|
ಪ್ರಕಟಿಸಿದ ದಿನಾಂಕ : 2008-09-24
ಶಿಶುನಾಳ ಶರೀಫರು ತಮ್ಮ ತತ್ವಪದಗಳಿಂದಾಗಿ ಕರ್ನಾಟಕದ ತುಂಬ ಖ್ಯಾತ ರಾಗಿದ್ದಾರೆ. ಇವರ ಜೀವನದ ವಿವರಗಳು ಇಂತಿವೆ:
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನಲ್ಲಿರುವ ಶಿಶುನಾಳವು ಈಗಲೂ ಸಹ ಒಂದು ಸಣ್ಣಹಳ್ಳಿ. ಈ ಹಳ್ಳಿಯಲ್ಲಿ ದೇವಕಾರ ಮನೆತನದ ಇಮಾಮ ಹಜರತ್ ಸಾಹೇಬ ಹಾಗು ಅವರ ಹೆಂಡತಿ ಹಜ್ಜೂಮಾ ದಂಪತಿಗಳು ಜೀವಿಸುತ್ತಿದ್ದರು.
ಈ ದಂಪತಿಗಳಿಗೆ ಅನೇಕ ವರ್ಷಗಳವರೆಗೆ ಮಕ್ಕಳಿಲ್ಲದ್ದರಿಂದ, ಹುಲಗೂರಿನಲ್ಲಿದ್ದ ಸಂತ ಖಾದರ ಷಾವಲಿ ಸಮಾಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅದರ ಫಲವಾಗಿ ಕ್ರಿ.ಶ. 1819 ನೆಯ ಇಸವಿಯ ಮಾರ್ಚ ತಿಂಗಳಿನ 7 ನೆಯ ದಿನಾಂಕದಂದು ಮಹಮ್ಮದ ಶರೀಫ ಜನಿಸಿದರು.
ಶರೀಫರು ಶಿಶುನಾಳದಲ್ಲಿಯೇ ಇದ್ದ ಕೂಲಿಮಠದಲ್ಲಿ ಕಲಿತು ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬಳಿಕ ಶಿಶುನಾಳದ ಅಕ್ಕಪಕ್ಕದಲ್ಲಿದ್ದ ಮಂಡಿಗನಾಳ, ಕ್ಯಾಲಕೊಂಡ, ಪಾಣಿಗಟ್ಟಿ, ಎರಿಬೂದಿಹಾಳ, ಗುಂಜಳ ಹಳ್ಳಿಗಳ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲವು ವರ್ಷ ಕೆಲಸ ಮಾಡಿದರು.
ಕೆಲ ಕಾಲಾನಂತರ ಕೆಲಸ ಬಿಟ್ಟ ಶರೀಫರು ತಮ್ಮ ಹಳ್ಳಿಯಲ್ಲಿಯೇ ಆಧ್ಯಾತ್ಮ ಚಿಂತನೆಯಲ್ಲಿ ಮಗ್ನರಾಗಿದ್ದರು. ತಮ್ಮ ಮನೆಯ ಕಟ್ಟೆಯ ಮೇಲೆ ಕುಳಿತುಕೊಂಡು ಆಧ್ಯಾತ್ಮ ಚರ್ಚೆಯಲ್ಲಿ ತೊಡಗಿರುತ್ತಿದ್ದರು.
ಈ ಸಮಯದಲ್ಲಿ ಅವರಿಗೆ ಕಳಸದ ಗೋವಿಂದ ಭಟ್ಟರ ಭೆಟ್ಟಿಯಾಯಿತು. ಗೋವಿಂದ ಭಟ್ಟರಿಂದ ಶರೀಫರಿಗೆ ಉಪದೇಶವಾಯಿತು. ಸ್ವಜಾತಿ ಬಾಂಧವರಿಗೆ ಇದು ಸರಿ ಬರಲಿಲ್ಲ. ಆದರೆ ಶರೀಫರು ತಮ್ಮ ಗುರುವಿನ ಸಂಗವನ್ನು ಬಿಡಲಿಲ್ಲ.
