ಈದಲ್ ಫಿತ್ರ್ `ಮಾನವ ಮೈತ್ರಿಗೆ ರಮ್ಜಾನ್ ಸಂದೇಶ' |
ಪ್ರಕಟಿಸಿದ ದಿನಾಂಕ : 2008-09-30
`ಈದುಲ್ ಫಿತ್ರ್' ದಾನ ಧರ್ಮಗಳ ಹಬ್ಬ. ಇದು ಬಾಂಧವ್ಯತೆಯನ್ನು ಸುದೃಢ ಗೊಳಿಸುವ ಹಬ್ಬ. ಬಡವ-ಬಲ್ಲಿದ, ಮೇಲು-ಕೀಳು ಎನ್ನದೆ ಪ್ರತಿಯೋರ್ವ ಮುಸಲ್ಮಾನನೂ ಪರಸ್ಪರ ಆಲಿಂಗಿಸಿಕೊಂಡು ಆತ್ಮಿಯರಾಗುವ ಅಪೂರ್ವ ಕ್ಷಣ.
ವಿವಿಧ ಧರ್ಮೀಯರು ವಾಸಿಸುತ್ತಿರುವ ನಮ್ಮ ಭಾರತದಲ್ಲಿ ಹಬ್ಬ ಹರಿದಿನಗಳೆಂದರೆ ಭಾರೀ ಅಗ್ಗ. ವರ್ಷಪೂರ್ತಿ ಒಂದಲ್ಲೊಂದು ಹಬ್ಬವನ್ನು ನಾವು ಆಚರಿಸುತ್ತೇವೆ. ಗಣ್ಯರಿಂದ ಶುಭ ಹಾರೈಕೆಗಳೇನೋ ಹರಿದು ಬರುತ್ತದೆ. ಹಬ್ಬಗಳಿಗಾಗಿ ಕಾಯುತ್ತಿರುವ ಮುಖಂಡರು ಸಂದೇಶ ನೀಡಲು ಕಾತುರರಾಗಿರುತ್ತಾರೆ. ಹಬ್ಬ ಬಂತೆಂದರೆ ನಮ್ಮ ಪೇಟೆ, ಪಟ್ಟಣಗಳಲ್ಲಿ ಜನದಟ್ಟಣೆ, ಜವುಳಿ ಅಂಗಡಿಗಳಲ್ಲಿ ಜನಜಂಗುಳಿ, ತಟ್ಟಿ ಗುಡಿಸಲುಗಳಲ್ಲೂ ತರತರದ ತಿಂಡಿತಿನಸುಗಳು, ಸುತ್ತಮುತ್ತಲೂ ಸುಗಂಧ ದ್ರವ್ಯಗಳ ಸುವಾಸನೆ ಹೊಟ್ಟೆಗೆ ಹಿಟ್ಟಿಲ್ಲದವರ ಜುಟ್ಟಿನಲ್ಲೂ ಮಲ್ಲಿಗೆ ಮೇಲಾಟ. ಹಬ್ಬಗಳೆಂದರೆ ಇದೆಲ್ಲವೂ ಮಾಮೂಲು. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಹಬ್ಬಗಳನ್ನು ಭಾರೀ ಗೌಜಿಯಿಂದ ಆಚರಿಸುತ್ತಾರೆ. ಅಂತವರಿಗೆ ಜೂಜು ಹಬ್ಬದ ಮೋಜು! ಬಾಟಲಿ, ಲಾಟರಿ, ಸಿನೆಮಾ, ಅಶ್ಲೀಲತೆಗೆ ಹಬ್ಬದ ಪ್ರಯುಕ್ತ ಮುಕ್ತ ಪರವಾನಗಿ. ಆದರೆ ಇಂತಹ ಹಬ್ಬ ಆಚರಣೆಗಳಿಂದ ನಮಗೆ ಏನನ್ನೂ ಸಾಧಿಸಲಾಗದು.
