ಸಬಕೋ ಸನ್ಮತಿ ದೇ ಭಗವಾನ್ ..... |
ಪ್ರಕಟಿಸಿದ ದಿನಾಂಕ : 2008-09-21
ಯು.ಆರ್. ಅನಂತಮೂರ್ತಿಯವರ ಚಿಂತನೆಗಳು
ಪ್ರಾರ್ಥನೆಯಲ್ಲಿ ತೊಡಗಿರುವವರ ಮೇಲೆ-ಅವರು ಯಾವ ದೇವರಲ್ಲಿ ಪ್ರಾರ್ಥಿಸುತ್ತಿದ್ದರೂ - ದಾಳಿ ಮಾಡುವುದು ಅನಾಗರಿಕ ಮಾತ್ರವಲ್ಲ, ಅಧಾರ್ಮಿಕ ಕೂಡ. ಆದರೆ ಧರ್ಮ ರಕ್ಷಣೆಯ ಹೆಸರಿನಲ್ಲೇ ಸಂಘ ಪರಿವಾರದ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾರ್ಥನೆಯಲ್ಲಿ ತೊಡಗಿರುವವರ ಮೇಲೆ ದಾಳಿ ನಡೆಸಿದ್ದಾರೆ.
’ಯಾವ ದೇವರನ್ನು ಪ್ರಾರ್ಥಿಸಿದರೂ ಅದು ಕೇಶವನನ್ನು ತಲುಪುತ್ತದೆ’ ಎಂದು ನಂಬುವ ಹಿಂದೂ ಆದವನು ಹೀಗೆ ವರ್ತಿಸುವುದು ಹೇಯವಾದುದ್ದು. ಇಂಥ ದಾಳಿಗಳು ಹಿಂದೂ ನಾಗರಿಕತೆಯನ್ನು ನಾಶಗೊಳಿಸುತ್ತಿವೆ.
ಕ್ರೈಸ್ತರು ಹೊಸಗನ್ನಡದ ಅಭಿವೃದ್ಧಿಗೆ ತಮ್ಮದೇ ಆದ ಕಾಣಿಕೆಗಳನ್ನು ನೀಡಿದ್ದಾರೆ. ರೆವೆರೆಂಡ್ ಫಾದರ್ ಫರ್ಡಿನಾಂಡ್ ಕಿಟೆಲ್ ಮೊದಲ ಕನ್ನಡ ನಿಘಂಟನ್ನು ರಚಿಸಿದವರು. ಕರ್ನಾಟಕದ ಅಭಿವೃದ್ಧಿಯಲ್ಲಿಯೂ ಕ್ರೈಸ್ತರ ಪಾತ್ರ ಅನನ್ಯ. ಸರಕಾರ ತಲುಪಲೂ ಆಗದಿರುವ ಅನೇಕ ಕಡೆಗಳಲ್ಲಿ ಅವರು ಈಗಲೂ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ.
ಈಗ ಕರ್ನಾಟಕದಲ್ಲಿ ನಡೆಯುತ್ತಿರುವುದು ಅಧಿಕಾರದಲ್ಲಿರುವ ಸರಕಾರದ ಚುನಾವಣಾ ಸಿದ್ಧತೆಯ ಸಿನಿಕ ತಂತ್ರವಲ್ಲದೆ ಬೇರೇನೂ ಅಲ್ಲ. ನಮ್ಮ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದ ತಕ್ಷಣ ಕರ್ನಾಟಕವನ್ನು ಇನ್ನೊಂದು ಗುಜರಾತ್ ಮಾಡುವುದಾಗಿ ಹೇಳಿದ್ದರು. ಅಂದರೆ ಅವರಿಗೆ ಗುಜರಾತ್ನ ನರೇಂದ್ರ ಮೋದಿಯೇ ಆದರ್ಶ. ನಾನು ಹುಟ್ಟಿ ಬೆಳೆದ ಜಿಲ್ಲೆಯವರೇ ಆಗಿರುವ ರೈತ ನಾಯಕ ಬಿ.ಎಸ್ ಯಡಿಯೂರಪ್ಪ ಈಗ ಕರ್ನಾಟಕದ ಮೋದಿಯಾಗಲು ಹೊರಟಿದ್ದಾರೆ.!
