| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಯಜಮಾನನ ನಿರ್ಗಮನ: ಅಭಿಮಾನಿಗಳ ಆಕ್ರೋಶ: ಅಂತಿಮ ದರ್ಶನದ ವೇಳೆ ಕಲ್ಲು ತೂರಾಟ, ದಾಂಧಲೆ ಲಾಠಿ ಪ್ರಹಾರ, ಅಶ್ರುವಾಯು ಸಿಡಿತ (updated news) |
ಪ್ರಕಟಿಸಿದ ದಿನಾಂಕ : 2009-12-31
ಬೆಂಗಳೂರು, ಡಿ. ೩೦: ನಾಗರಹಾವು ಚಿತ್ರದ ರಾಮಚಾರಿ, ಸಾಹಸಸಿಂಹ, ಅಭಿಮಾನದ ‘ಕುಚುಕು’, ಆಪ್ತಮಿತ್ರ, ಕನ್ನಡ ಚಿತ್ರರಂಗದ ಹಿರಿಯ ತಲೆಮಾರಿನ ಕೊನೆಯ ಕೊಂಡಿ ಡಾ.ವಿಷ್ಣುವರ್ಧನ್ ಬುಧವಾರ ಮುಂಜಾನೆ ೨:೩೦ರ ಸುಮಾರಿಗೆ ವಿಧಿವಶರಾದರು.
೫೯ವರ್ಷ ಹರೆಯದ ಕನ್ನಡದ ಮೇರು ನಟ ವಿಷ್ಣುವರ್ಧನ್ ಅವರು ತಮ್ಮ ಪತ್ನಿ ಭಾರತಿ ವಿಷ್ಣುವರ್ಧನ್, ಇಬ್ಬರು ದತ್ತು ಪುತ್ರಿಯರು, ನಟ ಹಾಗೂ ಅಳಿಯ ಅನಿರುದ್ಧ, ಮೊಮ್ಮಗ ಅಪ್ರಮೇಯ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ತೀವ್ರ ಉಸಿರಾಟ ಮತ್ತು ಹೃದಯದ ತೊಂದರೆಯ ಹಿನ್ನೆಲೆಯಲ್ಲಿ ನಿನ್ನೆಯೆಷ್ಟೇ ಮೈಸೂರಿಗೆ ತೆರಳಿದ್ದ ವಿಷ್ಣು, ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಖಾಸಗಿ ಹೊಟೇಲ್ನಲ್ಲಿ ವಾಸ್ತವ್ಯಹೂಡಿದ್ದರು. ಬೆಳಗಿನಜಾವ ೨:೩೦ರ ಸುಮಾರಿಗೆ ಏಕಾಏಕಿ ಹೃದಯಾಘಾತವಾಗಿದೆ. ಈ ವೇಳೆ ಅವರ ಜೊತೆಯಲ್ಲಿದ್ದ ಪತ್ನಿ ಭಾರತಿ ತಕ್ಷಣವೇ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಕರೆಸಿಕೊಂಡಿದ್ದು, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.
ವಿಷ್ಣುವರ್ಧನ್ ಅವರ ದೇಹ ಚಿಕಿತ್ಸೆಗೆ ಸ್ಪಂದಿಸಿಲ್ಲ. ಕೂಡಲೇ ವೈದ್ಯರ ತಂಡ ವಿಷ್ಣುವರ್ಧನ್ ಅವರನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆತಂದು ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಿ ಉಳಿಸಿಕೊಳ್ಳಲು ಹರಸಾಹಸ ಮಾಡಿದ್ದಾರೆ. ಆದರೆ ವಿಷ್ಣುವರ್ಧನ್ ಅವರು ಇಹಲೋಕ ತೊರೆದ ಸಂಗತಿಯನ್ನು ವೈದ್ಯರು ಘೋಷಿಸದೆ ವಿಧಿಯಿರಲಿಲ್ಲ. ಆ ಬಳಿಕ ಅವರ ಪಾರ್ಥಿವ ಶರೀರವನ್ನು ಮೈಸೂರಿನಿಂದ ನೆರವಾಗಿ ಬೆಂಗಳೂರಿಗೆ ತರಲಾಯಿತು.
ಮೈಸೂರಿನ ಚಾಮುಂಡಿಪುರಂನಲ್ಲಿ ಎಚ್.ಎಲ್.ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ದಂಪತಿಯ ಪುತ್ರನಾಗಿ ೧೯೫೦ರ ಸೆಪ್ಟೆಂಬರ್ ೧೮ರಂದು ಹುಟ್ಟಿದ ಸಂಪತ್ಕುಮಾರ್ ಕನ್ನಡಿಗರಿಗೆ ವಿಷ್ಣುವರ್ಧನ್ ಆಗಿಯೇ ಚಿರಪರಿಚಿತ. ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ಬೆಂಗಳೂರು ಕನ್ನಡ ಮಾದರಿ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿದರು. ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಪ್ರೌಢ ಹಾಗೂ ಕಾಲೇಜು ಶಿಕ್ಷಣ ಪಡೆದರು.
ವಿದ್ಯಾರ್ಥಿಯಾಗಿದ್ದ ಹಂತದಲ್ಲೆ ನಟನೆಗೆ ಮನಸೋತಿದ್ದ ವಿಷ್ಣು, ಗಿರೀಶ್ ಕಾರ್ನಡರ ವಂಶವೃಕ್ಷದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತರಾಸು ಕಾದಂಬರಿ ಆಧಾರಿತ ಪುಟ್ಟಣ ಕಣಗಾಲರ ನಾಗರಹಾವು ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲೆ ನಾಯಕನ ಪಟ್ಟಕ್ಕೆ ಏರಿದರು. ಸುಮಾರು ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಅಗ್ರಗಣ್ಯರಾಗಿ ಮೆರೆದ ವಿಷ್ಣುವರ್ಧನ್, ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
೧೯೭೫ರ ಫೆ.೨೭ರಂದು ಬೆಂಗಳೂರಿನಲ್ಲಿ ನಟಿ ಭಾರತಿಯೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟಿದ್ದ ವಿಷ್ಣು, ಮಕ್ಕಳಿಲ್ಲದ ಕಾರಣ ಕೀರ್ತಿ ಮತ್ತು ಚಂದನ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದುಕೊಂಡಿದ್ದರು. ಸಾಹಸಸಿಂಹ ಹೆಸರಿಗೆ ತಕ್ಕಂತೆ ಸಾಹಸ, ಸದಭಿರುಚಿಯ, ಸೃಜನ ಶೀಲ ಚಿತ್ರಗಳೊಂದಿಗೆ ಕಾದಂಬರಿಯಾಧಾರಿತ ಚಿತ್ರಗಳಲ್ಲಿ ಮನೋಜ್ಞಾವಾಗಿ ಅಭಿನಯಿಸುತ್ತಿದ್ದರು. ಪ್ರೀತಿ-ಪ್ರೇಮ ಮತ್ತು ಹಾಸ್ಯ ಪಾತ್ರಗಳಿಗೂ ಜೀವ ತುಂಬುತ್ತಿದ್ದ ವಿಷ್ಣುವರ್ಧನ್, ಕನ್ನಡ ಚಿತ್ರ ರಸಿಕರ ಆಪ್ತಮಿತ್ರರಾಗಿದ್ದರು.
