ಮನಾಮಾ: ಬಹರೇನಿನಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆ |
ಪ್ರಕಟಿಸಿದ ದಿನಾಂಕ : 2008-09-22
{ತುಂಬಾ ಚಿತ್ರಗಳು ಇವೆ))
ಗುರುನಾರಾಯಣರ 154 ನೇ ಜನ್ಮದಿನೋತ್ಸವ ಆಚರಣೆ ಸತ್ಯನಾರಾಯಣ ಪೂಜೆ : ವಿದೇಶದಲ್ಲಿ ಸ್ವದೇಶಿ ಹೂವಿನ ಕಂಪು
ಮನಾಮಾ, ಸೆಪ್ಟೆಂಬರ್ ೨೨: ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂದು ಜಗತ್ತಿಗೇ ಸಾರಿದ ಬ್ರಹ್ಮಶ್ರೀ ನಾರಾಯಣಗುರುಗಳ 154 ನೇ ಜನ್ಮದಿನೋತ್ಸವವನ್ನು ನಗರದ ಕೃಷ್ಣದೇವಸ್ಥಾನದ ಸಭಾಂಗಣದಲ್ಲಿ ಗುರುಪೂಜೆ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆಯೊಂದಿಗೆ ಬಹಳ ವಿಜೃಂಬಣೆಯಿಂದ ಆಚರಿಸಲಾಯಿತು.
ಬಹರೇನಿನಲ್ಲಿರುವ ಅನಿವಾಸಿ ಬಿಲ್ಲವರ ಸಂಘಟನೆಯಾದ ಗುರುಸೇವಾ ಸಮಿತಿಯು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಉಡುಪಿ ಜಿಲ್ಲೆಯ ಕಟಪಾಡಿಯ ಶ್ರೀ ವಿಶ್ವನಾಥ ಕ್ಷೇತ್ರದ ಅರ್ಚಕರಾದ ಶ್ರೀ ದೇವದಾಸ ಶಾಂತಿಯವರು ಪೂಜಾ ವಿಧಾನಗಳನ್ನು ನೆರವೇರಿಸಲು ವಿಶೇಷವಾಗಿ ಇಲ್ಲಿಗೆ ಆಗಮಿಸಿ ಪೂಜಾ ವಿಧಾನಗಳನ್ನು ಸಾಂಪ್ರದಾಯಿಕ ವಾಗಿ ಹಾಗೂ ವಿಧಿವತ್ತಾಗಿ ನೆರವೇರಿಸಿ ಭಕ್ತವೃಂದದ ಮೆಚ್ಚುಗೆಗೆ ಪಾತ್ರರಾದರು.

ಊರಿನಿಂದ ವಿಶೇಷವಾಗಿ ತರಿಸಿದ್ದ ಮಲ್ಲಿಗೆ, ಸೇವಂತಿಗೆ, ಅಬ್ಬಲಿಗೆ ಹಾಗೂ ಸಿಂಗಾರ ಹೂವುಗಳಿಂದ ದೇವರನ್ನು ಹಾಗೂ ದೇವರ ಮಂಟಪವನ್ನು ಸಿಂಗರಿಸಿ ಸ್ವಾಗತ ದ್ವಾರವನ್ನು ಹಾಗೂ ಪ್ರವೇಶದ್ವಾರವನ್ನು ಬಾಳೆಗಿಡ ಹಾಗೂ ಮಾವಿನೆಲೆಗಳ ತಳಿರುತೋರಣದಿಂದ ಆಕರ್ಷಕವಾಗಿ ಸಜ್ಜುಗೊಳಿಸಲಾಗಿದ್ದು ಊರಿನಲ್ಲಿ ಜರುಗುವ ಸಾಮೂಹಿಕ ಪೂಜೆಯಂತಹ ವಾತಾವರಣವನ್ನು ವಿದೇಶದಲ್ಲಿ ಸೃಷ್ಟಿಸಿ ಭಕ್ತಾದಿಗಳನ್ನು ಪುಳಕಿತಗೊಳಿಸಿತ್ತು.
ರಫಾ ಮಿತ್ರರ ಭಜನಾ ಮಂಡಳಿಯು ಪೂಜೆಯ ವಿಶೇಷ ಆಕರ್ಷಣೆಯಾಗಿದ್ದು ಒಂದೇ ತೆರನಾದ ಸಾಂಪ್ರಾದಾಯಿಕ ಉಡುಪುಗಳನ್ನು ಧರಿಸಿ ಪೂಜೆಯುದ್ದಕ್ಕೂ ತಮ್ಮ ಸುಶ್ರಾವ್ಯವಾದ ಭಜನೆಯಿಂದ ಭಕ್ತಾದಿಗಳನ್ನು ಭಾವಪರವಶರನ್ನಾಗಿ ಮಾಡಿದ್ದರು.