ಕುವೆಂಪು, ಶಾಂತವೇರಿಯಂತಹವರನ್ನು ಪಡೆದ ಜಿಲ್ಲೆಯಲ್ಲಿ ಬೆಳೆದ ನಮ್ಮ ಯಡ್ಯೂರಪ್ಪ ನವರು ಹೀಗಾಗಿರುವುದು ಒಂದು ದುರಂತ
ಮಂಗಳೂರು ಮತ್ತು ಉಡುಪಿಯಲ್ಲಿ ಅಲ್ಪಸಂಖ್ಯಾತ ಕ್ರೈಸ್ತರ ಮತಗಳು ತಮಗೆ ದೊರೆಯುವುದಿಲ್ಲ ಎಂಬುದು ಬಿಜೆಪಿಗೆ ತಿಳಿದಿದೆ. ಇದೇ ಕಾರಣಕ್ಕೆ ಅದು ಕ್ರೈಸ್ತರ ಮೇಲಿನ ದಾಳಿಗಳ ಕುರಿತು ಕಣ್ಣು ಮುಚ್ಚಿಕೊಂಡಿದೆ. ಈ ದಾಳಿಗಳು ತಮ್ಮ ಹಿಂದೂ ಮತ ಬ್ಯಾಂಕನ್ನು ಇನ್ನಷ್ಟು ಖಚಿತ ಪಡಿಸುತ್ತದೆಂದು ಸರಕಾರ ನಡೆಸುವವರೂ ಭಾವಿಸುವುದು ಸಿನಿಕತನದ ಪರಮಾವಧಿ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಸರಕಾರವು, ಚರ್ಚ್ಗಳು ಮತ್ತು ಪ್ರಾರ್ಥನಾ ಮಂದಿರಗಳ ಮೇಲೆ ನಡೆದ ದಾಳಿಯನ್ನು ’ಬಲವಂತದ ಮತಾಂತರ’ ಎಂಬ ವಾದವನ್ನು ಬಳಸಿಕೊಂಡು ಸಮರ್ಥಿಸುವುದು ಬೇಜವಾಬ್ದಾರಿಯ ದ್ಯೋತಕ.
ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವವರು ಯಾರು? ಕೆಳ ಜಾತಿಗಳಿಂದ ಬಂದವರು; ತಮ್ಮ ಜಾತಿ ಯಾವುದೆಂದು ಹೇಳಿಕೊಳ್ಳಲೇ ನಾಚಿಕೊಳ್ಳುವವರು. ಇದಕ್ಕೆ ಕಾರಣರಾದವರು ಹಿಂದೂಗಳಾದ ನಾವೇ ಅಲ್ಲವೆ?. ಕ್ರೈಸ್ತ ಧರ್ಮ ಅವರಿಗೊಂದು ಗೌರವಯುತ ಅನನ್ಯತೆಯನ್ನು ನೀಡುತ್ತದೆ. ಉದ್ಯೋಗ ಹಾಗೂ ಶಿಕ್ಷಣದ ಭರವಸೆಯೂ ಅವರನ್ನೂ ಇದರತ್ತ ಆಕರ್ಷಿಸಿರಬಹುದು. ಧರ್ಮದ ಪರಿವರ್ತನೆ ಹೃದಯದ ಪರಿವರ್ತನೆಯೂ ಆಗಿರಬೇಕೆಂಬುದು ಕ್ರೈಸ್ತರಿಗೆ ತಿಳಿದಿದೆ. ಕೇವಲ ಲೌಕಿಕ ಕಾರಣಕ್ಕಾಗಿ ಮತಪರಿವರ್ತನೆಯನ್ನು ಮಾಡುವುದು ತಮ್ಮ ಧರ್ಮಕ್ಕೇ ಅಪಚಾರವೆಸಗಿದಂತೆ ಎಂಬುದು ಮದರ್ ಥೆರೇಸಾರಂತಹ ಮಹಾತಾಯಿಗೂ ಗೊತ್ತಿತ್ತು
ಕೆಳ ಜಾತಿಯಲ್ಲಿ ಹುಟ್ಟಿದ್ದ ಕೇರಳದ ನಾರಾಯಣ ಗುರು ಜಾತೀಯತೆಯಿಂದ ನಾಶದತ್ತ ಸಾಗುತ್ತಿದ್ದ ಹಿಂದೂ ಸಮಾಜವನ್ನು ಸುಧಾರಣೆಗೆ ಒಳಪಡಿಸಿದರು. ಅಂಥವರು ಈಗಲೂ ಇದ್ದಿದ್ದರೆ ಕೆಳ ಜಾತಿಯ ಹಿಂದೂಗಳು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಬೇಕಾದ ಪರಿಸ್ಥಿತಿಯೇ ಉದ್ಭವಿಸುತ್ತಿರಲಿಲ್ಲ. ನಾರಾಯಣ ಗುರುಗಳು ಒಬ್ಬ ಅದ್ವೈತಿ; ಬಹುಶಃ ತಾತ್ವಿಕವಾಗಿ ಅದ್ವೈತದಲ್ಲಿ ನಂಬಿದ್ದ ಆದಿ ಶಂಕರಾಚಾರ್ಯರ ನಂತರದಲ್ಲಿ ವಾಸ್ತವದಲ್ಲೂ ಮಹಾ ಅದ್ವೈತಿಯಾಗಿದ್ದವರೆಂದರೆ ಇವರೇ ಇರಬೇಕು.