ಅಭಿಮಾನಿಗಳ ಅಶ್ರುತರ್ಪಣ: ಮೈಸೂರಿನಿಂದ ವಿಷ್ಣುವರ್ಧನ್ ಅವರ ಪಾರ್ಥಿವ ಶರೀರವನ್ನು ಬುಧವಾರ ಬೆಳಗಿನಜಾವ ೫ಗಂಟೆಯ ಸುಮಾರಿಗೆ ಜಯನಗರ ೪ನೆ ‘ಟಿ’ಬ್ಲಾಕ್ನಲ್ಲಿರುವ ವಿಷ್ಣು ನಿವಾಸಕ್ಕೆ ತರಲಾಯಿತು. ಬೆಳಗ್ಗೆ ಸುದ್ಧಿ ತಿಳಿದ ಕೂಡಲೇ ಚಿತ್ರರಂಗದ ಗಣ್ಯರು, ಅಪಾರ ಸಂಖ್ಯೆಯ ಅಭಿಮಾನಿಗಳು ಅವರ ಅಂತಿಮ ದರ್ಶನ ಪಡೆದರು.
ಸಾಹಸಸಿಂಹ ಸಾವಿನ ಸುದ್ಧಿ ತಿಳಿದ ಕೂಡಲೇ ತಂಡೋತಂಡವಾಗಿ ವಿಷ್ಣುವರ್ಧನ್ ನಿವಾಸಕ್ಕೆ ಧಾವಿಸಿದ ಸಾವಿರಾರು ಸಂಖ್ಯೆಯ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಗೈಯಬೇಕಾಯಿತು. ಅಭಿಮಾನಿಗಳನ್ನು ನಿಯಂತ್ರಣ ಮಾಡಲು ಪೊಲೀಸರು ಲಘುಲಾಠಿ ಪ್ರಹಾರ ಕೂಡ ನಡೆಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ಎಂ.ಮಲ್ಲಿಕಾರ್ಜುನ ಖರ್ಗೆ, ಚಿತ್ರನಟ ಮತ್ತು ವಿಷ್ಣುವರ್ಧನ್ ಆಪ್ತ ಅಂಬರೀಶ್, ಸುಮಲತಾ, ನಿರ್ದೇಶಕ ಪ್ರೇಮ್, ರಕ್ಷಿತ, ರಮ್ಯ, ಪಾರ್ವತಮ್ಮ ರಾಜ್ಕುಮಾರ್, ರಾಘವೇಂದ್ರ ರಾಜ್ ಕುಮಾರ್, ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ, ನಟ, ನಿರ್ದೇಶಕ ದ್ವಾರಕೀಶ್ ಸೇರಿದಂತೆ ಚಿತ್ರರಂಗವೇ ತಮ್ಮ ನೆಚ್ಚಿನ ಗೆಳೆಯ, ಆಪ್ತಮಿತ್ರ, ಕುಚುಕು ಅವರಿಗೆ ಕಂಬನಿ ಮಿಡಿದು, ಶ್ರದ್ಧಾಂಜಲಿ ಸಲ್ಲಿಸಿದರು.
ಕನ್ನಡ ಚಿತ್ರರಂಗದ ‘ಯಜಮಾನ’ನಾಗಿದ್ದ ವಿಷ್ಣುವರ್ಧನ್ ತಮ್ಮ ಮನೋಜ್ಞ ಅಭಿನಯದಿಂದ ತಮಿಳು, ತೆಲುಗು ಚಿತ್ರರಂಗದಲ್ಲಿಯೂ ಹೆಸರುಗಳಿಸಿದ್ದರು. ತಮಿಳು ಮತ್ತು ತೆಲುಗು ಚಿತ್ರರಂಗದ ಖ್ಯಾತನಾಮರು ಇಂದು ಇಲ್ಲಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನ ಪಡೆದುಕೊಂಡರು.
ತಮಿಳು ಚಿತ್ರರಂಗದ ವಿಜಯಕಾಂತ್ ಮತ್ತವರ ಪತ್ನಿ, ಶರತ್ಬಾಬು ಮತ್ತು ಅವರ ಪತ್ನಿ ರಾಧಿಕಾ, ನಿರ್ದೇಶಕ ಮಣಿರತ್ನಂ, ಪತ್ನಿ ಸುಹಾಸಿನಿ, ನಟ ಅರ್ಜುನ್, ತೆಲುಗು ಚಿತ್ರರಂಗದ ಮೋಹನ್ಬಾಬು, ತ್ರಿಭಾಷಾ ನಟ-ನಿರ್ದೇಶಕ ಪ್ರಕಾಶ್ ರೈ, ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಮಾಡಿದರು.
ಅಭಿಮಾನಿಗಳ ಆಕ್ರೋಶ: ಅಂತಿಮ ದರ್ಶನದ ವೇಳೆ ಕಲ್ಲು ತೂರಾಟ, ದಾಂಧಲೆ ಲಾಠಿ ಪ್ರಹಾರ, ಅಶ್ರುವಾಯು ಸಿಡಿತ
ಆಪ್ತಮಿತ್ರ ವಿಷ್ಣುವರ್ಧನ್ರ ಅಗಲಿಕೆ ಮತ್ತು ಅಂತಿಮ ದರ್ಶನ ಸಾಧ್ಯವಾಗದ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ನಗರದ ವಿವಿಧೆಡೆಗಳಲ್ಲಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಲಘುಲಾಠಿ ಪ್ರಹಾರ ನಡೆಸಿ, ಹಲವಾರು ಸುತ್ತು ಅಶ್ರುವಾಯು ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಸಾಹಸಸಿಂಗ ವಿಷ್ಣುವರ್ಧನ್ ಅವರ ಪಾರ್ಥಿವ ಶರೀರವನ್ನು ಬೆಳಗ್ಗೆ ೧೧ಗಂಟೆಯಿಂದ ಸಂಜೆ ೪:೩೦ರ ವರೆಗೆ ಸಾರ್ವಜನಿಕರ ದರ್ಶನಕ್ಕೆ ನಗರದ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಇರಿಸಲಾಗಿತ್ತು. ಬಹಳ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಭಾಗ್ಯಕ್ಕೆ ತುದಿಗಾಲ ಮೇಲೆ ನಿಂತಿದ್ದರು. ಈ ಸಂದರ್ಭದಲ್ಲಿ ನೂಕುನುಗ್ಗಲಿನಿಂದ ಸುಮಾರು ೧೦ಕ್ಕೂ ಹೆಚ್ಚು ಮಂದಿ ಕಾಲ್ತುತಕ್ಕೆ ಸಿಕ್ಕಿ ಗಾಯಗೊಂಡಿದ್ದಾರೆ.
ವಿಷ್ಣು ಅವರ ಅಭಿಮಾನಿಯೊಬ್ಬ ಏಕಾಏಕಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ. ತಕ್ಷಣವೇ ಮಧ್ಯೆ ಪ್ರವೇಶಿಸಿದ ಪೊಲೀಸರು ಆತನನ್ನು ರಕ್ಷಿಸಿದರು. ವಿಷ್ಣುವರ್ಧನ್ ಅವರ ದರ್ಶನಕ್ಕೆ ಆಗಮಿಸಿದ್ದ ಮಹಿಳೆಯೊಬ್ಬರು ಹಠಾತ್ತನೆ ಅಸ್ವಸ್ಥರಾಗಿ ಕುಸಿದುಬಿದ್ದರು. ಅವರನ್ನು ತಕ್ಷಣವೇ ಸ್ಥಳದಲ್ಲಿದ್ದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕಳುಹಿಸಿದರು.
ಮಧ್ಯಾಹ್ನ ೧ಗಂಟೆಯ ಸುಮಾರಿಗೆ ಅಭಿಮಾನಿಗಳ ಸಹನೆ ಕಟ್ಟೆಯೊಡೆದು ಪೊಲೀಸರ ವಿರುದ್ಧ ಸಿಡಿದ್ದೆದ್ದರು. ತಮ್ಮ ಅಭಿಮಾನದ ನಟನ ಅಂತಿಮ ದರ್ಶನ ಸಾಧ್ಯವಾಗದ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ವಾಹನಗಳ ಮೇಲೆ ಕಲ್ಲು ತೂರಾಟ ಆರಂಭಿಸಿದರು. ಪೊಲೀಸರು ಉದ್ರಕ್ತಗೊಂಡ ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸ ಮಾಡಿದರು.
ಬಸವನಗುಡಿ, ಡಿವಿಜಿ ರಸ್ತೆ, ಕೆಆರ್ ರಸ್ತೆ, ನಾರ್ಥ್ ರೋಡ್ ಮತ್ತು ರಾಮಕೃಷ್ಣ ಆಶ್ರಮ, ಗಾಂಧಿಬಜಾರ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನೆರೆದಿದ್ದ ವಿಷ್ಣುವರ್ಧನ್ ಅಭಿಮಾನಿಗಳು ದ್ವಿಚಕ್ರ ವಾಹನಗಳು, ಕಾರುಗಳು, ಬಿಎಂಟಿಸಿ ಬಸ್ಸುಗಳು, ಮನೆ-ಕಚೇರಿಗಳ ಕಿಟಕಿ ಗಾಜುಗಳನ್ನು ಪುಡಿಗೈದು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಹಾರಿಸಿದ ರಬ್ಬರ್ ಗುಂಡಿನಿಂದಾಗಿ ವಿಷ್ಣು ಅಭಿಮಾನಿಯೊಬ್ಬನಿಗೆ ತಗುಲಿದ್ದು, ಆತನ ತೊಡೆಗೆ ಗಾಯವಾಗಿದೆ. ಪೊಲೀಸರ ಲಾಠಿ ಪ್ರಹಾರದಿಂದ ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಅಭಿಮಾನಿಗಳ ಆಕ್ರೋಶಕ್ಕೆ ಹಲವಾರು ವಾಹನಗಳು ಹಾನಿUಡಾಗಿವೆ. ಅನಂತರ ಅವರ ಮೃತದೇಹವನ್ನು ಅಂತ್ಯ ಸಂಸ್ಕಾರಕ್ಕಾಗಿ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿನ ಅಭಿಮಾನ್ ಸ್ಟುಡಿಯೋಗೆ ಸಾಗಿಸಲಾಯಿತು.
ಮೆರವಣಿಗೆಯ ಮೂಲಕ ವಿಷ್ಣು ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ತೆರಳುತ್ತಿದ್ದ ವೇಳೆ ಉದ್ರಿಕ್ತಗೊಂಡ ಅಭಿಮಾನಿಗಳು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಸೇರಿದಂತೆ ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದ ಎಸಿಪಿ ಸೇರಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಕಲ್ಲು ತೂರಾಟ: ೪೫ ಬಿಎಂಟಿಸಿ ಬಸ್ಸುಗಳಿಗೆ ಹಾನಿ, ಎಸಿಪಿಗೆ ಗಾಯ
ವಿಷ್ಣುವರ್ಧನ್ ಅಭಿಮಾನಿಗಳು ನಗರದ ವಿವಿಧೆಡೆಗಳಲ್ಲಿ ಸುಮಾರು ೪೫ಕ್ಕೂ ಹೆಚ್ಚು ಬಿಎಂಟಿಸಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಅವುಗಳ ಕಿಟಕಿ ಗಾಜುಗಳನ್ನು ಪುಡಿಗೈದಿದ್ದಾರೆ.
ಬುಧವಾರ ಬೆಳಗ್ಗೆ ವಿಜಯನಗರ, ಕಾಮಾಕ್ಷಿಪಾಳ್ಯ, ಹೌಸಿಂಗ್ ಬೋರ್ಡ್, ಮೂಡ್ಲಪಾಳ್ಯ ಸುತ್ತ ಮುತ್ತಲ ಪ್ರದೇಶಗಳಲ್ಲಿ ಬಿಎಂಟಿಸಿ ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅನಂತರ ವಿಷ್ಣು ಪಾರ್ಥಿವ ಶರೀರ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದ್ದ ನ್ಯಾಷನಲ್ ಕಾಲೇಜು ಮೈದಾನದ ಸುತ್ತಮುತ್ತಲ ಪ್ರದೇಶದಲ್ಲಿ ಕಲ್ಲು ತೂರಿದ್ದು, ಪಾರ್ಥಿವ ಶರೀರ ಅಂತಿಮ ಸಂಸ್ಕಾರಕ್ಕೆ ಕಂಡೊಯ್ಯುತ್ತಿದ್ದ ವೇಳೆಯೂ ವಾಹನಗಳ ಮೇಲೆ ದಾಂಧಲೆ ನಡೆದಿದೆ.
