಾರ್ (ವಿಷ್ಣುವರ್ಧನ್ ಅವರ ಮೂಲ ಹೆಸರು) ಬಾಲ್ಯ ಕಳೆದದ್ದು ಮೈಸೂರಿನಲ್ಲಿ. ನಾಲ್ವರು ಸಹೋದರಿಯರು. ಒಬ್ಬ ಸಹೋದರ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನ ಪದವೀಧರ. ತಂದೆ ಬೆಂಗಳೂರಿನಲ್ಲಿ ‘ಪ್ರಜಾವಾಣಿ’ ಕಚೇರಿಯಲ್ಲಿ ಕೆಲಸದಲ್ಲಿದ್ದುದರಿಂದ ನಿತ್ಯ ಕಚೇರಿಗೆ ಬರುತ್ತಿದ್ದರು. ಕಾಲೇಜು ದಿನಗಳಿಂದಲೂ ಮೂಡಿ. ಈ ಸಿಡಿಯುವ ತವಕದ ಯುವಕನನ್ನು ನೋಡಿದ್ದ ‘ಪ್ರಜಾವಾಣಿ’ಯಲ್ಲೇ ಇದ್ದ ವೈಎನ್ಕೆ ಅವರು ‘ವಂಶವೃಕ್ಷ’ ಚಿತ್ರದಲ್ಲಿ ಪಾತ್ರ ಕೊಡಿಸಿದರು. ಜಿ.ವಿ.ಅಯ್ಯರ್ ಅವರ ಈ ಚಿತ್ರದಲ್ಲಿ ಕುಮಾರ್ ಎಂಬ ಹೆಸರಿನಲ್ಲೇ ಕಾಣಿಸಿಕೊಂಡ ವಿಷ್ಣುವರ್ಧನ್ ನಂತರ ಜಿಗಿದದ್ದು, ಪುಟ್ಟಣ್ಣಕಣಗಾಲ್ ಅವರ ಅಖಾಡಾಕ್ಕೆ.
‘ವಂಶವೃಕ್ಷ’ದಲ್ಲಿ ಸಣ್ಣ ಪಾತ್ರ. ಅದೇ ವೇಳೆಗೆ ಪುಟ್ಟಣ್ಣ ಕಣಗಾಲರು ತ.ರಾ.ಸು ಅವರ ಮೂರು ಕಾದಂಬರಿಗಳನ್ನು ಆಧರಿಸಿ ತಯಾರಿಸಲು ನಿರ್ಧರಿಸಿದ್ದ ‘ನಾಗರಹಾವು’ ಚಿತ್ರಕ್ಕೆ ಕುಪಿತ ಯುವಕನ ಪಾತ್ರಕ್ಕೆ ಹೀರೊ ಒಬ್ಬನನ್ನು ಹುಡುಕುತ್ತಿದ್ದರು. ಅವರ ಕಣ್ಣಿಗೆ ಬಿದ್ದವರು ಇಬ್ಬರು. ಕುಮಾರ್ ಮತ್ತು ಅಮರನಾಥ್. ಇಬ್ಬರನ್ನೂ ಆಯ್ಕೆ ಮಾಡಿಕೊಂಡ ಪುಟ್ಟಣ್ಣ ಕುಮಾರನಿಗೆ ವಿಷ್ಣುವರ್ಧನ್ ಎಂದೂ, ಅಮರನಾಥ್ಗೆ ಅಂಬರೀಷ್ ಎಂದೂ ನಾಮಕರಣ ಮಾಡಿದರು. ಇಬ್ಬರೂ ನಾಯಕರು ಚಿತ್ರರಂಗದ ಮುಂದಿನ ದಿನಗಳಲ್ಲಿ ಇತಿಹಾಸ ಬರೆದರು.