ಪಶ್ಚಿಮ ಮಂಡಲದಲ್ಲಿ ಶವ್ವಾಲ್ ಚಂದ್ರದರ್ಶನವು ರಮನಾಳ್ ತಿಂಗಳಿಗೆ ವಿರಾಮ ಹಾಕಿ, ಕೋಟ್ಯಾಂತರ ಮುಸ್ಲಿಮರ ಹೃದಯದಲ್ಲಿ ನವಚೈತನ್ಯದ ಬೆಳಕು ಚಿಮ್ಮುತ್ತದೆ. ತಿಂಗಳು ಪೂರ್ತಿ ಅನ್ನಾಹಾರಗಳನ್ನು, ದೇಹೇಚ್ಛೆಗಳನ್ನು ಕಡಿತಗೊಳಿಸಿ ದೇವರಾಜ್ಞೆಯನ್ನು ಪಾಲಿಸಿ ಪಾಪಮುಕ್ತರಾಗಿ ಪೆರ್ನಾಳ್ ಆಚರಿಸುವಾಗ ಯಾವ ಸತ್ಯವಿಶ್ವಾಸಿಯ ಹೃದಯದಲ್ಲೂ ಸಂತೋಷದ ಸಾಗರ ಹರಿಯದೆ ಇರಲಾರದು. ಒಂದು ತಿಂಗಳ ವ್ರತಾನುಷ್ಠಾನದ ವೇಳೆ ಏನಾದರೂ ತಪ್ಪು ಸಂಭವಿಸಿದ್ದಲ್ಲಿ ಅದನ್ನು ಪರಿಹರಿಸಲಿಕ್ಕೋಸ್ಕರ ಅಲ್ಲಾಹನು ಕಡ್ಡಾಯಗೊಳಿಸಿದ ದಾನವೇ ಫಿತ್ರ್ ಝಕಾತ್ (ಪಿತ್ರ್ಝಕಾತ್).
ಈ ಝಕಾತ್ನಲ್ಲಿ ಸಾಮಾಜಿಕ ಭದ್ಧತೆಯ ಬಗ್ಗೆ ವಿವರಿಸಿ ಹೇಳಬೇಕಾಗಿಲ್ಲ. ಇದ್ದವರಂತೆ ಇಲ್ಲದವರು ಯಾವುದೇ ಅಡ್ಡಿ ಆತಂಕಗಳಿಲ್ಲದೇ ಪೆರ್ನಾಳ್ ಆಚರಿಸಬೇಕೆಂಬುದೇ ಫಿತ್ರ್ ಝಕಾತಿನ ಉದ್ದೇಶ. ಆದರೆ ಇಂದು ಈ `ಫಿತ್ರ್ ಝಕಾತ್' ಎಂಬುದು ಭಿಕ್ಷಾಟನೆಗೆ ಮತ್ತೊಂದು ಹೆಸರಾಗಿ ಪರಿಣಮಿಸಿದೆ. ಬಡವರಿದ್ದಲ್ಲಿಗೆ ತಲುಪಿಸಬೇಕಾದ ಝಕಾತನ್ನು ಪ್ರತಿಷ್ಠೆ ಮತ್ತು ಶ್ರೀಮಂತಿಕೆಯ ಪ್ರದರ್ಶನಕ್ಕೆ ಬಳಸುವುದು ಸರಿಯೆನಿಸದು. ಸತ್ಯ ಹೇಳುವುದಾದರೆ ಇಸ್ಲಾಮಿನ ಝಕಾತ್ ವ್ಯವಸ್ಥೆಯು (ಎಲ್ಲಾ ತರದ ಝಕಾತ್ಗಳೂ ಸೇರಿ) ಮಾನವರಿಗೆ ಅಲ್ಲಾಹನ ಒಂದು ಕೊಡುಗೆ ಎಂದೇ ಹೇಳಬೇಕು. ಶಿಷ್ಠಾಚಾರ ಪ್ರಕಾರ ಇಸ್ಲಾಮೀ ಝಕಾತನ್ನು ಜಾರಿಗೊಳಿಸಿದರೆ ಇಲ್ಲಿ ಯಾತನೆ ಅನುಭವಿಸುವ ಬಡವರನ್ನು ಕಾಣಸಿಗಲಾರದು. ಯಾವುದೇ ಸರಕಾರದ ಯೋಜನೆಗಳು ಇಲ್ಲಿ ಅಪ್ರಸ್ತುತಗೊಳ್ಳುವುದು. ಆದರೆ ನಮಾಝ್ ನಿರ್ವಹಿಸುವ ಕಟ್ಟಾ ಮುಸ್ಲಿಮನೂ ಸಹಾ ಝಕಾತ್ನ ವಿಷಯದಲ್ಲಿ ಅಷ್ಟೊಂದು ಕಾಳಜಿ ವಹಿಸುವುದಿಲ್ಲವೆಂದು ಮಾತ್ರವಲ್ಲ ಅದರ ಬಗ್ಗೆ ಗಮನ ಹರಿಸುವುದೇ ಇಲ್ಲ. ಪವಿತ್ರ ಕುರ್ಆನಿನಲ್ಲಿ ನಮಾಝ್ಗೆ ಎಷ್ಟು ಪ್ರಾಮುಖ್ಯ ಕಲ್ಪಿಸಲಾಗಿದೆಯೋ ಅಷ್ಟೇ ಪ್ರಾಧಾನ್ಯತೆ ಝಕಾತಿಗೂ ಕಲ್ಪಿಸಲಾಗಿದೆಯೆಂದು ಕುರಾನಿನ ಬಗ್ಗೆ ಆಳ ಜ್ಞಾನ ಇಲ್ಲದವನಿಗೂ ಗೊತ್ತಿರುವ ವಿಚಾರ.
``ಸ್ವಲಾತ್" (ನಮಾಝ್) ನಿರ್ವಹಿಸಿರಿ ಎಂದು ಹೇಳಿದ ಕಡೆಯಲೆಲ್ಲಾ ಝಕಾತ್ ಕೊಟ್ಟು ಬಿಡಿರಿ ಎಂದೂ ಕುರ್ಆನಿನಲ್ಲಿ ಹಲವು ಕಡೆ ಹೇಳಲಾಗಿದೆ. ಪವಿತ್ರ ರಂಝಾನ್ ಮುಗಿಸಿ ಶವ್ವಾಲ್ಗೆ ಪಾದಾರ್ಪಣೆ ಮಾಡುತ್ತಿರುವ ನಾವು ಪೆರ್ನಾಳ್ ಆಚರಣೆಯೊಂದಿಗೆ ಆಶಾಧನೆಗೆ ವಿರಾಮ ಹಾಕುವ ಪರಿಪಾಠ ನಿಲ್ಲಬೇಕುಇಲ್ಲದಿದ್ದರೆ ಈ ತನಕ ಮಾಡಿದ ಆಚರಣೆಯೆಲ್ಲವೂ ನೀರಿನಲ್ಲಿಟ್ಟ ಹೋಮದಂತೆ ನಿಷ್ಪಲವಾಗುವುದು. ಬಡವರೊಂದಿಗಿನ ಕಾಳಜಿ, ಸ್ನೇಹ, ಸೌಹಾರ್ದತೆ, ತ್ಯಾಗ, ಪೂರ್ವಿಕರ ಸ್ಮರಣೆ, ಕೌಟುಂಬಿಕ ಐಕ್ಯತೆ, ವಿಶ್ವಸಾಹೋದರ್ಯತೆ, ಸಾಮಾಜಿಕ ಚಿಂತನೆ ಇದೆಲ್ಲವೂ ಈದ್ ಆಚರಣೆಯ ಹಿಂದಿನ ಸಂದೇಶಗಳಾಗಿವೆ.
ಶಾಂತಿಯುತ ವಾತಾವರಣದಲ್ಲಿ ಭಕ್ತಿ, ನೆಮ್ಮದಿಯಿಂದ ಧಾರ್ಮಿಕ ಸೀಮೆದಾಟದೆ ಆಚರಿಸುವ ಹಬ್ಬಗಳಿಂದ ಮಾತ್ರ ಉದ್ದೇಶಿತ ಫಲ ಲಭ್ಯ.