ಬಿಎಂಟಿಸಿ ಬಸ್ಸುಗಳ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಸುತ್ತಮುತ್ತಲಿನಲ್ಲಿ ಬಿಎಂಟಿಸಿ ಸಂಚಾರ ನಿಷೇಧ ಮಾಡಲಾಗಿದೆ ಎಂದು ಬಿಎಂಟಿಸಿಯ ಮುಖ್ಯಸ್ಥ ರೇಗೌಡ ವಾರ್ತಾಭಾರತಿಗೆ ತಿಳಿಸಿದ್ದಾರೆ. ಬಿಗಿ ಭದ್ರತೆ: ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಸೇರಿ ನಗರದ ಎಲ್ಲ ವಿಭಾಗಗಳ ಡಿಸಿಪಿ-ಎಸಿಪಿಗಳು ಭದ್ರತೆಯ ಉಸ್ತುವಾರಿ ಕೈಗೊಂಡಿದ್ದರು. ಭದ್ರತೆಗಾಗಿ ೨೫ ಪ್ಲಾಟೂನ್ ಸಿಎಆರ್, ಕೆಎಸ್ಆರ್ಪಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಕಲ್ಲು ತೂರಾಟ, ದಾಂಧಲೆಯಲ್ಲಿ ತೊಡಗಿದ್ದ ಸುಮಾರು ೫೦ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಮುನ್ನಚ್ಚರಿಕೆ ಕ್ರಮವಾಗಿ ಬಂಧಿಸಿದ್ದಾರೆ. ಇಲ್ಲಿನ ಶಂಕರಪುರದಲ್ಲಿ ನಗರ ಪೊಲೀಸ್ ಆಯುಕ್ತ ಶಂಕರ ಬಿದರಿಯವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದಲ್ಲಿ ಆರ್ಎಂಸಿ ಯಾರ್ಡ್ ಎಸಿಪಿ ನಾಗರಾಜ್ ಮತ್ತು ಪೇದೆಯೊಬ್ಬ ತೀವ್ರವಾಗಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಶ್ರುತರ್ಪಣ ಮಿಡಿದ ಚಿತ್ರರಂಗ
ಕನ್ನಡ ಚಿತ್ರರಂಗಕ್ಕೆ ಎರಡು ಕಣ್ಣುಗಳಿದ್ದಂತೆ ಇದ್ದ ಡಾ.ರಾಜ್ಕುಮಾರ್ ಮತ್ತು ವಿಷ್ಣುವರ್ಧನ್ ಅವರ ಅಗಲಿಕೆಯಿಂದ ಚಿತ್ರರಂಗ ಅಕ್ಷರಶಃ ಬಡವಾಗಿದೆ. ತಮ್ಮ ಆಪ್ತಮಿತ್ರನ ಕಣ್ಮರೆಯಿಂದ ಅತೀವ ಆತಂಕಗೊಂಡಿದ್ದ ಚಿತ್ರನಟ-ನಟಿಯರ ದಂಡೇ ನ್ಯಾಷನಲ್ ಮೈದಾನದಲ್ಲಿ ನೆರೆದಿತ್ತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜಯಮಾಲ, ಶವರಾಂ, ಶ್ರೀನಾಥ್, ಹಿರಿಯ ನಟಿ ಲೀಲಾವತಿ, ಜಿ.ಕೆ.ಗೋವಿಂದರಾವ್, ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ, ರಾಕ್ಲೈನ್ ವೆಂಕಟೇಶ್, ನಿರ್ದೇಶಕ ನಾಗೇಂದ್ರಬಾಬು, ಎಲ್.ಎನ್.ಶಾಸ್ತ್ರಿ, ರಂಗಾಯಣ ರಘು, ಸುದೀಪ್, ಅಂಬರೀಶ್, ಗಣೇಶ್, ಯೋಗಿ, ದಿಗಂತ್ ಅಂತಿಮ ನಮನ ಸಲ್ಲಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ವಿಧಾನಪರಿಷತ್ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಸಾಂಗ್ಲಿಯಾನ, ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಸಚಿವರಾದ ಕಟ್ಟಾ ಸುಬ್ರಮಣ್ಯನಾಯ್ಡು, ಆರ್.ಅಶೋಕ್, ವಿ.ಎಸ್.ಆಚಾರ್ಯ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸಭಾಪತಿ ರಣ್ಣ ಮತ್ತಿಕಟ್ಟೆ, ಮಾಜಿ ಸಚಿವ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯರಾದ ಮೋಟಮ್ಮ, ಮುಲ್ಲಾಜಮ್ಮ ಸೇರಿದಂತೆ ಹಲವಾರು ರಾಜಕೀಯ ಗಣ್ಯರು ವಿಷ್ಣುವರ್ಧನ್ ಪಾರ್ಥಿವ ಶರೀರ ಪುಷ್ಪಗುಚ್ಚವನ್ನಿರಿಸಿ ಅಂತಿಮ ದರ್ಶನಮಾಡಿದರು.
ಚಿತ್ರನಟ, ಸಾಹಸಸಿಂಹ ವಿಷ್ಣುವರ್ಧನ್ ಅಂತ್ಯ ಸಂಸ್ಕಾರ ದರ್ಶನಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಅಭಿಮಾನಿಗಳು ಮಾಧ್ಯಮದವರ ಮೂರು ವಾಹನಗಳಿಗೆ ಬೆಂಕಿ ಹಚ್ಚಿದಿದ್ದಾರೆ.
ಅಲ್ಲದೆ ಪೊಲೀಸರು ಮತ್ತು ಅಗ್ನಿ ಶಾಮಕ ವಾಹನಗಳು ಸೇರಿದಂತೆ ೩೦ಕ್ಕೂ ವಾಹನಗಳನ್ನು ಜಖಂಗೊಳಿಸಿದ್ದಾರೆ. ವಿಷ್ಣು ದರ್ಶನ ಅಂತಿಮ ದರ್ಶನಕ್ಕಾಗಿ ಆಗಮಿಸಿದ್ದ ಅಭಿಮಾನಿಗಳನ್ನು ಪೊಲೀಸರು ಅಭಿಮಾನ್ ಸ್ಟುಡಿಯೋ ಒಳಗೆ ಬಿಡದ ಹಿನ್ನೆಲೆಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.
ಇದೇ ವೇಳೆ ಅಭಿಮಾನ್ ಸ್ಟುಡಿಯೋ ಆವರಣದ ಹೊರಗೆ ಕಾಲ್ತುಳಿತಕ್ಕೆ ಸಿಲುಕಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಸುದ್ಧಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರ ಸಾಹಸ ನಡೆಸಿದ್ದಾರೆ. ಪೊಲೀಸರು ಉದ್ರಿಕ್ತರನ್ನು ನಿಯಂತ್ರಿಸಲು ಆರೇಳು ಸುತ್ತು ಲಾಠಿ ಪ್ರಹಾರ ನಡೆಸಿದ್ದಾರೆ.
ಸದನದಲ್ಲಿ ಶ್ರದ್ಧಾಂಜಲಿ
ಪಂಚಭಾಷೆಗಳ ನಟ ವಿಷ್ಣುವರ್ಧನ್ ನಿಧನಕ್ಕೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹಂಗಾಮಿ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಮಂಡಿಸಿದ ಸಂತಾಪ ಸೂಚಕ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ವಿಷ್ಣು ವರ್ಧನ್ ನಿಧನದಿಂದ ಕನ್ನಡ ಚಿತ್ರರಂಗ ಬಡವಾಗಿದೆ. ಕಲಾದೇವಿಯ ಆರಧಕರಾಗಿದ್ದ ಅವರು ಎಂದೂ ಅಹಂನಿಂದ ವರ್ತಿಸಲಿಲ್ಲ. ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸುತ್ತಿದ್ದರು. ನಿನ್ನೆ ಸಿ.ಅಶ್ವತ್ ಇಂದು ವಿಷ್ಣು ವರ್ಧನ್ರ ನಿಧನದಿಂದ ಕನ್ನಡಾಂಬೆಗೆ ಪುತ್ರ ಶೋಕ ಕಾಡುತ್ತಿದೆ ಎಂದು ಹೇಳಿದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ವಿಷ್ಣು ವರ್ಧನ್ರಂತಹ ವ್ಯಕ್ತಿಗಳು ವಿರಳ, ಅವರು ಯುವ ಜನಾಂಗಕ್ಕೆ ಆದರ್ಶವಾಗಿದ್ದಾರೆ ಎಂದು ಹೇಳಿದರು.