ತಮ್ಮ ಗುರುವನ್ನು ಶರೀಫರು ಹೀಗೆ ವರ್ಣಿಸುತ್ತಾರೆ:
ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ ||ಪಲ್ಲ||
ಕರ ಪಿಡಿದು ಎನ್ನ ಕರಣದೊಳಗೆ ಮೊದಲು ವರಮಂತ್ರ ಬೋಧಿಸಿ ಕರವಿಟ್ಟು ಶಿರದೊಳು ||೧||
ಮಸ್ತಕ ಪಿಡಿದೆತ್ತಿ ಹಸ್ತದಿ ತರ್ಕೈಸಿ ದುಸ್ತರ ಭವಬಾಧೆ ಕಸ್ತು ಬಿಸಾಕಿದಿ ||೨||
ಗುರುವರ ಗೋವಿಂದ ಪರಮಗಾರುಡಿಗ ನೀ— ನಿರುತಿಹೆ ತಿಳಿಯದು ನರರಿಗೆ ಪರಿಯಿದು ||೩||
ಕೆಲಕಾಲದ ನಂತರ ಶರೀಫರಿಗೆ ಕುಂದಗೋಳದ ನಾಯಕ ಮನೆತನದ ಫಾತಿಮಾಳೊಡನೆ ಮದುವೆಯಾಯಿತು.
ಶರೀಫರಿಗೆ ತಮ್ಮ ಹೆಂಡತಿಯ ಬಗೆಗಿರುವ ಮರ್ಯಾದೆಯ ಭಾವವು ಅವರು ರಚಿಸಿದ ಈ ಹಾಡಿನಲ್ಲಿ ಕಂಡುಬರುತ್ತದೆ:
ನನ್ನ ಹೇಣ್ತೆ ನನ್ನ ಹೇಣ್ತೆ ನಿನ್ನ ಹೆಸರೇನ್ಹೇಳಲಿ ಗುಣವಂತೆ ||ಪಲ್ಲ||
ಘನಪ್ರೀತಿಲೆ ಈ ತನುತ್ರಯದೊಳು ದಿನ ಅನುಗೂಡೂನು ಬಾ ಗುಣವಂತೆ ||ಅನುಪಲ್ಲ||
ಮೊದಲಿಗೆ ತಾಯ್ಯಾದಿ ನನ್ನ ಹೇಣ್ತೆ ಮತ್ತೆ ಸದನಕ ಸೊಸಿಯಾದಿ ನನ್ನ ಹೇಣ್ತೆ ಮತ್ತೆ ಮುದದಿಂದ ಮೋಹಿಸಿ ಮದುವ್ಯಾದವನಿಗೆ ಮಗಳೆಂದೆನಿಸಿದೆ ನನ್ನ ಹೇಣ್ತೆ ||೧||
ಅತ್ತಿಗಿ ನಾದುನಿ ನನ್ನ ಹೇಣ್ತೆ ನಮ್ಮತ್ಯಾಗಿ ನಡಿದೀಯೇ ನನ್ನ ಹೇಣ್ತೆ ತುತ್ತು ನೀಡಿ ಎನ್ನೆತ್ತಿ ಆಡಿಸಿದಿ ಹೆತ್ತವ್ವನೆನಸಿದೆ ನನ್ನ ಹೇಣ್ತೆ ಚಿಕ್ಕಮ್ಮನ ಸರಿ ನೀ ನನ್ನ ಹೇಣ್ತೆ ಎನಗ ತಕ್ಕವಳೆನಿಸಿದೆ ನನ್ನ ಹೇಣ್ತೆ ||೨||
ಅಕ್ಕರದಲ್ಲಿ ಅನಂತಕಾಲಾ ನಮ್ಮ ಅಕ್ಕಾಗಿ ನಡೆದೆಲ್ಲ ನೀ ನನ್ನ ಹೇಣ್ತೆ ಬಾಳೊಂದು ಚಲ್ವಿಕೆ ನನ್ನ ಹೇಣ್ತೆ ಆಳಾಪಕೆಳಸಿದೆ ನನ್ನ ಹೇಣ್ತೆ ಜಾಳಮಾತಲ್ಲವು ಜಗದೊಳು ಮೋಹಿಸಿ ಸೂಳೆ ಎಂದೆನಿಸಿದೆ ನನ್ನ ಹೇಣ್ತೆ ||೩||
ಮಂಗಳರೂಪಳೆ ನನ್ನ ಹೇಣ್ತೆ ಅರ್ಧಾಂಗಿಯೆನಿಸಿದೆ ನನ್ನ ಹೇಣ್ತೆ ಶೃಂಗಾರದಿ ಸವಿ ಸಕ್ಕರೆ ಉಣಿಸುವ ತಂಗೆಂದೆನಬೇಕ ನನ್ನ ಹೇಣ್ತೆ ಕುಶಲದಿ ಕೂಡಿದ ನನ್ನ ಹೇಣ್ತೆ ವಸುಧಿಯೊಳು ಶಿಶುನಾಳಧೀಶನಡಿಗೆ ಹೆಣ್ಣು ಶಿಶುವಾಗಿ ತೋರಿದಿ ನನ್ನ ಹೇಣ್ತೆ ನಿನ್ನ ಹೆಸರೇನು ಹೇಳಲಿ ಗುಣವಂತೆ ||೪||
ಶರೀಫರ ಸಂಸಾರದಲ್ಲಿ ಇಷ್ಟು ಚೆನ್ನಾಗಿ ಹೊಂದಿಕೊಂಡದ್ದಷ್ಟೇ ಅಲ್ಲ, ಅವರ ಹೆಂಡತಿ ಅವರ ಆಧ್ಯಾತ್ಮ ಸಾಧನೆಯಲ್ಲಿಯೂ ಅವರಿಗೆ ಜೊತೆಗಾತಿಯಾಗಿರಬಹುದು.