ರಾಜ್ಕುಮಾರ್ ಆ ವೇಳೆಗೆ ‘ಬಂಗಾರದ ಮನುಷ್ಯ’ರಾಗಿದ್ದರು. ಕನ್ನಡ ಚಿತ್ರರಂಗ ಬೆಳೆಯುತ್ತಿತ್ತು. ಚಿತ್ರಗಳ ಸಂಖ್ಯೆ ಹೆಚ್ಚುತ್ತಿತ್ತು. ನಾಯಕ ನಟರ ಕೊರತೆ ಇತ್ತು. ವಿಷ್ಣುವರ್ಧನ್ ಆ ಕೊರತೆಯನ್ನು ಸಮರ್ಪಕವಾಗಿ ತುಂಬಿದರು.1972 ರಲ್ಲಿ ಆರಂಭವಾದ ಅವರ ಓಟ ಬುಧವಾರ ಬೆಳಿಗ್ಗೆ ನಿಂತು ಹೋಯಿತು. 2009 ರಲ್ಲಿ ಅವರ ಎರಡು ಚಿತ್ರಗಳು ಬಿಡುಗಡೆಯಾದವು. ’ನಮ್ ಯಜಮಾನ್ರು’ ಹಾಗೂ ‘ಬಳ್ಳಾರಿ ನಾಗ’. ‘ಬಳ್ಳಾರಿ ನಾಗ’ದಲ್ಲಿ ವಿಷ್ಣು ಅವರ ‘ಸಾಹಸ ಸಿಂಹ’ ಇಮೇಜನ್ನು ಮತ್ತೆ ಅವರ ಅಭಿಮಾನಿಗಳಿಗೆ ಉಣಬಡಿಸಿದ್ದರು. ಈ ಚಿತ್ರ ಅವರ ಎಲ್ಲ ಚಿತ್ರಗಳ ಸಿಂಹಾವಲೋಕನ ದಂತಿದೆ. ಅವರು ಪೂರ್ಣಗೊಳಿಸಿ ಹೋಗಿರುವ ಎರಡು ಚಿತ್ರಗಳು ’ಸ್ಕೂಲ್ ಮಾಸ್ಟರ್’ ಮತ್ತು ‘ಆಪ್ತ ರಕ್ಷಕ’. ಮುಂದಿನ ವರ್ಷ ಬಿಡುಗಡೆಯಾಗಲಿವೆ.
80 ರ ದಶಕದಲ್ಲಿ ಹಿಂದಿ ಪ್ರೇಕ್ಷಕರಿಗೆ ಅಮಿತಾಭ್, ಆ್ಯಂಗ್ರಿ ಯಂಗ್ಮನ್ ಇಮೇಜನ್ನು ತಂದು ಕೊಟ್ಟರು. ತಮಿಳಿನಲ್ಲಿ ರಜನೀಕಾಂತ್ ಅದೇ ತರಹದ ಪಾತ್ರಗಳಲ್ಲಿ ಮಿಂಚಿದರು. ವಿಷ್ಣುವರ್ಧನ್ ಕನ್ನಡದಲ್ಲಿ ಆ್ಯಂಗ್ರಿ ನಾಯಕ ಪಾತ್ರಗಳಿಗೆ ಜೀವ ತಂದುಕೊಟ್ಟರು. ‘ಸಾಹಸ ಸಿಂಹ’ ಎಂಬ ಜೋಸೈಮನ್ ನಿರ್ದೇಶನದ ಚಿತ್ರ ಯಶಸ್ವಿಯಾದದ್ದೇ ಹೀಗೆ. ಅದೇ ಬಿರುದು ಅವರಿಗೆ ಶಾಶ್ವತವಾಯಿತು.
ಬಹುಮುಖ ಪ್ರತಿಭೆಯ ನಟ ಎನ್ನುವುದನ್ನು ಸಾಬೀತು ಮಾಡುವುದಕ್ಕಾಗಿಯೇ ವಿಷ್ಣುವರ್ಧನ್ ಇತರ ಭಾಷಾ ಚಿತ್ರಗಳಲ್ಲೂ ಅಭಿನಯಿಸಲಾರಂಭಿಸಿದರು. ನಾಲ್ಕು ಹಿಂದಿ ಚಿತ್ರ, ನಾಲ್ಕು ತೆಲುಗು ಚಿತ್ರ, ಐದು ತಮಿಳು ಚಿತ್ರ, ಎರಡು ಮಲೆಯಾಳಂ ಚಿತ್ರಗಳಲ್ಲಿ ಅವರು ಅಭಿನಯಿಸಿ ಪಂಚಭಾಷಾ ನಟರ ಸಾಲಿಗೆ ಸೇರಿದ್ದಾರೆ. ಸಾಮಾಜಿಕ, ಬಾಂಡ್, ಆ್ಯಕ್ಷನ್, ಹಾಸ್ಯ, ಅಂಗವಿಕಲನ (ಶಿವಶಂಕರ್) ಪಾತ್ರ ಹೀಗೆ ಎಲ್ಲ ರೀತಿಯ ಸವಾಲುಗಳನ್ನು ಅವರು ಅಭಿನಯದಲ್ಲಿ ಸ್ವೀಕರಿಸಿದ್ದಾರೆ. ‘ಗಂಧದ ಗುಡಿ’ ಚಿತ್ರ ರಾಜ್ಕುಮಾರ್ ಜತೆ ಆಭಿನಯಿಸಿದ ಏಕೈಕ ಚಿತ್ರ. ಈ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರ ಕೈಯಲ್ಲಿದ್ದ ಕೋವಿಯಿಂದ ಆಕಸ್ಮಿಕವಾಗಿ ಹಾರಿತೆನ್ನಲಾದ ಗುಂಡು ಚಿತ್ರರಂಗದಲ್ಲಿ ಹಲವಾರು ಸದ್ದುಗಳನ್ನು ಮಾಡಿತು. ವಿವಾದದ ಕೇಂದ್ರವಾಗಿಯೂ ವಿಷ್ಣು ಕೆಲವೊಮ್ಮೆ ಮುಜುಗರಕ್ಕೆ ಈಡಾದರು. ದ್ವಾರಕೀಶ್ ಜತೆ ಕೂಡ ವಿರಸವಾಗಿತ್ತು.
