ಕಸಾಪಗೆ ಪರ್ಯಾಯವಾಗಿ ಕರ್ನಾಟಕ ಸಾಹಿತ್ಯ ಪರಿಷತ್! |
ಪ್ರಕಟಿಸಿದ ದಿನಾಂಕ : 2008-09-29
ಬೆಂಗಳೂರು, ಸೆ.೨೮ .‘ಕನ್ನಡ- ಕನ್ನಡಿಗ- ಕರ್ನಾಟಕ’ ಪರಿಕಲ್ಪನೆ ಸಂಕ್ರಮಣ ಪರಿಸ್ಥಿತಿಯಲ್ಲಿರುವ ಸಂದರ್ಭದಲ್ಲೇ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆ ಎಂಬ ಹೆಗ್ಗಳಿಕೆಯ ಕನ್ನಡ ಸಾಹಿತ್ಯ ಪರಿಷತ್ತಿಗೆ ಪರ್ಯಾಯ ಎಂಬಂತೆ ಮತ್ತೊಂದು ಸಂಸ್ಥೆ ತಲೆಯೆತ್ತಲು ಹೊರಟಿದೆ.
ಅದು ‘ಕರ್ನಾಟಕ ಸಾಹಿತ್ಯ ಪರಿಷತ್ತು’. ಅರ್ಥಾತ್ ಮತ್ತೊಂದು ಕಸಾಪ.
ಕನ್ನಡದ ಘಟಾನುಘಟಿಗಳು ಸೇರಿಕೊಂಡು ರೂಪಿಸುತ್ತಿರುವ ಈ ಕರ್ನಾಟಕ ಸಾಹಿತ್ಯ ಪರಿಷತ್ತಿನ ಸಲಹಾ ಸಮಿತಿಯಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ|ಯು. ಆರ್.ಅನಂತಮೂರ್ತಿ, ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಮೊದಲಾದವರಿದ್ದಾರೆ.
ಅಂದ ಹಾಗೆ ಬರುವ ಅಕ್ಟೋಬರ್ 2 ರಂದು ಅಸ್ತಿತ್ವಕ್ಕೆ ಬರುತ್ತಿರುವ ಈ ಕರ್ನಾಟಕ ಸಾಹಿತ್ಯ ಪರಿಷತ್ತಿನ ರೂವಾರಿ ಹಾಗೂ ರಾಜ್ಯಾಧ್ಯಕ್ಷ ಡಾ|ಸಿ.ವೀರಣ್ಣ. ಕಳೆದ ತಿಂಗಳು ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋಲುಂಡವರು. ಹಿಂದೆ ಒಂದು ಬಾರಿ ಪರಿಷತ್ತಿನ ಗೌರವ ಕಾರ್ಯದರ್ಶಿಯ ಜವಾಬ್ದಾರಿಯನ್ನೂ ನಿರ್ವಹಿಸಿದವರು.
ಈ ನೂತನ ಪರಿಷತ್ತಿನ ಸಾಂಸ್ಥಿಕ ರಚನೆ ಕಾರ್ಯ ಎಷ್ಟು ತ್ವರಿತ ಹಾಗೂ ವ್ಯವಸ್ಥಿತವಾಗಿ ನಡೆದಿದೆ ಎಂದರೆ, ಈಗಾಗಲೇ ರಾಜ್ಯ ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಜತೆಗೆ ರಾಜ್ಯದ 29 ಜಿಲ್ಲೆಗಳಿಗೂ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಈ ಜಿಲ್ಲಾಧ್ಯಕ್ಷರ ಪೈಕಿ ಬಹುತೇಕರು ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ನಿಕಟವಾಗಿ ಗುರುತಿಸಿಕೊಂಡವರು. ಹಲವರು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರೂ ಆಗಿದ್ದರು. ಇನ್ನು ಕೆಲವರು ಸ್ಪರ್ಧಿಸಿ ಸೋತಿದ್ದಾರೆ...
ಕರ್ನಾಟಕ ಸಾಹಿತ್ಯ ಪರಿಷತ್ತು ಎಂಬ ಹೆಸರು ಮೂಲತಃ ಈಗಿನ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಹೆಸರೇ ಆಗಿರುವುದು ಅರ್ಥಗರ್ಭಿತ ವಾಗಿದೆ. ಶತಮಾನದ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಮೊದಲು ಕರ್ಣಾಟಕ ಸಾಹಿತ್ಯ ಪರಿಷತ್ತು ಎಂದೇ ನಾಮಕರಣ ಮಾಡಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಈ ‘ಕರ್ಣಾಟಕ’ ಹಾಗೂ ‘ಕರ್ನಾಟಕ’ ಪದಗಳ ಬಳಕೆಯ ಗೊಂದಲದ ನಡುವೆ ಅಂತಿಮವಾಗಿ ಕನ್ನಡ ಸಾಹಿತ್ಯ ಪರಿಷತ್ತು ಎಂದು ಹೆಸರಿಸಲಾಯಿತು.