ಬಹರೇನಿನಲ್ಲಿ ಭಾರತೀಯ ರಾಯಭಾರಿಯಾಗಿರುವ ಬಾಲಕೃಷ್ಣಶೆಟ್ಟಿಯವರ ಧರ್ಮಪತ್ನಿ ಶ್ರೀಮತಿ ವಸುಂಧರಾ ಶೆಟ್ಟಿ, ಇಲ್ಲಿನ ಕನ್ನಡಿಗ ಮೂಲ ಸಂಘ ಸಂಸ್ಥೆಗಳ ವಿವಿಧ ಪದಾಧಿಕಾರಿಗಳು ಪೂಜೆಗೆ ಆಗಮಿಸಿ ಶ್ರೀ ಸತ್ಯನಾರಾಯಣ ದೇವರ ಕೃಪೆಗೆ ಪಾತ್ರರಾಗಿ ಮಹಾಪ್ರಸಾದ ಸ್ವೀಕರಿಸಿದರು.
ಪೂಜಾ ವಿಧಿವಿಧಾನಗಳನ್ನು ಕ್ರಮಬದ್ಧವಾಗಿ ಹಾಗೂ ಸಾಂಗವಾಗಿ ನೆರವೇರಿಸಿದ ಕಟಪಾಡಿಯ ವಿಶ್ವನಾಥ ಕ್ಷೇತ್ರದ ಅರ್ಚಕರಾದ ಶ್ರೀ ದೇವದಾಸ ಶಾಂತಿಯವರನ್ನು ಹಿರಿಯ ಕನ್ನಡಿಗರಾದ ಶ್ರೀ ಪಾಂಡುರಂಗ ಭಟ್ ರವರು ಶಾಲು ಹೊದೆಸಿ ಸನ್ಮಾನಿಸಿದರೆ ಗುರುಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ರಾಜಕುಮಾರ್ ಅವರು ಭಕ್ತಾದಿಗಳ ಅಭಿ ಮಾನ ಗೌರವ ಹಾಗೂ ಪ್ರೀತಿಯ ಪ್ರತೀಕವಾಗಿ ಸ್ಮರಣಿಕೆಯೊಂದನ್ನು ನೀಡಿ ಗೌರವಿ ಸಿದರು. ಶ್ರೀಯುತ ಅನಿಲ್ ಶೆಟ್ಟಿಯವರು ಪೂಜಾ ಕಾರ್ಯಗಳನ್ನು ನಡೆಸುವಲ್ಲಿ ಸಹಕರಿಸಿದರು. ಅರ್ಚಕರ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆಯನ್ನು ಹಿರಿಯ ಅನಿವಾಸಿ ಬಿಲ್ಲವರಾದ ಶ್ರೀ ಶಂಕರ್ ಜತ್ತನ್ನರವರು ವ್ಯವಸ್ಥೆಗೊಳಿಸಿದ್ದರು.
ಅರ್ಚಕರಾದ ಶ್ರೀ ದೇವದಾಸ್ ಶಾಂತಿಯವರು ಬಹರೇನ್ ದ್ವೀಪರಾಷ್ಟ್ರದಲ್ಲಿ ಇದೇ ತಿಂಗಳ ೨೨ನೇ ತಾರೀಖಿನವರೆಗೆ ವಾಸ್ತವ್ಯ ಹೂಡಲಿದ್ದು ಯಾವುದೇ ಪೂಜೆ ಕಾರ್ಯಗಳನ್ನು ನೆರವೇರಿಸಲು ಬಯಸುವ ಭಕ್ತರು ಇವರನ್ನು ಸಂಪರ್ಕಿಸಬಹುದಾಗಿದೆ.

ನಾಡಿನಿಂದ ಸಾವಿರಾರು ಮೈಲಿ ದೂರವಿದ್ದೂ ಸಾಮೂಹಿಕ ಸತ್ಯನಾರಾಯಣ ಪೂಜೆಯಂತಹ ಕಾರ್ಯಕ್ರಮಗಳಿಂದ ಅನಾದಿಕಾಲದಿಂದ ನಡೆದುಬಂದಿರುವ ನಮ್ಮ ಸಂಸ್ಕೃತಿಯನ್ನು ಜೀವಂತವಾಗಿಡಲು ಪ್ರಯತ್ನಿಸುವ ಈ ಒಂದು ಕಾಯಕ ನಿಜಕ್ಕೂ ಶ್ಲಾಘನೀಯ
ಚಿತ್ರ, ವರದಿ: ಕಮಲಾಕ್ಷ ಅಮೀನ್
ವರದಿಯ ವಿವರಗಳು |
 |
ಕೃಪೆ : ಚಿತ್ರ, ವರದಿ: ಕಮಲಾಕ್ಷ ಅಮೀನ್ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-09-22
|
|
| Mohan H Naik, Mangalure | 2008-09-22 | | Just fabulous.Good coverage 'Gulf kannadiga' |
|