ವಿಷ್ಣುವರ್ಧನ್ ಜನಪ್ರಿಯತೆಯ ತುತ್ತತುದಿಯಲ್ಲಿದ್ದಾಗ ಗಾಯಕರೂ ಆದರು. ಅದಕ್ಕೂ ಅಪಸ್ವರ ತೆಗೆದಿದ್ದವರು ಇದ್ದರು. ಆದರೂ ವಿಷ್ಣು ಹಾಡುವುದನ್ನು ಬಿಡಲಿಲ್ಲ.
ಎಷ್ಟೇ ವಿವಾದಗಳಿದ್ದರೂ ಅದನ್ನೆಲ್ಲಾ ಮೀರಿ ವಿಷ್ಣುವರ್ಧನ್ ನಟರಾಗಿ ಬೆಳೆದರು. ‘ಭೂತಯ್ಯನ ಮಗ ಅಯ್ಯು’ ಚಿತ್ರದಲ್ಲಿ ಸವಾಲಿನ ಪಾತ್ರ. ಅಂತಹ ಚಿತ್ರಗಳು ವಿಷ್ಣು ಅಭಿನಯ ಸಾಮರ್ಥ್ಯವನ್ನು ಸಾಬೀತು ಪಡಿಸಿದುವು. ‘ಸೊಸೆ ತಂದ ಸೌಭಾಗ್ಯ’, ‘ಗಂಧದ ಗುಡಿ’, ‘ದೇವರಗುಡಿ’, ‘ನಾಗರ ಹಾವು’, ‘ಕಿಲಾಡಿ ಜೋಡಿ’, ‘ಕರುಣಾಮಯಿ’, ‘ಕಳ್ಳ-ಕುಳ್ಳ’, ‘ಗಲಾಟೆ ಸಂಸಾರ’, ‘ಹೊಂಬಿಸಿಲು’, ‘ಗುರು ಶಿಷ್ಯರು’, ಮೊದಲಾದ ಚಿತ್ರಗಳು ಅವರನ್ನು ಚಿತ್ರರಂಗದಲ್ಲಿ ಮತ್ತಷ್ಟು ಗಟ್ಟಿಗೊಳಿಸಿದುವು.
ವಿಷ್ಣುವರ್ಧನ್ ಅವರ ನಟನಾ ಶೈಲಿ, ಅವರ ಫೈಟಿಂಗ್ ಶೈಲಿ, ಅವರು ಎಡಗೈಗೆ ಬಳೆ ಧರಿಸಿ ಹೊಡೆದಾಡುವ ರೀತಿ ಎಲ್ಲವೂ ಯುವಕರನ್ನು ಅವರತ್ತ ಆಕರ್ಷಿಸಿದುವು. ಎಷ್ಟೋ ಯುವಕರು ಅಂದಿನ ದಿನಗಳಲ್ಲಿ ಬಳೆ ಧರಿಸಿ ಓಡಾಡುತ್ತಿದ್ದರು. ನಾಗರ ಹಾವಿನ ರಾಮಾಚಾರಿ ಇಮೇಜು ಚಿತ್ರರಂಗದಲ್ಲಿ, ಸುಮಾರು 15 ವರ್ಷಗಳ ಕಾಲ ಉಳಿದಿತ್ತು.
ಅಂಬರೀಷ್ “ಅಂತ”ದಲ್ಲಿ ಅಂತಹದೇ ಇಮೇಜನ್ನು ಮತ್ತಷ್ಟು ಸುಧಾರಣೆ ಮಾಡುವವರೆಗೆ ಅದು ಬಲವಾಗಿ ಬೇರೂರಿತ್ತು.
