ಬಹರೇನಿನಲ್ಲಿ ತುಳು ಸಂಭ್ರಮ : ಟಿಕೆಟ್ ಮಾರಾಟ |
ಪ್ರಕಟಿಸಿದ ದಿನಾಂಕ : 2008-10-15
ಮನಾಮಾ, ಅಕ್ಟೋಬರ್ 15: ತುಳು ಸಂಸ್ಕೃತಿ ಹಾಗೂ ಕಲೆಯನ್ನು ಬಿಂಬಿಸುವ ತುಳು ಸಂಭ್ರಮ ಎನ್ನುವ ಅಪೂರ್ವ ಕಾರ್ಯಕ್ರಮವೊಂದನ್ನು ಇದೇ ಬರುವ ನವೆಂಬರ್ ತಿಂಗಳ 7ನೇ ತಾರೀಖಿನಂದು ಸ್ಥಳೀಯ ಡೆಲ್ಮನ್ ಇಂಟರ್ನ್ಯಾಶನಲ್ ಹೋಟೆಲಿನ ಈಜುಕೊಳದ ಪರಿಸರದಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದ್ ಟಿಕೆಟ್ ಬಿಡುಗಡೆ ಸಮಾರಂಭವು ಇತ್ತೀಚೆಗೆ ಕನ್ನಡ ಸಂಘದ ಸಾಂಸ್ಕೃತಿಕ ಸಭಾಂಗಣದಲ್ಲಿ ಜರುಗಿತು.

ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಆಸ್ಟಿನ್ ಸಂತೋಷ್ ಕುಮಾರ್ ಟಿಕೆಟಿನ ಬೃಹತ್ ಪ್ರತಿಕೃತಿಯನ್ನು ಅನಾವರಣಗೊಳಿಸಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು -ತುಳು ಸಂಭ್ರಮ-ದ ಆಯೋಜಕರ ಈ ಪ್ರಯತ್ನ ಖಂಡಿತವಾಗಿಯೂ ಯಶಸ್ವಿಯಾಗುತ್ತದೆ, ಈ ಸಂಭ್ರಮದ ಮುಖೇನ ತುಳು ಸಂಸ್ಕೃತಿ ಹಾಗೂ ಕಲೆ ಕೊಲ್ಲಿಯ ಮಣ್ಣಿನಲ್ಲಿ ಇನ್ನಷ್ಟು ಪಸರಿಸಲಿ ಎಂದು ತಿಳಿಸಿದರು.

ವೇದಿಕೆಯಲ್ಲಿ ಬಂಟ್ಸ್ ಬಹರೇನಿನ ಅಧ್ಯಕ್ಷರಾದ ಜಿನರಾಜ ಶೆಟ್ಟಿ, ಕರಾವಳಿ ಕೊಂಕಣ್ಸ್ ಅಸೋಸಿಯೇಶನ್ಸ್ ಅಧ್ಯಕ್ಷರಾದ ರೋನಾಲ್ಡ್ ಡಿಸೋಜಾ ಹಾಗೂ -ತುಳು ಸಂಭ್ರಮ-ದ ಆಯೋಜಕರಾದ ಭರತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಕಮಲಾಕ್ಷ ಅಮೀನ್ ಕಾರ್ಯಕ್ರಮದ ನಿರೂಪಣೆ ನೀಡಿದರು.
ನಾಡಿನ ಹೆಸರಾಂತ ಮಿಮಿಕ್ರಿ ಕಲಾವಿದ ಕಿಶೋರ್ ಕುಮಾರ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಲಾಪ್ರದರ್ಶನ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಉದಯೋನ್ಮುಖ ನಿರ್ದೇಶಕ ಕರುಣಾಕರ ಪದ್ಮಶಾಲಿಯ ವರು ರಚಿಸಿ ನಿರ್ದೇಶಿಸುತ್ತಿರುವ -ಏತುಲಾ ತೆಲಿಪೊಲಿ- ಎಂಬ ತುಳು ಹಾಸ್ಯನಾಟಕವು ಪ್ರದರ್ಶನಗೊಳ್ಳಲಿರುವುದು.

ಈ ನಾಟಕಕ್ಕೆ ಸಂಗೀತ ನೀಡಲು ತುಳು ರಂಭಭೂಮಿಯ ಖ್ಯಾತ ಸಂಗೀತ ನಿರ್ದೇಶಕ ಶಶಿ ಹೆಜಮಾಡಿಯವರು ಆಗಮಿಸಲಿರುವರು. ಈಗಾಗಲೇ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ ಅನುಭವವಿರುವ ಭರತ್ ಶೆಟ್ಟಿಯವರು ತಮ್ಮ ಸ್ನೇಹಿತರಾದ ಪ್ರವೀಣ್ ಶೆಟ್ಟಿ ಹಾಗೂ ನವೀನ್ ಶೆಟ್ಟಿಯವರೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿ ದ್ದಾರೆ.

ಕಾರ್ಯಕ್ರಮದ ಪ್ರವೇಶ ದರ ತಲಾ ಒಂದು ಬಹರೇನಿ ದಿನಾರ್ ಆಗಿದ್ದು ಹೆಚ್ಚಿನ ಮಾಹಿತಿಗಾಗಿ ಭರತ್ ಶೆಟ್ಟಿಯವರನ್ನು ಅವರ ದೂರವಾಣಿ ಸಂಖ್ಯೆ 39677316 ಮೂಲಕ ಸಂಪರ್ಕಿಸಬಹುದಾಗಿದೆ.
ಚಿತ್ರ, ವರದಿ: ಕಮಲಾಕ್ಷ ಅಮೀನ್, ಬಹರೇನ್.
ವರದಿಯ ವಿವರಗಳು |
 |
ಕೃಪೆ : ಕಮಲಾಕ್ಷ ಅಮೀನ್, ಬಹರೇನ್. ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-15
|
|
|