ಪರಿಸರ ಪ್ರಿಯರ ನೆಚ್ಚಿನ ತಾಣ ಕುಳಗಿ ನಿಸರ್ಗಧಾಮ |
ಪ್ರಕಟಿಸಿದ ದಿನಾಂಕ : 2008-10-14
ದಾಂಡೆಲಿ - ಅಣಶಿ ಹುಲಿ ಧಾಮದ ಕುಳಗಿ ನಿಸರ್ಗ ಪ್ರದೇಶದ ಅರಣ್ಯದ ಕಾಳಿ ಕಣಿವೆಯ ನೋಟ.
ಜೊಯಿಡಾ: ಮನುಕುಲದ ಅಭಿವೃದ್ಧಿಗೆ ಪರಿಸರದ ಪಾತ್ರ ಆನನ್ಯ. ಪರಿಸರದ ಮಡಿ ಲಲ್ಲೇ ಗಾಳಿ, ನೀರು ಬೆಳಕು ಪಡೆಯುತ್ತ ಮಾನವನ ಜೀವನ ಸಾಗುತ್ತಿದೆ. ಪ್ರಕತಿ ಯಿಲ್ಲದೆ ಮಳೆ - ಬೆಳೆಯಿಲ್ಲ. ಬದಲಾಗು ತ್ತಿರುವ 21 ನೇ ಶತಮಾನದ ಯುಗದಲ್ಲಿ ಜನಸಂಖ್ಯಾ ಹೆಚ್ಚಳ, ನಗರೀಕರಣದ ಭರಾಟೆಯಲ್ಲಿ ಪರಿಸರ ವಿನಾಶದತ್ತ ಸಾಗುತ್ತಿದೆ. ಜತೆಗೆ ಪ್ರಾಣಿ, ಪಕ್ಷಿ, ಜೀವ ಸಂಕುಲ ಗಳು ಕಣ್ಮರೆಯಾಗುತ್ತಿವೆ. ಇದರಿಂದಾಗಿ ಮುಂದಿನ ಪೀಳಿಗೆಗೆ ಪರಿಸರ ರಕ್ಷಣೆಯ ಮಹತ್ವ ತಿಳಿಸುವುದು ಅಗತ್ಯ. ಇಂಥ ಕಾರ್ಯ ಕುಳಗಿ ನಿಸರ್ಗಧಾಮದಲ್ಲಿ ಆಗುತ್ತಿದೆ..
ದಾಂಡೇಲಿ-ಅಣಶಿ ಹುಲಿಧಾಮ ಪ್ರದೇಶದ ಕುಳಗಿ ನಿಸರ್ಗಧಾಮದಲ್ಲಿ ಜನತೆ ಪ್ರವಾಸದ ಅನುಭವ ಪಡೆಯುವ ಜತೆಗೆ ಪರಿಸರ ಪಕ್ಷಿ, ಪ್ರಾಣಿ, ಜೀವ ಸಂಕುಲಗಳ ವೀಕ್ಷಣೆ, ಪರಿಸರದ ಸೃಷ್ಟಿಯ ಅದ್ಭುತ ಆಸ್ವಾದಿಸಲು ವನ್ಯಜೀವಿ ಇಲಾಖೆ ಅಧಿಕಾರಿಗಳು ಅನುಕೂಲ ಮಾಡಿಕೊಟ್ಟಿದ್ದಾರೆ.
ಕುಳಗಿ ನಿಸರ್ಗಧಾಮ ದಾಂಡೇಲಿ ಯಿಂದ ೧೨ ಕಿ. ಮೀ. ಹಾಗೂ ಜೊಯಿಡಾ ದಿಂದ ೧೫ ಕಿ. ಮೀ. ಅಂತರದಲ್ಲಿದೆ.
