ವಿಷ್ಣುವರ್ಧನ್ ತಾವು ಮಂಡ್ಯ ಮೂಲದವರೆನುವುದನ್ನು ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿರದಿದ್ದರೂ, ಪ್ರತಿ ವರ್ಷ ತನ್ನ ಪೂರ್ವಜರ ಊರಿಗೆ ಕುಟುಂಬ ಸಮೇತ ಬಂದು ಹೋಗುತ್ತಿದ್ದರು.
ಗ್ರಾಮದ ಮುಖ್ಯ ದೇವತೆ ದಂಡಿನಮ್ಮ (ಲಕ್ಷ್ಮಿದೇವಿ) ವಿಷ್ಣು ಕುಟುಂಬದ ಮನೆ ದೇವರು. ಈ ದೇವಾಲಯಕ್ಕೆ ಪತ್ನಿ ಭಾರತಿ ಸಮೇತ ವಿಷ್ಣುವರ್ಧನ್ ವರ್ಷಕ್ಕೆ ಒಂದು ಬಾರಿಯಾದರೂ ಬಂದು ಪೂಜೆ ಸಲ್ಲಿಸುತ್ತಿದ್ದರು.
ವಿಷ್ಣುವರ್ಧನ್ ಮುತ್ತಾತ ನರಸಿಂಹರಾವ್, ತಾತ ಲಕ್ಷ್ಮಿ ನರಸಿಂಹಯ್ಯ ಹಲ್ಲೇಗೆರೆ ಗ್ರಾಮದವರು. ಲಕ್ಷ್ಮಿನರಸಿಂಹಯ್ಯ ಅವರ ಪುತ್ರ ನಾರಾಯಣರಾವ್ ಅವರ ಪುತ್ರನೇ ಸಂಪತ್ ಕುಮಾರ್ ಅಲಿಯಾಸ್ ವಿಷ್ಣುವರ್ಧನ್.
ಪೊಲೀಸ್ ಅಧಿಕಾರಿಯಾಗಿದ್ದ ನಾರಾಯಣರಾವ್ ಮೆಸೂರಿನಲ್ಲಿ ವಾಸವಾಗಿದ್ದರು. ವಿಷ್ಣುವರ್ಧನ್ ಹುಟ್ಟಿದ್ದು, ಬೆಳೆದದ್ದು ಮೆಸೂರಿನಲ್ಲೇ ಆದರೂ, ತಮ್ಮ ಪೂರ್ವಜರ ಹಲ್ಲೇಗೆರೆಯನ್ನು ಮರೆತಿರಲಿಲ್ಲ.
ಈಗಲೂ ಹಲ್ಲೇಗೆರೆಯಲ್ಲಿ ವಿಷ್ಣುವರ್ಧನ್ ಕುಟುಂಬದ ಮನೆಯಿದೆ. ಅವರ ಸೋದರ ಸಂಬಂಧಿಗಳು ಜೀವಿಸುತ್ತಿದ್ದಾರೆ. ಪ್ರತಿ ಬಾರಿ ಗ್ರಾಮಕ್ಕೆ ಬಂದಾಗ ವಿಷ್ಣು ಕುಟುಂಬ ತನ್ನ ಸೋದರ ಸಂಬಂಧಿಗಳ ಮನೆಗೆ ಭೇಟಿ ನೀಡುತ್ತಿದ್ದರು.
ಸ್ಮಶಾನ ಮೌನ: ವಿಷ್ಣುವರ್ಧನ್ ಸಾವಿನ ಸುದ್ದಿಯಿಂದ ಹಲ್ಲೇಗೆರೆ ಗ್ರಾಮಸ್ಥರು ಆಘಾತಗೊಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿತು. ಸೂತಕದ ಛಾಯೆ ಕಂಡುಬಂದಿತು.
ವಿಷ್ಣುವರ್ಧನ್ ಮನೆ ದೇವರಾದ ಲಕ್ಷ್ಮಿದೇವಿ ದೇವಸ್ಥಾನದ ಬಳಿ ಬೆಳಗ್ಗೆಯೇ ಗ್ರಾಮಸ್ಥರು ಗುಂಪು ಸೇರಿ ಅಗಲಿದ ತಮ್ಮೂರಿನ ಹೆಮ್ಮೆಯ ಪುತ್ರನಿಗಾಗಿ ಕಂಬನಿ ಮಿಡಿದರು. ಭಾವಚಿತ್ರ ಮೆರವಣಿಗೆ ನಡೆಸಿ ಶ್ರದ್ಧಾಂಜಲಿ ಅರ್ಪಿಸಿದರು.