ಹಬ್ಬಗಳು ಆಚರಿಸುವುದಕ್ಕೆ ಅದರದ್ದೇ ಆದ ಹಿನ್ನೆಲೆ ಮತ್ತು ಕಾರಣವೂ ಇರುತ್ತದೆ. ಇಂತಹ ಹಬ್ಬಗಳ ಪೈಕಿ ಅರ್ಥಪೂರ್ಣವಾದ ಮತ್ತು ನೈಜ ಹಿನ್ನಲೆಯಿರುವ ಹಬ್ಬಗಳೆಂದರೆ ಇಸ್ಲಾಮ್ ಧರ್ಮದಲ್ಲಿ ಆಚರಿಸಲ್ಪಡುವ ಎರಡು ಹಬ್ಬಗಳಾದ ಈದುಲ್ ಫಿತ್ರ್ ಮತ್ತು ಈದುಲ್ ಅಝ್ಹಾ. ಈದುಲ್ ಫಿತ್ರ್ ಆಚರಿಸುವುದರಲ್ಲಿ ಅಡಕಗೊಂಡಿರುವ ಸಂಭ್ರಮ, ಚೈತನ್ಯತೆಯನ್ನು ವಿವರಿಸಿ ಹೇಳಬೇಕಾಗಿಲ್ಲ. ನಿಜವಾದ ಅರ್ಥದಲ್ಲಿರುವ ಹಬ್ಬವೆಂದರೆ ಅದು ಈದುಲ್ ಪಿತ್ರ್. ಮಾಸಪೂರ್ತಿ ಅನ್ನಾಹಾರಗಳನ್ನು ತೊರೆದು ಉಪವಾಸ ಆಚರಿಸಿ `ರಮಳಾನ್' ತಿಂಗಳಿಗೆ ವಿದಾಯ ಹೇಳುತ್ತಿರುವಾಗ ಯಾವುದೇ ಒಬ್ಬ ಸತ್ಯ ವಿಶ್ವಾಸಿಯ ಹೃದಯದಲ್ಲಿ ಪ್ರಕಟಗೊಳ್ಳುವ ಸಂಭ್ರಮಕ್ಕೆ ಮಿತಿ ಇರಲಾರದು. ರಮಳಾನಿನಲ್ಲಿ ಗಳಿಸಿದ ನವಚೈತನ್ಯವನ್ನು ಕಾಯ್ದುಕೊಳ್ಳುವ ಪ್ರತಿಜ್ಞೆಯೇ ಈ ಈದುಲ್ ಫಿತ್ರ್ನ ಮುಖ್ಯ ಅಂಶ. ಅಲ್ಲದೇ ಕೇವಲ ತೋರಿಕೆಯ ಡಂಭಾಚಾರಕ್ಕೆ ಇಲ್ಲಿ ಇಂಬು ಕೊಡಲಾಗುವುದಿಲ್ಲ. ರಮ್ಜಾನಿನಲ್ಲಿ ಆರಾಧನೆ ಸಲ್ಲಿಸಲು ಅವಕಾಶ ಕಲ್ಪಿಸಿದ ಅಲ್ಲಾಹನಿಗೆ ಕೃತಜ್ತೆ ಸಲ್ಲಿಸುವುದು ಇಲ್ಲಿ ಮುಖ್ಯ ಅದಕ್ಕಾಗಿ ಪ್ರತ್ಯೇಕ ನಮಾಝ್ ಮತ್ತು ಕುತ್ಬಾ ಪಾರಾಯಣವಿದೆ.