ಕುಳಗಿಯಲ್ಲಿ ಪರಿಸರದ ನಡುವೆ ಪ್ರವಾಸಿಗರಿಗಾಗಿ ಪ್ಯಾರಾಗೋಲಾ, ಪರಿಸರದ ವಸ್ತುಗಳನ್ನು ಬಳಸಿ, ಡೀಲಕ್ಸ್ ಮಾದರಿಯ ಏಳು ಮತ್ತು ಸಾಮಾನ್ಯ ಮಾದರಿಯ 5 ಕಾಟೇಜ್ಗಳನ್ನು ನಿರ್ಮಿಸ ಲಾಗಿದ್ದು, ಇದಕ್ಕೆ ಕ್ರಮವಾಗಿ 500 ರೂಪಾಯಿ ಮತ್ತು 250 ರೂಪಾಯಿ ನಿಗದಿಪಡಿಸಲಾಗಿದೆ.
ಜತೆಗೆ ಸಮೂಹ ಪ್ರವಾಸಿಗರ ವಸತಿಗೆ ಒಂದೇ ಸೂರಿನಡಿ ಅವಕಾಶ ಕಲ್ಪಿಸಲಾಗಿದೆ. ಪಕ್ಷಿ, ಚಿಟ್ಟೆಗಳ ವೀಕ್ಷಣೆ, ಪ್ರವಾಸಿ ತಾಣಗಳ ಸಂದರ್ಶನ, ಪರಿಸರದ ಅಧ್ಯಯನಕ್ಕೆ ಇದು ಸೂಕ್ತ ಪ್ರದೇಶವಾಗಿದೆ. ದೇಶದಲ್ಲೇ ಅಪರೂಪ ವಾಗುತ್ತಿರುವ ಸಸ್ತನಿಗಳ ಹಾರ್ನ್ಬಿಲ್ ಗಳು ಕಾಣಸಿಗುವುದು ಈ ಪ್ರದೇಶದಲ್ಲೇ. ಜತೆಗೆ ಪ್ರವಾಸಿಗರಿಗೆ ಮಾರ್ಗದರ್ಶಕರಿದ್ದಾರೆ. ನಿಗದಿತ ದರದಲ್ಲಿ ಊಟದ ಸೌಲಭ್ಯ ಇದೆ. ಈ ಪ್ರದೇಶದಲ್ಲಿ ಧೂಮಪಾನ - ಮದ್ಯಪಾನ ನಿಷೇಧ.
ಈ ಪ್ರದೇಶದಲ್ಲಿ ಇಲಾಖೆ ಪ್ರಕೃತಿ ನಿರೂಪಣಾ ಕೇಂದ್ರ ನಿರ್ಮಿಸಿದ್ದು, ಇಲ್ಲಿ ಪ್ರಕೃತಿ ಶಿಕ್ಷಣ ಶಿಬಿರಗಳು ನಡೆಯುತ್ತವೆ. ನಿರೂಪಣಾ ಕೇಂದ್ರ ಪರಿಸರ ಪರಿಚಯಿ ಸುವ ಕೇಂದ್ರವಾಗಿದ್ದು, ಹಾರ್ನ್ಬಿಲ್ ಪ್ರವಾಸಿಗರಿಗೆ ಸ್ಲೈಡ್ ಮೇಲೆ ತಾಣಗಳನ್ನು ತೋರಿಸುವ, ಪಕ್ಷಿ - ಕೀಟ, ಉರಗ, ಗಿಡ, ಮರ, ಅಧ್ಯಯನದ ಮಾದರಿ ಮ್ಯೂಸಿಯಂ ಮತ್ತು ಗ್ರಂಥಾಲಯವೂ ಆಗಿದೆ, ಈ ಪ್ರದೇಶದ ಪಕ್ಕದಲ್ಲಿ ಉತ್ತರ ಕನ್ನಡದ ಬುಡಕಟ್ಟು ಜನಾಂಗದ ಸಂಸ್ಕೃತಿ ಪರಿಚ ಯಿಸುವ ಮಾದರಿಗಳು ನಿರ್ಮಾಣ ವಾಗಿವೆ. ಈಗಾಗಲೇ ಗೌಳಿ ಜನಾಂಗದ ಸಂಸ್ಕೃತಿ ಪರಿಚಯಿಸುವ ಮಾದರಿ ನಿರ್ಮಿ ಸಲಾಗಿದ್ದು, ಮುಂದಿನ ದಿನಗಳಲ್ಲಿ ಕುಣಬಿ, ಹಾಲಕ್ಕಿ, ಸಿದ್ದಿ, ಗಿರಿಜನರ ಸಂಸ್ಕೃತಿಯ ಮಾದರಿಗಳು ರೂಪುಗೊಳ್ಳಲಿವೆ.