ಮೇರು ಕಲಾವಿದನ ಗೌರವಾರ್ಥ ಇಂದು ಯಾವುದೇ ಕಲಾಪ ನಡೆಸದೆ ಸದನವನ್ನು ನಾಳೆಗೆ ಮುಂದೂಡುವಂತೆ ಸಲಹೆ ನೀಡಿದರು. ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಮಾತನಾಡಿ, ರಾಜ್ಕುಮಾರ್ನಂತರದ ಸ್ಥಾನ ಪಡೆದಿದ್ದ ವಿಷ್ಣುವರ್ಧನ್ ನಿಧನ ಆಘಾತ ಮಾಡಿದೆ ಎಂದರು. ರಾಜ್ಕುಮಾರ್ರಿಗೆ ಗೌರವ ತೋರಿಸಿದಂತೆ ವಿಷ್ಣುವರ್ಧನ್ರನ್ನು ಗೌರವಿಸಿ ಸ್ಮಾರಕ ನಿರ್ಮಿಸಬೇಕು ಎಂದು ಹೇಳಿದರು.
ಸಚಿವ ಸುರೇಶ್ ಕುಮಾರ್ ಮಾತನಾಡಿ, ಅಶ್ವತ್, ವಿಷ್ಣುವರ್ಧನ್ರ ಸಾವು ಸಂಭವಿಸಿದೆ. ಈ ಸರಣಿ ಮುಂದುವರಿಯದಿರಲಿ ಎಂದು ಹೇಳಿದರು.
ಬಾಲನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವಿಷ್ಣು ವರ್ಧನ್, ನಾಗರಹಾವಿನ ರಾಮಚಾರಿ ಪಾತ್ರದಲ್ಲಿ ಬಂಡಾಯ ನಾಯಕನಾಗಿ ಕಾಣಿಸಿಕೊಂಡರು. ಹಿಂದಿ, ಮಲೆಯಾಳಿ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದರು. ನಾಗರಹಾವಿನಿಂದ ಯಜಮಾನ ಚಿತ್ರದಲ್ಲಿ ಹಿರಿಣ್ಣನ ಪಾತ್ರದಲ್ಲಿನಟಿಸಿ ಅವಿಶ್ಮರಣಿಯ ಅಭಿನಯ ಪ್ರದರ್ಶಿಸಿದ್ದಾರೆ ಎಂದು ಕೊಂಡಾಡಿದರು.
ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಮಾತನಾಡಿ, ೨೦೦೨ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕೀಳಿಯುವಂತೆ ತಾವು ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಕೆಪಿಸಿಸಿ ಅಧ್ಯಕ್ಷ ಜನಾರ್ದನ ಪೂಜಾರಿಯವರ ಒತ್ತಾಸೆ ಮೇರೆಗೆ ವಿಷ್ಣು ವರ್ಧನ್ ಮನವೋಲಿಸಲು ನಡೆಸಿದ ಯತ್ನ ಫಲ ನೀಡಲಿಲ್ಲ. ನಮ್ಮ ಯಾವುದೇ ಒತ್ತಡಗಳಿಗೆ ಮಣಿಯದ ವಿಷ್ಣುವರ್ಧನ್ ತಮ್ಮನ್ನು ತಾವು ಪಕ್ಷಾತೀತವಾಗಿ ಇರಿಸಿಕೊಳ್ಳುವು ಇಂಗಿತ ವ್ಯಕ್ತಪಡಿಸಿದರು. ಸ್ನೇಹಿತ ಅಂಬರೀಶ್ಗಾಗಿ ಮಂಡ್ಯಕ್ಕೆ ಸೀಮಿತವಾಗಿ ಚುನಾವಣಾ ಪ್ರಚಾರದಲ್ಲಿ ತೋಡಗಿಸಿಕೊಂಡಿದ್ದರು ಎಂದು ಹೇಳಿದರು.
ನಟ ಮತ್ತು ಶಾಸಕ ಬಿ.ಸಿ.ಪಾಟೀಲ್ ಮಾತನಾಡಿ, ತಾವು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಆರಂಭದಲ್ಲಿ ತಮ್ಮದೇ ಬ್ಯಾನರ್ನಲ್ಲಿ ವಿಷ್ಣುವರ್ಧನ್ ನಾಯಕತ್ವದಲ್ಲಿ ನಿಷ್ಕರ್ಷ ಚಿತ್ರ ಮಾಡಿದ್ದನ್ನು ಸ್ಮರಿಸಿಕೊಂಡರು. ಮೇರು ನಟರಾಗಿದ್ದರು, ನಮ್ಮಂತ ನವನಟರ ಅಭಿನಯವನ್ನು ಶ್ಲಾಘಿಸುವ ದೊಡ್ಡತನ ವಿಷ್ಣುರವರಲ್ಲಿತ್ತು ಎಂದು ಅವರು ಹೇಳಿದರು.
ಬಾಲ್ಯದಲ್ಲಿ ವಿಷ್ಣುವರ್ಧನ್ರ ಸಹಪಾಠಿಯಾಗಿದ್ದ ರಾಮದಾಸ್, ಶಂಕರಲಿಂಗೇಗೌಡ, ಶ್ರೀನಿವಾಸ್ ಪ್ರದಾಸ್, ನೆ.ಲ.ನರೇಂದ್ರಬಾಬು, ಸಚಿವ ಜಗದೀಶ್ಶೆಟ್ಟರ್, ಶಾಸಕರಾದ ರಾಮಲಿಂಗರೆಡ್ಡಿ ಸಂತಾಪ ಸೂಚಿಸಿ ಮಾತನಾಡಿದರು.
ಸ್ಮಾರಕಕ್ಕೆ 10ಕೋಟಿ: ಸಿಎಂ
ಹಿರಿಯ ನಟ ವಿಷ್ಣುವರ್ಧನ್ರ ಗೌರವಾರ್ಥ ಸ್ಮಾರಕ ನಿರ್ಮಿಸಲು ೧೦ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ನಿನ್ನೆ ರಾತ್ರಿ ವಿಷ್ಣುವರ್ಧನ್ ನಿಧನರಾಗಿದ್ದಾರೆ ಎಂಬ ಸುದ್ದಿ ತಿಳಿದು ಬೆಳಗ್ಗೆ ೬ ಗಂಟೆಗೆಲ್ಲಾ ಸಂಪುಟದ ಸಹೋದ್ಯೋಗಿಗಳೊಂದಿಗೆ ಜಯನಗರದ ವಿಷ್ಣುವರ್ಧನ್ರ ಮನೆಗೆ ತೆರಳಿ ಪಾರ್ಥಿವ ಶರೀರದ ದರ್ಶನ ಪಡೆದು, ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳಿದರು.
ನಂತರ ಅಧಿವೇಶನದಲ್ಲಿ ಭಾಗವಹಿಸಿದರು. ನಂತರ ತಮ್ಮ ಕಚೇರಿಯಲ್ಲಿ ವಿಷ್ಣುವರ್ಧನ್ರ ಆಪ್ತಸ್ನೇಹಿತ ಅಂಬರೀಶ್ರೊಂದಿಗೆ ಅಂತ್ಯಸಂಸ್ಕಾರ ನಡೆಸುವ ಸ್ಥಳದ ಕುರಿತು ಚರ್ಚೆ ನಡೆಸಿದರು. ಹಿರಿಯ ನಟ ಬಾಲಕೃಷ್ಣರ ಕನಸಿನ ಸ್ಟುಡಿಯೋ ಅಭಿಮಾನ್ನಲ್ಲಿ ಅಂತ್ಯ ಸಂಸ್ಕಾರ ನಡೆಸುವುದೆಂದು ನಿರ್ಧರಿಸಲಾಯಿತು. ಬಾಲಕೃಷ್ಣರ ಕುಟುಂಬವರ್ಗದವರಿಂದಿಗೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ೨ ಎಕರೆ ಭೂಮಿ ಬಿಟ್ಟುಕೊಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಯಾಗಿ ಬೇರೆ ಕಡೆ ಎರಡು ಎಕರೆ ಭೂಮಿ ಕೊಡಲಾಗುವುದು ಅಥವಾ ಸೂಕ್ತ ಮೌಲ್ಯದ ಪರಿಹಾರ ನೀಡಲು ಸರಕಾರ ಸಿದ್ಧ ಎಂದು ಹೇಳಿದರು.