ಎಲ್ಲವೂ ಗುಪ್ತ:
ಇಂಥದೊಂದು ಸಂಸ್ಥೆ ಅಥವಾ ಸಂಘಟನೆ ಅಸ್ತಿತ್ವಕ್ಕೆ ಬರುತ್ತಿರುವ ಬಗ್ಗೆ ಸಾಂಸ್ಕೃತಿಕ ವಲಯದಲ್ಲೇ ಹೆಚ್ಚಿನ ಮಾಹಿತಿ ಇಲ್ಲ. ಕಾರಣ ಎಲ್ಲವೂ ಗುಪ್ತ್ ಗುಪ್ತ್.
ಬರುವ ಮೂರು ದಿನಗಳ ಅಂತರದಲ್ಲಿ ಅಂದರೆ, ಅಕ್ಟೋಬರ್ 2 ರಂದು ಉದ್ಘಾಟನಾ ಕಾರ್ಯಕ್ರಮ ನಡೆಯುತ್ತಿದ್ದರೂ ಈವರೆಗೆ ನಿಗದಿತ ಕೆಲವರನ್ನು ಹೊರತುಪಡಿಸಿ ಇನ್ನುಳಿದವರಿಗೆ ಆಹ್ವಾನ ಪತ್ರ ತಲುಪಿಲ್ಲ. ಮಾಧ್ಯಮಗಳಿಗೂ ಮಾಹಿತಿ ಕೊಟ್ಟಿಲ್ಲ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅತಿಥಿಗಳು, ಪದಾಧಿಕಾರಿಗಳು, ಸಲಹಾ ಸಮಿತಿ ಸದಸ್ಯರು, ಜಿಲ್ಲಾಧ್ಯಕ್ಷರು ಹಾಗೂ ಹಿತೈಷಿಗಳಿಗೆ ಮಾತ್ರ ಆಹ್ವಾನ ಪತ್ರ ನೀಡಲಾಗಿದೆ.
ಪರಿಷತ್ತು ಉದ್ಘಾಟನೆ ಆಗುವ ಮುನ್ನವೇ ಗೊಂದಲ ಹಾಗೂ ವಿವಾದಕ್ಕೆ ಎಡೆ ಮಾಡಿಕೊಟ್ಟೀತು ಎಂಬ ಆತಂಕದಿಂದಲೇ ಈ ವಿಷಯವನ್ನು ಸಾಧ್ಯವಾದಷ್ಟು ರಸಹ್ಯವಾಗಿರಿಸಲು ಪ್ರಯತ್ನಿಸಲಾಗುತ್ತಿದೆ ಎನ್ನಲಾಗಿದೆ.
ವಿವಾದಕ್ಕೆ ನಾಂದಿ?: ಶತಮಾನದ ಭವ್ಯ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವದಲ್ಲಿ ಇರುವಾಗ ಈ ಕರ್ನಾಟಕ ಸಾಹಿತ್ಯ ಪರಿಷತ್ತು ಹೆಸರಿನ ಮತ್ತೊಂದು ಸಂಸ್ಥೆ ಹುಟ್ಟುಹಾಕುವ ಮೂಲಕ ವಿವಾದಕ್ಕೆ ನಾಂದಿ ಹಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಕನ್ನಡಪ್ರಭಕ್ಕೆ ಲಭಿಸಿದ ಮಾಹಿತಿ ಅನುಸಾರ, ಈಗಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಪರ್ಯಾಯವಾಗಿಯೇ ಈ ಕರ್ನಾಟಕ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬರುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ತನ್ನ ಕ್ರಿಯಾಶೀಲತೆ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಇಂಥದೊಂದು ಪರ್ಯಾಯ ಸಂಸ್ಥೆ ಅಗತ್ಯ ಎಂಬ ಪ್ರತಿಪಾದನೆಯನ್ನೂ ಸಂಘಟಕರು ಹೊಂದಿದ್ದಾರೆ.
ಅ.2ರಂದು ಉದ್ಘಾಟನೆ-ವಿಚಾರ ಸಂಕಿರಣ:
ಬರುವ ಅಕ್ಟೋಬರ್ ೨ರ ಗಾಂಧಿ ಜಯಂತಿ ದಿನದಂದು ಈ ನೂತನ ಕರ್ನಾಟಕ ಸಾಹಿತ್ಯ ಪರಿಷತ್ತು ಅಧಿಕೃತವಾಗಿ ಅಸ್ತಿತ್ವಕ್ಕೆ ಬರಲಿದೆ.
