ಮಂಗಳೂರಿನಲ್ಲಿ ಪಾಸ್ ಪೋರ್ಟ್ ಕಛೇರಿ : ವಿದೇಶಾಂಗ ಮಂತ್ರಿ ಪ್ರಣಬ್ ಮುಖರ್ಜಿ ಪರಿಶೀಲನೆ |
ಪ್ರಕಟಿಸಿದ ದಿನಾಂಕ : 2008-10-15
ಅಧ್ಯಕ್ಷರಿಗೆ ವಿದೇಶಾಂಗ ಮಂತ್ರಿಯವರ ಭರವಸೆಯ ಪತ್ರ : ಕರಾವಳಿ ಜನತೆಗೆ ಶುಭಸಂದೇಶ
ಮನಾಮಾ, ಅಕ್ಟೋಬರ್ 15: ಅನಿವಾಸಿ ಭಾರತೀಯ ವ್ಯವಹಾರಗಳ ಸಚಿವರಾದ ಶ್ರೀ ವಯಲಾರ್ ರವಿಯವರು ಇತ್ತೀಚೆಗೆ ಬಹರೇನಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಆಸ್ಟಿನ್ ಸಂತೋಷ್ ರವರು ಬಹರೇನಿನ ಸಮಸ್ತ ಕನ್ನಡಿಗರ ಪರವಾಗಿ ಮನವಿಯೊಂದನ್ನು ಸಚಿವರಿಗೆ ಸಲ್ಲಿಸಿದ್ದರು.
ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗಿಗಳಾಗಿರುವ ಕನ್ನಡಿಗರಲ್ಲಿ ಹೆಚ್ಚಾಗಿ ಮಂಗಳೂರು ಉಡುಪಿ ಜಿಲ್ಲೆಯವರೇ ಹೆಚ್ಚಾಗಿದ್ದು ಮಂಗಳೂರಿನಲ್ಲಿ ಪೂರ್ಣಪ್ರಮಾಣದ ಪಾಸ್ ಪೋರ್ಟ್ ಕಛೇರಿ ಇಲ್ಲದಿರುವುದರಿಂದ ಅವರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಮಂಗಳೂರಿನಲ್ಲಿ ಪಾಸ್ ಪೋರ್ಟ್ ಕಛೇರಿ ಇರಲು ಬೇಕಾದ ಅರ್ಹತೆಗಳ ಬಗ್ಗೆ ಅಂಕಿ ಅಂಶಗಳನ್ನು ಈ ಪತ್ರದೊಂದಿಗೆ ನೀಡಲಾಗಿತ್ತು.
ಮನವಿಯನ್ನು ಸ್ವೀಕರಿಸಿದ್ದ ಸಚಿವ ವಯಲಾರ್ ರವಿಯವರು ಈ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರೊಂದಿಗೆ ಸಮಾಲೋಚಿಸಿ ಸೂಕ್ತ ಕ್ರಮ ಕೈಗೊಳ್ಳು ವುದಾಗಿ ಭರವಸೆ ನೀಡಿದ್ದರು. ಅವರು ನುಡಿದಂತೆ ಭಾರತಕ್ಕೆ ಹಿಂದಿರುಗಿ ದಾಕ್ಷಣ ಸಚಿವರಾದ ಶ್ರೀ ಪ್ರಣಬ್ ಮುಖರ್ಜಿಯವರೊಂದಿಗೆ ಚರ್ಚಿಸಿ ಮನವಿ ಪತ್ರವನ್ನು ಹಸ್ತಾಂತರಿಸಿದ್ದರು.
ಇದಕ್ಕೆ ತಕ್ಷಣವೇ ಸ್ಪಂದಿಸಿದ ವಿದೇಶಾಂಗ ಸಚಿವರು ಈ ನಿಟ್ಟಿನಲ್ಲಿ ಕಾರ್ಯನಿರತವಾಗುವುದಲ್ಲದೇ ಈ ವಿಷಯದ ಬಗ್ಗೆ ಪರಿಶೀಲನೆ ನಡೆಸುವುದಾಗಿ ವಯಲಾರ್ ರವಿಯವರಿಗೆ ಪತ್ರವೊಂದರ ಮುಖೇನ ತಿಳಿಸಿದ್ದಾರೆ. ಈ ವಿಷಯವನ್ನು ವಯಲಾರ್ ರವಿಯವರು ಸಂಘದ ಅಧ್ಯಕ್ಷರಾದ ಆಸ್ಟಿನ್ ಸಂತೋಷ್ ರವರಿಗೆ ತಿಳಿಸುರುವುದಲ್ಲದೇ ಆ ಪತ್ರದ ಪ್ರತಿಯೊಂದನ್ನು ಲಗತ್ತಿಸಿರುತ್ತಾರೆ.
ಹಾಗೆ ಬಂದ ಪತ್ರದೊಂದಿಗೆ ಈ ವಿಷಯವನ್ನು ತಿಳಿಸಿದ ಆಸ್ಟಿನ್ ಸಂತೋಷ್ ವಯಲಾರ್ ರವಿ ಹಾಗೂ ವಿದೇಶಾಂಗ ಸಚಿವರು ತಮ್ಮ ಮನವಿಗೆ ಓಗೊಟ್ಟಿದುದರ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಶೀಘ್ರವೇ ಮಂಗಳೂರಿನಲ್ಲಿ ಪಾಸ್ ಪೋರ್ಟ್ ಕಛೇರಿ ತೆರೆದು ಇಡಿಯ ಕರಾವಳಿಯ ಜನತೆಗೆ ಅನುಕೂಲವಾದಲ್ಲಿ ಬಹರೇನ್ ಕನ್ನಡ ಸಂಘದ ಪ್ರಯತ್ನ ಸಾರ್ಥಕ ಎಂದು ತಿಳಿಸಿದ್ದಾರೆ.
ಚಿತ್ರ, ವರದಿ: ಕಮಲಾಕ್ಷ ಅಮೀನ್, ಬಹರೇನ್.
ವರದಿಯ ವಿವರಗಳು |
 |
ಕೃಪೆ : ಕಮಲಾಕ್ಷ ಅಮೀನ್, ಬಹರೇನ್. ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-15
|
|
|