ಜಾಗ ನಿರ್ಧಾರವಾಗುತ್ತಿದ್ದಂತೆ ಸ್ಮಾರಕ ನಿರ್ಮಾಣದ ಬಗ್ಗೆಯೂ ಅಂಬರೀಶ್ರೊಂದಿಗೆ ಚರ್ಚಿಸಿದ ಯಡಿಯೂರಪ್ಪ, ಈ ಉದ್ದೇಶಕ್ಕೆ ೧೫ ಕೋಟಿ ರೂಪಾಯಿಗಳನ್ನು ನೀಡಲು ಸರಕಾರ ಸಿದ್ಧವಾಗಿರುವುದಾಗಿ ಹೇಳಿದರು ಎಂದು ಹೇಳಲಾಗಿದೆ. ಸ್ಮಾರಕದ ನಕ್ಷೆಯ ಬಗ್ಗೆ ಕುಟುಂಬ ವರ್ಗದ ಜೊತೆ ಚರ್ಚಿಸಲಾಗುವುದು, ಇದಕ್ಕಾಗಿ ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವುದಾಗಿ ಅವರು ಹೇಳಿದರು.
ಸಾಹಸ ಸಿಂಹ, ಅಭಿನವ ಭಾಗರ್ವ ಡಾ.ವಿಷ್ಣುವರ್ಧನ್ ಚಿತ್ರರಂಗದಲ್ಲಿ ಸುಧೀರ್ಘ ೩೭ ವರ್ಷಗಳನ್ನು ಕಳೆದಿದ್ದು, ಐದು ಬಾರಿ ಫಿಲಂಫೇರ್ ಪ್ರಶಸ್ತಿ, ೭ ಬಾರಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸಾಹಿತಿ ಗಿರೀಶ್ಕಾರ್ನಾಡ್ ನಿರ್ದೇಶನದ ವಂಶವೃಕ್ಷ(೧೯೭೨) ಚಿತ್ರದ ಮೂಲಕ ಚಲನಚಿತ್ರರಂಗಕ್ಕೆ ಪಾರ್ದಾಪಣೆ ಮಾಡಿದ ವಿಷ್ಣುವರ್ಧನ್, ಅದೇ ಸಾಲಿನಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ರಾಜ್ಯಪ್ರಶಸ್ತಿಗಳಿಸಿದರು.
ಹೊಂಬಿಸಿಲು(೧೯೭೮), ಬಂಧನ(೧೯೮೪), ಸುಪ್ರಭಾತ(೧೯೮೮), ಲಯನ್ ಜಗಪತಿ ರಾವ್(೧೯೯೧), ಲಾಲಿ(೧೯೮೮) ಹಾಗೂ ರಪ್ಪ ನಾಯಕ(೧೯೯೯) ಚಿತ್ರಗಳಲ್ಲಿನ ಅಭಿಯನಕ್ಕಾಗಿ ವಿಷ್ಣುವರ್ಧನ್ರಿಗೆ ಅತ್ಯುತ್ತಮ ನಾಯಕ ನಟ ರಾಜ್ಯಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಅಲ್ಲದೆ, ಅರಗಿಣಿ ರೀಡರ್ಸ್ ಅವಾರ್ಡ್, ಸಿನಿ ಎಕ್ಸ್ಪ್ರೆಸ್ ಪ್ರಶಸ್ತಿ, ಆರ್.ನಾಗೇಂದ್ರರಾವ್ ಪ್ರಶಸ್ತಿ, ಇಂದಿರಾ ರಾಷ್ಟ್ರೀಯ ಪ್ರಶಸ್ತಿ, ಕನ್ನಡ ಫಿಲ್ಮ್ಫ್ಯಾನ್ಸ್ ಅಸೋಸಿಯೇಷನ್ ಪ್ರಶಸ್ತಿ, ತಮಿಳುನಾಡಿನ ಕಲಾದೇವಿ ಪ್ರಶಸ್ತಿ. ೨೦೦೪ರಲ್ಲಿ ಜೀವಮಾನದ ಶ್ರೇಷ್ಠ ಸಾಧನೆಗಾಗಿ ಪ್ರಶಸ್ತಿ, ೨೦೦೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್. ೨೦೦೭-೦೮ನೆ ಸಾಲಿನ ಡಾ.ರಾಜ್ ಪ್ರಶಸ್ತಿಯನ್ನು ವಿಷ್ಣುವರ್ಧನ್ಗೆ ನೀಡಿ ಸನ್ಮಾನಿಸಲಾಗಿದೆ.
ವಿಷ್ಣುವರ್ಧನ್ ದಾಖಲೆ: ವಿಷ್ಣುವರ್ಧನ್ ಅಭಿನಯದ ಸುಪ್ರಭಾತ(೧೯೮೮) ಚಲನಚಿತ್ರವು ಎಂಟು ವಿಭಾಗಗಳಲ್ಲಿ ರಾಜ್ಯಪ್ರಶಸ್ತಿಗಳಿಸಿ ದಾಖಲೆ ನಿರ್ಮಿಸಿದೆ. ೨೦೦೦ನೆ ಸಾಲಿನಲ್ಲಿ ಬಿಡುಗಡೆಯಾದ ವಿಷ್ಣುವರ್ಧನ್ ಅವರ ೧೭೮ ಚಿತ್ರ ಯಜಮಾನ ಕನ್ನಡ ಚಲನಚಿತ್ರರಂಗದಲ್ಲಿ ಗಳಿಕೆಯಲ್ಲಿ ದಾಖಲೆ ಸೃಷ್ಠಿಸಿತ್ತು.
ಪಿ.ವಾಸು ನಿರ್ದೇಶನದ ಆಪ್ತಮಿತ್ರ (೨೦೦೪) ಚಲನಚಿತ್ರವು ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಹೊಸ ದಾಖಲೆಯನ್ನೆ ಇದು ವಿಷ್ಣುವರ್ಧನ್ ಅಭಿನಯದ ೧೮೭ ಚಿತ್ರವಾಗಿತ್ತು.
ಸರಕಾರಿ ಗೌರವದೊಂದಿಗೆ ವಿದಾಯ
ಕನ್ನಡ ಚಲನಚಿತ್ರ ರಂಗದ ಮೇರುನಟ ಡಾ.ವಿಷ್ಣುವರ್ಧನ್ರ ಅಂತ್ಯ ಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ಉತ್ತರಹಳ್ಳಿ ಸಮೀಪದ ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ನೆರವೇರಿಸಲಾಯಿತು.