ಪ್ರತಿ ವರ್ಷ 20 ಸಾವಿರ ಪ್ರವಾಸಿ ಗರು ಇಲ್ಲಿಗೆ ಭೇಟಿ ನೀಡುತ್ತಿದ್ದು, ವಾರ್ಷಿಕ ಆದಾಯ 15 ಲಕ್ಷ ರೂ. ಗಳಷ್ಟಿದೆ.
ದಾಂಡೇಲಿ - ಅಣಶಿ ಹುಲಿಧಾಮದ, ಕುಳಗಿ ಹಾಗೂ ಕವಳಾ ಗುಹೆಯ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಯಿಂದ 1.50 ಕೋಟಿ ರೂ. ಮಂಜೂರಾ ದ್ದು, ಅದಿನ್ನೂ ಕಾರ್ಯರೂಪಕ್ಕೆ ಬರಬೇಕಿದೆ.
ದಾಂಡೇಲಿ - ಅಣಶಿ ಹುಲಿಧಾಮ ಪ್ರದೇಶದ ವನ್ಯಜೀವಿ ವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ಮನೋಜ ಕುಮಾರ್ ಅವರನ್ನು ಈ ಪ್ರದೇಶದ ಅಭಿವೃದ್ಧಿ ಬಗ್ಗೆ ಕೇಳಿದಾಗ ಇಲ್ಲಿಯವರೆಗೆ ಪ್ರವಾಸಿಗರಿಂದ ಬರುವ ಆದಾಯ ಸರಕಾರಕ್ಕೆ ಸೇರುತ್ತಿತ್ತು, ಇನ್ನುಮುಂದೆ ದಾಂಡೇಲಿ ಹುಲಿ ಸಂರಕ್ಷಣಾ ಸಂಸ್ಥೆಗೆ ಹೋಗಲಿದೆ. ಈ ಹಣವನ್ನು ಇಲ್ಲಿನ ಅಭಿವೃದ್ಧಿಗೆ ಬಳಸಲಾ ಗುತ್ತದೆ. ಸರಕಾರದ ಮುಂದಿನ ಅಭಿವೃದ್ಧಿ ಅನುದಾನದಲ್ಲಿ ಮರ, ಪಕ್ಷಿ, ಹಾರ್ನ್ ಬಿಲ್ ಮತ್ತು ಚಿಟ್ಟೆಗಳ ಪಾರ್ಕ್ ನಿರ್ಮಿ ಸಲಾಗುವುದು. ಪ್ರವಾಸಿಗರಿಗೆ ಹೆಚ್ಚಿನ ಕಾಟೇಜ್ ಹಾಗೂ ಗಾಯಗೊಂಡ ಪ್ರಾಣಿಗಳ, ಆರೈಕೆಗೆ ಪ್ರತ್ಯೇಕ ಪ್ರದೇಶ ನಿರ್ಮಿಸ ಲಾಗುವುದು ಎಂದರು.
ಪಶ್ಚಿಮದ ತಪ್ಪಲಿನ ಈ ಧಾಮ ದೇಶ - ವಿದೇಶದ ಪ್ರಕೃತಿ ಪ್ರಿಯರಿಗೆ ನೆಚ್ಚಿನ ತಾಣ ವಾಗಿರುವುದು ನಿಜಕ್ಕೂ ಪ್ರಶಂಶನೀಯ.
ವರದಿಯ ವಿವರಗಳು |
 |
ಕೃಪೆ : ಗಿರೀಶ್ ಭಾಗ್ವತ್ | ಉದಯವಾಣಿ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-14
|
|
|