ಯಶಸ್ಸಿನ ಟ್ರ್ಯಾಕ್ ನೋಡಿದರೆ ವಿಷ್ಣುವರ್ಧನ್ ಕನ್ನಡದ ಸೂಪರ್ಸ್ಟಾರ್ ಎನ್ನಬೇಕು. ‘ಭೂತಯ್ಯನ ಮಗ ಅಯ್ಯು’, ‘ಸೊಸೆ ತಂದ ಸೌಭಾಗ್ಯ’, ‘ಗುರು ಶಿಷ್ಯರು’, ‘ಹೊಂಬಿಸಿಲು’, ‘ಬಂಧನ’, ‘ನೀ ಬರೆದ ಕಾದಂಬರಿ’, ‘ಮಲಯ ಮಾರುತ’, ‘ಮುತ್ತಿನ ಹಾರ’, ‘ಕರ್ಣ’, ‘ಯಜಮಾನ’, ‘ಲಾಲಿ’, ‘ಸುಪ್ರಭಾತ’, ‘ವೀರಪ್ಪ ನಾಯಕ’, ‘ಸೂರ್ಯವಂಶ’, ‘ಆಪ್ತಮಿತ್ರ’, ‘ಕೋಟಿಗೊಬ್ಬ’ ಹೀಗೆ ಅವರ ಚಿತ್ರಗಳು ಸೂಪರ್ಹಿಟ್ ಆಗಿ ದಾಖಲೆ ಬರೆದಿವೆ. ‘ಮುತ್ತಿನ ಹಾರ’ದಲ್ಲಿ ಅವರ ಅಭಿನಯವನ್ನು ಮರೆಯಲು ಹೇಗೆ ಸಾಧ್ಯವಾಗುತ್ತದೆ. ’ಬಂಧನ’ದ ‘ತ್ಯಾಗಮಯಿ’ಯನ್ನೂ, ’ಯಜಮಾನ’ದ ಗತ್ತನ್ನೂ ನೆನಪಿನಿಂದ ತೆಗೆದುಹಾಕಲು ಸಾಧ್ಯವಾಗುವುದಿಲ್ಲ.
ಬೇರೆ ಭಾಷಾ ಚಿತ್ರರಂಗದಲ್ಲಿ ಇನ್ನೂರು ಚಿತ್ರಗಳಲ್ಲಿ ಅಭಿನಯಿಸಿ, ಇಷ್ಟೊಂದು ಹಿಟ್ ಚಿತ್ರಗಳನ್ನು ನೀಡಿದ ನಟನ ಸ್ಥಾನಮಾನವೇ ಮೇಲೇರುತ್ತದೆ. ಆದರೆ ವಿಷ್ಣು ಅವೆಲ್ಲದರಿಂದ ದೂರವಾದರೇ? ಏಕಾಂಗಿಯಾಗಿ ಉಳಿದರೆ? ಅವರನ್ನೂ ಕನ್ನಡ ಚಿತ್ರರಂಗದಲ್ಲಿ ಸೂಪರ್ಸ್ಟಾರ್ ಎಂದು ಯಾರೂ ಕರೆಯಲೇ ಇಲ್ಲ. ನಾಯಕತ್ವ ವಹಿಸಿಕೊಳ್ಳಿ ಎಂದು ದುಂಬಾಲು ಬೀಳಲಿಲ್ಲ. ಇತ್ತೀಚೆಗೆ ಚಿತ್ರರಂಗದ ಅಮೃತಮಹೋತ್ಸವ ಸಮಾರಂಭವಾದಾಗ ಅವರು ದೂರ ಉಳಿದರು. ತಮ್ಮ ಎಂದಿನ ವೇಷಭೂಷಣದಲ್ಲಿ, ಆಧ್ಯಾತ್ಮದ ಮಾತುಗಳಲ್ಲಿ ಮುಳುಗಿ ದಿನೇದಿನೇ ಖಿನ್ನರಾಗುತ್ತಲೇ ಹೋದರು. ಇದು ಒಬ್ಬ ನಾಯಕ ನಟನ ಮೌನರಾಗ.

ವಿಷ್ಣು ಹೆಸರಿನಲ್ಲಿ ಫಿಲ್ಮ್ ಸಿಟಿ ಹೈದರಾಬಾದ್ನ ರಾಮೋಜಿ ಫಿಲಂ ಸಿಟಿ ಮಾದರಿಯಲ್ಲಿ ನಗರದ ಹೆಸರಘಟ್ಟದಲ್ಲಿ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಫಿಲಂ ಸಿಟಿ ಸ್ಥಾಪಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
ಡಾ.ರಾಜಕುಮಾರ್, ವಿಷ್ಣುವರ್ಧನ್ ನೆನಪಿನಲ್ಲಿ ಫಿಲಂ ಸಿಟಿ ಸ್ಥಾಪಿಸಬೇಕು ಎಂದು ಕಾಂಗ್ರೆಸ್ನ ವಿ.ಆರ್.ಸುದರ್ಶನ್, ಜೆಡಿಎಸ್ನ ವೈ.ಎಸ್.ವಿ.ದತ್ತ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಸಚಿವರು, ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ, ಎಲ್ಲರೂ ಮೆಚ್ಚುವ ಹಾಗೆ ಈ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದರು.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವಾರ್ತೆ / ಗಂಗಾಧರ ಮೊದಲಿಯಾರ್ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2009-12-31
|
|
|