“ಘನಪ್ರೀತಿಲೆ ಈ ತನುತ್ರಯದೊಳು ದಿನ ಅನುಗೂಡೂನು ಬಾ ಗುಣವಂತೆ” ಎನ್ನುವ ಸಾಲುಗಳು ಸ್ಥೂಲದೇಹಕ್ಕಷ್ಟೇ ಅಲ್ಲ, ಸೂಕ್ಷ್ಮದೇಹ ಹಾಗೂ ಕಾರಣದೇಹಗಳಲ್ಲೂ ತಾವು ಜೊತೆಯಾಗಿರೋಣ ಎಂದು ಶರೀಫರು ತಮ್ಮ ಹೆಂಡತಿಗೆ ಕರೆ ಕೊಡುವದನ್ನು ತೋರಿಸುತ್ತವೆ.
ಕೆಲಕಾಲದ ನಂತರ ಶರೀಫರಿಗೆ ಒಂದು ಹೆಣ್ಣು ಮಗು ಜನಿಸಿ, ಬೇಗನೇ ಮರಣ ವನ್ನಪ್ಪುತ್ತದೆ. ಅವರ ಹೆಂಡತಿ ಫಾತಿಮಾ ಸಹ ಸ್ವಲ್ಪೇ ದಿನಗಳಲ್ಲಿ ತೀರಿಕೊಳ್ಳುತ್ತಾಳೆ. ಹೆಂಡತಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವರ ಮಾವ ಅವರಿಗೆ ಹೇಳಿ ಕಳಿಸು ತ್ತಾರೆ. ಆದರೆ, ಶರೀಫರು ಈಗ ಎಲ್ಲಾ ಮಾಯಾಬಂಧಗಳಿಂದ ಮುಕ್ತರಾಗಿದ್ದರು.