ನಗರದ ಸೆಂಟ್ರಲ್ ಕಾಲೇಜು ಆವರಣದ ಸೆನೆಟ್ ಹಾಲ್ನಲ್ಲಿ ನಡೆಯುವ ಉದ್ಘಾಟನಾ ಸಮಾರಂಭದ ಅಂಗವಾಗಿ ವಿಚಾರ ಸಂಕಿರಣವನ್ನೂ ಹಮ್ಮಿಕೊಳ್ಳಲಾಗಿದೆ.
ಒಂದನೇ ವಿಚಾರಗೋಷ್ಠಿಯ ವಿಷಯಗಳು- ಸೃಜನಶೀಲತೆ:ಸಮಕಾಲೀನ ಸಮಾಜದ ಸವಾಲು, ಸೃಜನಶೀಲತೆ:ಧರ್ಮನಿರಪೇಕ್ಷತೆ, ಸೃಜನಶೀಲತೆ: ಜಾತಿ ಮತ್ತು ಲಿಂಗಭೇದ. ಎರಡನೇ ವಿಚಾರಗೋಷ್ಠಿಯ ವಿಷಯಗಳು- ಕೃತಿಯ ಅಂಕಿತ ಮತ್ತು ಪಠ್ಯ ಬದಲಾವಣೆ, ಸಂಶೋಧನೆಯಲ್ಲಿ ಮರೆಯಾಗುತ್ತಿರುವ ಸತ್ಯನಿಷ್ಠೆ, ಸಂಸ್ಕೃತಿ ಸಂರಕ್ಷಣೆ-ಪ್ರಗತಿಪರ ವಿಚಾರಗಳ ಮುಖಾಮುಖಿ.
ಒಟ್ಟು ಎರಡು ವಿಚಾರಗೋಷ್ಠಿಗಳ ಪೈಕಿ ಒಂದಕ್ಕೆ ಖ್ಯಾತ ಜಾನಪದ ತಜ್ಞ ಪ್ರೊ|ಡಿ.ಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದರೆ, ಇನ್ನೊಂದಕ್ಕೆ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುತ್ತಿದ್ದಾರೆ.
ಕರ್ನಾಟಕ ಸಾಹಿತ್ಯ ಪರಿಷತ್ತಿನ ಸಂಕಲ್ಪ ಮಹಾಕವಿ ಪಂಪನ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಮಾತು ಕನ್ನಡನಾಡಿನ ಬಹುಮುಖೀ ಚಿಂತನೆ ಮತ್ತು ಸಂಸ್ಕೃತಿಯ ಸಾರಸರ್ವಸ್ವ. ಈ ನೆಲೆಗಟ್ಟಿನಲ್ಲಿ ಆಲೋಚಿಸಿ, ಕ್ರಿಯಾಶೀಲವಾಗುವುದು ಕರ್ನಾಟಕ ಸಾಹಿತ್ಯ ಪರಿಷತ್ತಿನ ಸಂಕಲ್ಪ.
ನೂತನ ಕಸಾಪ ಪದಾಧಿಕಾರಿಗಳು ಅಧ್ಯಕ್ಷ: ಡಾ.ಸಿ.ವೀರಣ್ಣ ಕಾರ್ಯಾಧ್ಯಕ್ಷ: ಸಿ.ಎಚ್.ಹನುಮಂತರಾಯ ಉಪಾಧ್ಯಕ್ಷರು: ಪ್ರೊ.ಸಿದ್ದಗಂಗಯ್ಯ ಕಂಬಾಳು, ಪ್ರೊ.ಚನ್ನಣ್ಣ ವಾಲೀಕಾರ, ಡಾ.ಎಚ್.ಎಸ್. ಗೋಪಾಲರಾವ್, ಎಚ್.ಆರ್.ಜಯರಾಮ್ ಕೋಶಾಧ್ಯಕ್ಷ: ಬಿ.ಎಸ್.ಕೆಂಪರಾಜು
ಪ್ರಧಾನ ಕಾರ್ಯದರ್ಶಿಗಳು: ಡಾ|ನಾಗರಾಜ್ ನೀರಗುಂದ, ಎಲ್.ಎನ್.ಮುಕುಂದರಾಜ್ ಜಂಟಿ ಕಾರ್ಯದರ್ಶಿಗಳು: ಫಾಲನೇತ್ರ, ಎಂ.ಉಪ್ಪಿನ ಸಂಘಟನಾ ಕಾರ್ಯದರ್ಶಿಗಳು: ಚಂದ್ರಧರ, ಡಾ|ಬಿ.ಗಣೇಶ್
ವರದಿಯ ವಿವರಗಳು |
 |
ಕೃಪೆ : ವಿಜಯ್ ಮಲಗಿಹಾಳ | ಕನ್ನಡಪ್ರಭ ವಾರ್ತೆ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-09-29
|
|
|