ವೈಧಿಕ ವಿಧಿ-ವಿಧಾನಗಳಂತೆ ಶ್ರೀರಂಗಪಟ್ಟಣದ ಜ್ಯೋತಿಷಿ ಭಾನುಪ್ರಕಾಶ್ ನೇತೃತ್ವದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ವಿಷ್ಣು ಅವರ ಅಣ್ಣ ರವಿ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಿದರು. ವಿಷ್ಣು ಅವರೊಂದಿಗೆ ೧೫ ವರ್ಷಗಳ ಒಡನಾಟ ವಿರಿಸಿಕೊಂಡಿದ್ದ ಶ್ರೀಧರ್ ಪುತ್ರನ ವಿಧಿ ವಿಧಾನ ಕಾರ್ಯಗಳನ್ನು ಪೂರೈಸಲಾಯಿತು.
ಸರಕಾರದ ಪರವಾಗಿ ಮೂರು ಸುತ್ತು ಕುಶಾಲ ತೋಪು ಹಾರಿಸಿ ವಿಷ್ಣುಗೆ ಗೌರವ ವಂದನೆ ಸಲ್ಲಿಸಲಾಯಿತು. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಅಂತ್ಯ ಕ್ರಿಯೆಯಲ್ಲಿ ವಿಷ್ಣು ಪತ್ನಿ ಭಾರತಿ ವಿಷ್ಣುವರ್ಧನ್, ಪುತ್ರಿಯರಾದ ಕೀರ್ತಿ, ಚಂದನ, ಇಬ್ಬರು ಅಳಿಯಂದಿರು, ವಿಷ್ಣು ಆಪ್ತಮಿತ್ರ ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ನಟ ಅಂಬರೀಶ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಆರ್.ಅಶೋಕ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕರುಣಾಕರ ರೆಡ್ಡಿ, ಸಂಸದ ಅನಂತ್ಕುಮಾರ್, ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ರಾಮದಾಸ್, ನಟರಾದ ಅರ್ಜುನ್ ಸರ್ಜಾ, ಅವಿನಾಶ್, ಮಾಳವಿಕ, ದೊಡ್ಡಣ್ಣ, ಶಿವರಾಂ, ರಾಕ್ಲೈನ್ ವೆಂಕಟೇಶ್, ನಿರ್ಮಾಪಕ ಕೆ.ಮಂಜು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2009-12-31 00:00:00
|
|
|
|
| »ಶೋಭಾ ತಂದೆ ವೈಕುಂಠಕ್ಕೆ ಯಡ್ಡಿ ಪಟಾಲಂ ಹಾಜರ್ | | »ಹೀಗೂ ಸಮರ್ಥನೆ; ಸಚಿವರು ಸೆಕ್ಸ್ ನೋಡಿದ್ದಾರೆ ಅಷ್ಟೆ 'ಮಾಡಿಲ್ಲ' | | »ಸೆಕ್ಸ್ ಫಿಲ್ಮ್ ಸವದಿ ನೋಡುವುದಕ್ಕೂ ಮುನ್ನ ಹಲವು ಶಾಸಕರು ನೋಡಿದ್ದರಂತೆ. ನೋಡಿ ಮೂರ್ಛೆ ಹೋದ ಶಾಸಕ ಯಾರು? | | »ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ | | »ನಾಪತ್ತೆಯಾಗಿದ್ದ ವಜ್ರಾಭರಣ ವ್ಯಾಪಾರಿ ಭೀಕರ ಕೊಲೆ!; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated) | | »ಮೈಸೂರು: ತೆರೆದ ತೊಟ್ಟಿಗೆ ಬಿದ್ದು ಆರು ವರ್ಷದ ಬಾಲಕ ಸಾವು | | »ಮಂಡ್ಯ: ನಗರಸಭೆ ಸಾವಾನ್ಯ ಸಭೆಗೆ ಅಡ್ಡಿ: ಜೆಡಿಎಸ್ನ ನಾಲ್ವರ ಅವಾನತು | | »ತುಮಕೂರಿನಲ್ಲಿ ಹೆಣ್ಣು ಮಕ್ಕಳ ಪತ್ತೆ: ಅನಾಥ ಮಕ್ಕಳ ಹಿಂದೆ ಭಿಕ್ಷಾಟನಾ ಜಾಲದ ಶಂಕೆ | | »ಮಂಡ್ಯ ಬಳಿ ಕಂದಕಕ್ಕೆ ಬಿದ್ದ ಟೆಂಪೊ: 10 ಮಂದಿಯ ದಾರುಣ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ | | »ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ | ಚಿಲ್ಲರೆ ರಾಜಕೀಯ: ಸದಾನಂದ ಗೌಡ - ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ | | »ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ; ತಕ್ಷಣವೇ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಮನವಿ | | »ಬೋಧಿ ದಮ್ಮ ಬಂತೇಜಿ ಬಿಡುಗಡೆಗೆ ಆಗ್ರಹಿಸಿ ಧರಣಿ | | »ಗಣಿಗಾರಿಕೆ ಸ್ಥಗಿತ : 20,000 ಕೋಟಿ ರು ನಷ್ಟ | | »ಕೆ.ಎಸ್.ಸಿ.ಎ. ಡೆಲ್ ಶಾಲಾ ಟೂರ್ನಿ ಬಳ್ಳಾರಿ ಶಾಲಾ ತಂಡ ಚಾಂಪಿಯನ್ | | »ಮಾಜಿ ಸಚಿವರ ಮೊಂಡು ವಾದ; ಕ್ಷಮೆ ಕೇಳುವಂತಹ ತಪ್ಪು ಮಾಡಿಲ್ಲ | | »ಕಾಂಗ್ರೆಸ್ನಂತೆ ನಾವು ಚಿಲ್ಲರೆ ರಾಜಕಾರಣ ಮಾಡಲ್ಲ: ಡಿ.