ಹೆಂಡತಿಯ ಅಂತ್ಯಕ್ರಿಯೆಯಲ್ಲಿ ಅವರು ಭಾಗವಹಿಸಲಿಲ್ಲ. ಅವರ ಮನೋ ಭಾವನೆ ಈ ಹಾಡಿನಲ್ಲಿ ವ್ಯಕ್ತವಾಗಿದೆ:
ಮೋಹದ ಹೆಂಡತಿ ಸತ್ತ ಬಳಿಕ ಮಾವನ ಮನೆಯ ಹಂಗಿನ್ನ್ಯಾಕೋ ||ಪಲ್ಲ|| ಸಾವು ನೋವಿಗೆ ತರುವ ಬೀಗನ ಮಾತಿನ ಹಂಗೊಂದೆನಗ್ಯಾಕೋ ||ಅನುಪಲ್ಲ||
ಖಂಡವನದಿ ಸೋಂಕಿ ತನ್ನ ಮೈಯೊಳು ತಾಕಿ ಬಂಡೆದ್ದು ಹೋಗುವದು ಭಯವ್ಯಾಕೋ ಮಂಡಲನಾಡಿಗೆ ಪಿಂಡದ ಗೂಡಿಗೆ ಚಂಡಿತನದಿ ಚರಿಸ್ಯಾಡುವದ್ಯಾಕೋ ||೧||
ತಂದೆ ಗುರುಗೋವಿಂದನ ಸೇವಕ ಕುಂದಗೋಳಕೆ ಬಂದು ನಿಂತಾನ್ಯಾಕೋ ಬಂಧುರ ಶಿಶುನಾಳಧೀಶನ ದಯದಿಂದ ಇಂದಿಗೆ ವಿಷಯದ ವ್ಯಸನಗಳ್ಯಾಕೋ ||೨||
ಇನ್ನು ಮುಂದೆ ಶರೀಫರ ಜೀವನವು ಪೂರ್ಣವಾಗಿ ಪಾರಮಾರ್ಥಿಕ ಸಾಧನೆಗೆ ಮೀಸ ಲಾಯಿತು. ಮಗಳು, ಮಡದಿ, ತಂದೆ,ತಾಯಿ ಹಾಗು ಕೊನೆಗೆ ಗುರು ಗೋವಿಂದ ಭಟ್ಟರ ನಿಧನದ ನಂತರ, ಶರೀಫರು ಪುಣ್ಯಕ್ಷೇತ್ರಗಳ ಯಾತ್ರೆ ಹಾಗು ಪುಣ್ಯಜೀವಿಗಳ ಭೆಟ್ಟಿಯಲ್ಲಿ ಕಾಲ ಕಳೆದರು. ನವಲಗುಂದದ ನಾಗಲಿಂಗಪ್ಪನವರು ಹಾಗೂ ಗರಗದ ಮಡಿವಾಳಪ್ಪ ನವರು ಶರೀಫರಿಗೆ ಅತ್ಯಂತ ಆಪ್ತರಾಗಿದ್ದರು.
ಆ ಅವಧಿಯಲ್ಲಿ ಇಳಿವಯಸ್ಸಿನಲ್ಲಿದ್ದ ಶ್ರೀ ಚಿದಂಬರ ಸ್ವಾಮಿಗಳ ಹಾಗು ಬಾಲಲೀಲಾ ಮಹಾಂತ ಶಿವಯೋಗಿಗಳ ದರ್ಶನ ಪಡೆದರು.
ಅಲ್ಲದೆ ಸಮಕಾಲೀನರಾದ ಅಗಡಿಯ ಶೇಷಾಚಲ ಸ್ವಾಮಿಗಳು, ಅವರಾದಿ ಫಲಾಹಾರ ಸ್ವಾಮಿಗಳು, ಗುಡಗೇರಿಯ ಕಲ್ಮಠದ ಸಂಗಮೇಶ್ವರರು, ಅಂಕಲಗಿಯ ಶ್ರೀ ಅಡವಿ ಸ್ವಾಮಿಗಳು ಹಾಗು ವಿಶ್ವಕರ್ಮದ ಪ್ರಭುಸ್ವಾಮಿಗಳು ಇವರೆಲ್ಲರ ಸತ್ಸಂಗವನ್ನು ಪಡೆದರು.
ತಮ್ಮ ಕೊನೆಯ ದಿನಗಳಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳನ್ನು ಸಂದರ್ಶಿಸಿದಾಗ ಸ್ವಾಮಿಗಳಿನ್ನೂ ಚಿಕ್ಕವರಿದ್ದರು.