ಕೌಟುಂಬಿಕ ಸಂದರ್ಶನ, ಅತಿಥಿ ಸತ್ಕಾರ, ಪರಸ್ಪರ ಆಲಿಂಗನ, ಹಸ್ತದಾನ ಇವೆಲ್ಲವೂ ಹಬ್ಬದ ಒಂದು ಭಾಗ. ಹಬ್ಬದ ನೆಪದಲ್ಲಾದರೂ ಪರಸ್ಪರ ವೈರುತ್ವದಲ್ಲಿರುವವರು ತಪ್ಪೊಪ್ಪಿ ಕೊಂಡು ಪರಸ್ಪರ ಅಪ್ಪಿಕೊಂಡರೆ ಹಬ್ಬವು ಸಾರ್ಥಕವೆನಿಸುತ್ತದೆ. ಅಂದಿ ನಿಂದ ಅನ್ಯೋನ್ಯತೆಯ ಒಂದು ಹೊಸ ಯುಗವೇಆರಂಭ ಗೊಂಡಂತಾಗುತ್ತದೆ. ಕೇವಲ ಬಿರಿಯಾನಿ ತಿಂದುಂಡು ತೇಗಿದರೆ ಅಥವಾ ತರತರದ ಡಿಸೈನ್ಗಳ ವಸ್ತ್ರ ಗಳನ್ನು ಧರಿಸಿದ ಮಾತ್ರಕ್ಕೆ ಅದರಿಂದ ಏನೂ ಫಲವಿಲ್ಲ. ಎಲ್ಲದಕ್ಕೂ ಮುಖ್ಯ ವಾಗಿ ರಮ್ಜಾನಿನಲ್ಲಿ ನಾವು ಗಳಿಸಿದ ನವಚೈತನ್ಯ ನಷ್ಟವಾಗದಂತೆ ಜಾಗ್ರತೆ ವಹಿಸುವ ಜಾಯಮಾನ ಬೆಳೆಸಿಕೊಳ್ಳ ಬೇಕಾಗಿದೆ. ಸತ್ಯವಿಶ್ವಾಸಿಯ ಮಟ್ಟಿಗೆ ಈ ಹಬ್ಬವು ಪುರಸ್ಕಾರದ ದಿನವಾಗಿರು ತ್ತದೆ. ಪ್ರವಾದಿ (ಸ) ಹೀಗೆ ಹೇಳಿರುತ್ತಾರೆ. `ಈದುಲ್ ಫಿತ್ರ್' ದಿನದಂದು ದೇವಚಾರರು ಬೀದಿಗಳ ಇಕ್ಕೆಡೆಗಳಲ್ಲಿ ನಿಂತು ಸ್ವಾಗತ ಕೋರುತ್ತಾರೆ. ನಿನ್ನೆಯ ತನಕ ವ್ರತಧಾರಿಗಳಾಗಿದ್ದವರೇ ಅತೀ ಉದಾರಿಯಂತೆ ನಿಮ್ಮ ಪ್ರಭುವಿನ ಕಡೆಗೆ ನೀವು ನಡೆಯಿರಿ. ಅಲ್ಲಾಹನು ಏನನ್ನು ಆಜ್ಞೆ ಮಾಡಿದ್ದಾನೋ ಅವುಗಳನ್ನೆಲ್ಲ ನೀವು ಚೆನ್ನಾಗಿ ಪಾಲಿಸಿ ದ್ದೀರಿ. ಅದಕ್ಕಾಗಿ ಇಂದು ನಿಮಗೆ ಪುರಸ್ಕಾರ ನೀಡಿ ಗೌರವಿಸ ಲಾಗುತ್ತದೆ' ಎಂದು ದೇವಾಚಾರರು ಕೂಗಿ ಕರೆಯುತ್ತಾರೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2008-09-30
|
|
| manna iliyas udupi, Bahrain | 2008-10-01 | | ಎಲ್ಲರಿಗೂ ನಮ್ಮ ಈದ್ ಹಬ್ಬದ ಹಾಗು ನವರಾತ್ರಿ ಶುಭಾಶಯಗಳು wish u all to u happy eid and navarathri |
| Siddiq , Mangalore | 2008-10-01 | | ಎಲ್ಲರಿಗೂ ನಮ್ಮ ಈದ್ ಹಬ್ಬದ ಹಾಗು ನವರಾತ್ರಿ ಶುಭಾಶಯಗಳು |
|