ವಿ. ಸದಾನಂದ ಗೌಡ | | »ತಮಿಳುನಾಡು ರಾಜ್ಯಪಾಲ ರೋಸಯ್ಯರ ಸಂಬಂಧಿ ಮನೋಜ್ ಹತ್ಯೆ ಪ್ರಕರಣ: ಮೂವರು ವಶಕ್ಕೆ | | » ಬನ್ನೂರಮಠ ಲೋಕಾಯುಕ್ತ ಹುದ್ದೆ ನಿರಾಕರಣೆ: ರಾಜ್ಯ ಸರ್ಕಾರ ಯಾರ ಹೆಸರು ಶಿಫಾರಸು ಮಾಡಲಿದೆಂಬ ಕುತೂಹಲ | | »ಬಳೆ ಅತ್ತಿಗುಪ್ಪೆ: ನಿಧಿ ಆಸೆಗೆ ದೇವರ ವಿಗ್ರಹ ಭಗ್ನ | | »ಕುವೆಂಪು ವಿಶ್ವವಿದ್ಯಾಲಯದ 22ನೇ ವಾರ್ಷಿಕ ಘಟಿಕೋತ್ಸವ: ಕಷ್ಟ ಕಾರ್ಪಣ್ಯ; ಆದರೂ ಬಿಡಲಿಲ್ಲ ಚಿನ್ನದ ಬೇಟೆ | | »ನರಗುಂದ, ಅಥಣಿ ಬಂದ್: ಮೈಸೂರು, ಮಂಗಳೂರಿನಲ್ಲಿ ಆಕ್ರೋಶ | | »ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ.. | | »ಭಿಕ್ಷೆ ಎತ್ತಿದ ಹಣದಿಂದ ತುಮಕೂರಿನಲ್ಲಿ ರೇಣುಕಾ ಎಲ್ಲಮ್ಮ ದೇಗುಲ ನಿರ್ಮಿಸಿದ ಮಂಗಳಮುಖಿಯರು | | »ಅಶ್ಲೀಲ ಕಲಾಪಕ್ಕೆ ಸದನ ಬಲಿ | | »ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ | | »ವಿಧಾನಸೌಧದಲ್ಲಿ ಸಚಿವತ್ರಯರಿಂದ ಅಶ್ಲೀಲ ಚಿತ್ರ ವೀಕ್ಷಣೆ: ಸರಕಾರ ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ | | »ಹಾಸನ: ವಿಟಿಯು ಕುಲಪತಿ ವಿರುದ್ಧ ಪ್ರತಿಭಟನೆ | | »ಬನ್ನೇರುಘಟ್ಟಕ್ಕೆ ಪಠಾಣ್, ಸಂದೀಪ್ ಪಾಟೀಲ್ ಭೇಟಿ | | »ಪಾವಗಡಕ್ಕೆ ಕುಡಿಯುವ ನೀರಿಗೆ ಆಗ್ರಹಿಸಿ ಪಾದಯಾತ್ರೆ: ‘ಬೆಂಗಳೂರು ಚಲೋ’ಗೆ ವಿದುಕ್ತ ಚಾಲನೆ | | »‘ಬ್ಲೂ ಫಿಲಂ’ ಸಚಿವರ ವಿರುದ್ಧ ಭುಗಿಲೆದ್ದ ಆಕ್ರೋಶ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ; ಶಾಸಕ ಸ್ಥಾನದಿಂದಲೂ ಅನರ್ಹಕ್ಕೆ ಒತ್ತಾಯ | | »ಶಾಸಕತ್ವ ಅನರ್ಹಗೊಳಿಸಲು ಆಗ್ರಹಿಸಿ ಸಿಪಿಐ ಧರಣಿ | | »ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ? | | »ನಾವೇಕೆ ಕ್ಷಮೆಯಾಚಿಸ್ಬೇಕು-ಡೀವಿ; ಕಳಂಕಿತರಿಗೆ ಬಿಜೆಪಿ ಬೆಂಬಲ | | »ಸದನದಲ್ಲಿ ‘ಬ್ಲೂಫಿಲಂ’ ವೀಕ್ಷಣೆ: ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ; ಸಿದ್ದರಾಮಯ್ಯ | | »ಲಕ್ಷ್ಮಣ್ ಸವದಿ ಸ್ವಕ್ಷೇತ್ರದಲ್ಲಿ 'ಕೈ' ಪ್ರತಿಭಟನೆ, ಪ್ರತಿಕೃತಿ ದಹನ | | »ಬಿಬಿಎಂಪಿ ಹಗರಣ:ಎಲ್ಲ ಕಾಮಗಾರಿಗಳ ತನಿಖೆಗೆ ಸರ್ಕಾರ ಆದೇಶ | | »ಐಷಾರಾಮಿ ಪ್ರವಾಸಿ ರೈಲು 'ಗೋಲ್ಡನ್ ಚಾರಿಯಟ್' 'ಹೌಸ್ ಫುಲ್ ಜರ್ನಿ' ಆರಂಭ: ರೈಲಿನಲ್ಲಿ ಅಮೆರಿಕ, ಆಸ್ಟ್ರಿಯಾದ 80 ಪ್ರವಾಸಿಗರು | | »ಅನುದಾನ ಬಿಡುಗಡೆಗೆ ಆಗ್ರಹಿಸಿ ಆಮರಣ ಉಪವಾಸ : ಕಣ್ತೆರೆಯದ ಸರ್ಕಾರ: ಅತಂತ್ರರಾದ ಶಿಕ್ಷಕರು | | »ಯೋಗ ವಿಜ್ಞಾನ ಶಿಬಿರ: ಬಜೆಟ್ನಲ್ಲಿ ಯೋಗಕ್ಕೆ ವಿಶೇಷ ಒತ್ತು: ಸಿಎಂ | | »ನನ್ನ ಮೇಲಿನ ಆರೋಪಗಳೆಲ್ಲ ನಿರಾಧಾರ: ಮಾಜಿ ಸಿಎಂ ಯಡಿಯೂರಪ್ಪ ನನ್ನ ಸಂಬಂಧಿಕರಲ್ಲ: ನ್ಯಾ. ಬನ್ನೂರಮಠ ( Update) | | »ಸದನದಲ್ಲಿ ಮೊಬೈಲ್ ಫೋನ್ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್ ಮಂತ್ರಿ ಸ್ಥಾನಕ್ಕೆ ರಾಜಿನಾಮೆ | | »ಹೂವಿನಹಡಗಲಿಯಲ್ಲಿ ಪ್ರತ್ಯೇಕ ದುರಂತ : ಅಪಘಾತದಲ್ಲಿ 8, ತೆಪ್ಪ ಮುಳುಗಿ 5ಸಾವು | | »ಆಧಾರ್ ಕಾರ್ಡ್ಗೆ ಲಂಚವೇ ಆಧಾರ: ಸರ್ಕಾರದಿಂದ ತನಿಖೆ ಭರವಸೆ | | »50 ಕೋಟಿ ಯುವಕರಿಗೆ ಕೌಶಲ ತರಬೇತಿ: ಖರ್ಗೆ | | »ಏಡ್ಸ್ ಜಾಗೃತಿ ಜಾಥಾಕ್ಕೆ ಡಾ.ಸಲೀಂ ಚಾಲನೆ | | »ಕಲ್ಲಡ್ಕ ಭಟ್ಟರ ಗಡಿಪಾರಿಗೆ ಒತ್ತಾಯ: ಸದನದಲ್ಲಿ ಕೋಲಾಹಲ; ವಿಪಕ್ಷದಿಂದ ಸಭಾತ್ಯಾಗ | | »ತರಕಾರಿ ಸೇವಿಸಿ; ರೋಗ ತಡೆಗಟ್ಟಿ: ಡಾ.ಎಂ.ಆರ್. ಹುಲಿನಾಯ್ಕರ್ | | »ಸರಕಾರಿ ಜಾಗದಲ್ಲಿ ಅನಧಿಕೃತ ನಾಗರಕಟ್ಟೆ ನಿರ್ಮಾಣ: ಪಿಡಬ್ಲುಡಿ ಇಲಾಖೆಯ ವರ್ತನೆಗೆ ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ | | »ಮಂಡ್ಯ: ಮಕ್ಕಳ ಹಬ್ಬದಲ್ಲಿ ಜಿಲ್ಲೆಯ ಸಾಂಸ್ಕೃತಿಕ ಸೊಗಡು ಅನಾವರಣ | | »ವಕ್ಕಲೇರಿ ಮಾರ್ಕಂಡೇಶ್ವರಸ್ವಾಮಿ ಬ್ರಹ್ಮರಥೋತ್ಸವ | |