ಶರೀಫರು ಯಾವುದೇ ಕೆಲಸ ಮಾಡದೆ, ಆತ್ಮಚಿಂತನೆಯಲ್ಲಿ ಮಗ್ನರಾಗಿ ಇರುತ್ತಿದ್ದರಿಂದ ಸಾಕಷ್ಟು ನಿಂದನೆಯನ್ನು ಎದುರಿಸಬೇಕಾಯಿತು. ಸಾಲಗಾರರ ಕಾಟದಿಂದ ಮುಕ್ತ ರಾಗಲು, ಶಿಶುನಾಳದಲ್ಲಿದ್ದ ತಮ್ಮ ಹೊಲವನ್ನು ಮಾರಬೇಕಾಯಿತು. ಇದೆಲ್ಲವನ್ನೂ ಶರೀಫರು ದೇವರ ದಯವೆಂದೇ ಭಾವಿಸಿದರು:
ಎಂಥಿಂಥಾದೆಲ್ಲಾನು ಬರಲಿ ಚಿಂತೆಯಂಬೋದು ನಿಜವಾಗಿರಲಿ ||ಪಲ್ಲ|| ಪರಾತ್ಪರನಾದ ಗುರುವಿನ ಅಂತಃಕರಣ ಒಂದು ಬಿಡದಿರಲಿ ||ಅನುಪಲ್ಲ||
ಬಡತನೆಂಬುದು ಕಡೆತನಕಿರಲಿ ವಡವಿ ವಸ್ತ ಹಾಳಾಗಿ ಹೋಗಲಿ ನಡುವಂಥ ದಾರಿಯು ತಪ್ಪಿ ಅಡವಿ ಸೇರಿದಂತಾಗಿ ಹೋಗಲಿ ||೧||
ಗಂಡಸ್ತಾನ ಇಲ್ಲದಂತಾಗಲಿ ಹೆಂಡರು ಮಕ್ಕಳು ಬಿಟಗೊಟ್ಟು ಹೋಗಲಿ ಕುಂಡಿ ಕುಂಡಿ ಸಾಲ್ದವರೊದೆಯಲಿ ಬಂಡು ಮಾಡಿ ಜನರು ನಗಲಿ ||೨||
ನಂಬಿಗೆ ಎಳ್ಳಷ್ಟಿಲ್ಲದಂತಾಗಲಿ ಅಂಬಲಿ ಎನಗೆ ಸಿಗದೆ ಹೋಗಲಿ ಹುಂಬಸುಳೇಮಗನೆಂದು ಬೈಯಲಿ ಕಂಬಾ ಮುರಕೊಂಡು ಎನ್ನ ಮ್ಯಾಲೆ ಬೀಳಲಿ ||೩||
ವ್ಯಾಪಾರುದ್ಯೋಗ ಇಲ್ಲದಾಂಗಾಗಲಿ ಬುದ್ಧಿಯೆಂಬುದು ಮಸಣಿಸಿ ಹೋಗಲಿ ಮದ್ದು ಹಾಕಿ ಎನ್ನನು ಕೊಲ್ಲಲಿ ಹದ್ದು ಕಾಗಿ ಹರಕೊಂಡು ತಿನ್ನಲಿ ||೪||
ಭಾಷೆ ಪಂಥ ನಡಿದ್ಹಾಂಗಾಗಲಿ ಹಾಸ್ಯ ಮಾಡಿ ಜನರೆಲ್ಲರು ನಗಲಿ ಈ ಶಿಶುನಾಳಧೀಶ ಸದ್ಗುರುವಿನ ಲೇಸಾದ ದಯವೊಂದು ಕಡೆತನಕಿರಲಿ ||೫||
ತಮ್ಮ ಕೊನೆಗಾಲವನ್ನು ಅರಿತ ಶರೀಫರು, ಶರಣರ ಪದ್ಧತಿಯಂತೆ “ವಿಭೂತಿ ವೀಳ್ಯೆ” ಮಾಡಿಸಿಕೊಂಡು ದೇಹತ್ಯಾಗ ಮಾಡಲು ಬಯಸಿದರು. ಈ ವಿಧಾನದ ಪ್ರಕಾರ ಜಂಗಮ ಪಾದಪೂಜೆ ಹಾಗು ಶರೀಫರ ಮಸ್ತಕದ ಮೇಲೆ ಜಂಗಮನ ಪಾದವಿಟ್ಟು ಶಿವಸಾಯುಜ್ಯ ಮಂತ್ರಪಠಣ ಮಾಡುವ ಅವಶ್ಯಕತೆ ಇತ್ತು. ಶರೀಫರ ಹಣೆಯ ಮೇಲೆ ಪಾದವಿಡಲು ಯಾವ ಜಂಗಮ ಒಪ್ಪಿಯಾರು? ಕೊನೆಗೆ ಹಿರೇಮಠದ ಕರಿಬಸವಯ್ಯನವರು ಶರೀಫರ ಇಚ್ಛೆಯನ್ನು ಪೂರ್ಣಗೊಳಿಸಿದರು. ಆ ಕ್ಷಣವೇ ಶರೀಫರು ಓಂಕಾರದಲ್ಲಿ ಲೀನವಾದರು:(ಕ್ರಿ.ಶ.1889 ನೆಯ ಮಾರ್ಚ 7ನೆಯ ದಿನಾಂಕ.)
ಬಿಡತೇನಿ ದೇಹ ಬಿಡತೇನಿ ||ಪಲ್ಲ||
ಬಿಡತೇನಿ ದೇಹವ ಕೊಡತೇನಿ ಭೂಮಿಗೆ ಇಡತೇನಿ ಮಹಿಮಾದ ನಡತೆ ಹಿಡಿದು ದೇಹಾ ||೧||
ಪಾವಕಾಗುಹುತಿ ಮಾಡಿ ಜೀವನದಸು ನಾ ಬೇರೆ ಬೈಲು ಬ್ರಹ್ಮದೊಳಾಡುತಲಿ ದೇಹಾ ||೨||
ಅವನಿಯೊಳು ಶಿಶುನಾಳಧೀಶನೆ ಗತಿಯೆಂದು ಜವನಬಾಧೆಗೆದ್ದು ಶಿವಲೋಕದೊಳು ದೇಹಾ ಬಿಡತೇನಿ ||೩||
ಶರೀಫರ ಅಂತ್ಯಕ್ರಿಯೆಯನ್ನು ಹಿಂದು ಹಾಗು ಮುಸ್ಲಿಮರು ಕೂಡಿಯೇ ಮಾಡಿದರು. ಶರೀಫರ ತಂದೆ, ತಾಯಿಗಳ ಸಮಾಧಿಯ ಪಕ್ಕದಲ್ಲಿಯೇ ಶರೀಫರ ಸಮಾಧಿಯಾಯಿತು. ಈ ಗದ್ದುಗೆಯು ಯಾವುದೇ ಧರ್ಮದ ಮಾದರಿಯಲ್ಲಿ ಇಲ್ಲ. ವಿಶಾಲವಾದ ಕಟ್ಟೆ, ಅದಕ್ಕೆ ನೆರಳು ನೀಡುವ ಮರ ಇವೇ ಅವರ ಗದ್ದುಗೆ.
ಗದ್ದುಗೆಯ ಎಡಭಾಗದಲ್ಲಿ ಮುಸಲ್ಮಾನರು ಹಾಗು ಬಲಭಾಗದಲ್ಲಿ ಹಿಂದೂಗಳು ತಮ್ಮ ಪದ್ಧತಿಯ ಪ್ರಕಾರ ಪೂಜೆ ಸಲ್ಲಿಸುತ್ತಾರೆ.
ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾ ||ಪಲ್ಲ||
ಗುಡಿಯ ನೋಡಿರಿದು ಪೊಡವಿಗೆ ಒಡೆಯನು ಆಡಗಿಕೊಂಡು ಕಡುಬೆಡಗಿನೊಳಿರುತಿಹ ಗುಡಿಯ ನೋಡಿರಣ್ಣಾ ||ಅನುಪಲ್ಲ||
ಮೂರು ಮೂಲೆಯ ಕಲ್ಲು ಅದರೊಳು ಜಾರುತಿರುವ ಕಲ್ಲು ಧೀರ ನಿರ್ಗುಣನು ಸಾರ ಸಗುಣದಲಿ ತೋರಿ ಅಡಗಿ ತಾ ಬ್ಯಾರ್ಯಾಗಿರುತಿಹ ಗುಡಿಯ ನೋಡಿರಣ್ಣಾ ||೧||
ಆರು ಮೂರು ಕಟ್ಟಿ ಮೇಲಕೆ ಏರಿದನು ಘಟ್ಟಿ ಭೇರಿ ಕಾಳಿ ಶಂಖ ಭಾರಿ ಸುನಾದದಿ ಮೀರಿದಾನಂದ ತೋರಿ ಹೊಳೆಯುತಿಹ ಗುಡಿಯ ನೋಡಿರಣ್ಣಾ ||೨||
ಸಾಗುತಿಹವು ದಿವಸ ಬಹುದಿನ ಹೋಗಿ ಮಾಡಿ ಪಾಯ್ಸ ಯೋಗಿ ರಾಜ ಶಿಶುನಾಳಧೀಶ ತಾ— ನಾಗಿ ಪರಾತ್ಪರ ಬ್ರಹ್ಮರೂಪನಿಹ ಗುಡಿಯ ನೋಡಿರಣ್ಣಾ ||೩||
ವರದಿಯ ವಿವರಗಳು |
 |
ಕೃಪೆ : ಸಲ್ಲಾಪ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-24
|
|
|