ಆಡಳಿತಾರೂಢ ಬಿಜೆಪಿ ಸರಕಾರದ ಅಧೀನದಲ್ಲಿರುವ ಪೊಲೀಸರು ಈಗ ನಡೆಯುತ್ತಿರುವ ದಾಳಿಗಳ ಬಗ್ಗೆ ಕುರುಡಾಗಿದ್ದಾರೆ. ಪೊಲೀಸರು ಈ ದಾಳಿಗಳನ್ನು ನೇರವಾಗಿ ಬೆಂಬಲಿಸದೇ ಇದ್ದರೂ ದಾಳಿ ನಡೆಸುವವರು ಮತ್ತು ಪೊಲೀಸರ ಮಧ್ಯೆ ಅನೈತಿಕ ಒಪ್ಪಂದವೊಂದಿರುವಂತೆ ಕಾಣಿಸುತ್ತದೆ. ಗುಜರಾತ್ ನ ಹಿಂಸೆಯ ನಾಟಕ ಇಲ್ಲಿ ಮರುಪ್ರದರ್ಶನಗೊಳ್ಳುತ್ತಿದೆ. ಹಿಂದೂ ಮತಾಚರಣೆಗಳನ್ನು ಕಟುವಾಗಿ, ನಿಷ್ಠುರವಾಗಿ ಟೀಕಿಸಲು ಹಿಂಜರಿಯದ ವೀರಶೈವ ವಚನಕಾರರನ್ನೂ, ವೈಷ್ಣವ ದಾಸರನ್ನೂ , ಈ ಎಲ್ಲರಿಗೂ ಹಿಂದೆ ಬುದ್ಧಗುರುವನ್ನೂ, ನಮ್ಮ ಕಾಲದಲ್ಲೇ ಕುವೆಂಪು, ರವೀಂದ್ರನಾಥ ಠಾಕೂರರನ್ನೂ, ಶಿವರಾಮ ಕಾರಂತರನ್ನೂ ಪಡೆದ ನಾವು ಸಂಘಪರಿವಾರದವರ ನಂಜಿನ ಹಿಂದೂ ಕಲ್ಪನೆಯಿಂದ ತಲೆ ತಗ್ಗಿಸಬೇಕಾಗಿದೆ.
"ನೂರು ದೇವರನೆಲ್ಲ ನೂಕಾಚೆ ದೂರ ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರಾ ಶತಮಾನಗಳು ಬರಿಯ ಜಡಶಿಲೆಯ ಪೂಜಿಸಾಯ್ತು, ಹಾವ್ಗಳಿಗೆ ಹಾಲೆರೆದು ಪೋಷಿಸಾಯ್ತು, ಬಿಸಲು ಮಳೆ-ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು, ದಾಸರನು ಪೂಜಿಸಿಯೇ ದಾಸ್ಯವಾಯ್ತು."
ಈ ಮಾತು ಕುವೆಂಪುರವರದು; ಯಾವ ಹಿಂದೂ ದ್ವೇಷಿ ಪಾದ್ರಿಯದೂ ಅಲ್ಲ.
"ವೇದವೆಂಬುದು ಓದಿನ ಮಾತು ಶಾಸ್ರವೆಂಬುದು ಸಂತೆಯ ಸುದ್ದಿ ಪುರಾಣವೆಂಬುದು ಪುಂಡರ ಗೋಷ್ಟಿ, ತರ್ಕವೆಂಬುದು ತಗರ ಹೋರಟೆ ಬಕುತಿ ಎಂಬುದು ತೋರುಂಬ ಲಾಭ. ಗುಹೇಶ್ವರನೆಂಬುದು ಮೀರಿದ ಘನವು
ಇದು ನಮ್ಮ ಅಲ್ಲಮನ ಮಾತು; ಯಾವ ಮುಸ್ಲಿಮ್ ಮೌಲ್ವಿಯದೂ ಅಲ್ಲ.
ನಮ್ಮ ಬಿಜೆಪಿ ಆಡಳಿತದಲ್ಲಿ ಇವೆಲ್ಲವೂ ಕಾನೂನು ಬಾಹಿರ. ಕುವೆಂಪು ಮತ್ತು ಅಲ್ಲಮ ಶಿಕ್ಷಾರ್ಹರು. ಯಾಕೆಂದರೆ ಅವರು ನಾವು ನಂಬುವ ದೇವರನ್ನು ಹೀಗೆಳಿದಿದ್ದಾರೆ.
ನಾರಾಯಣ ಗುರು ನಮ್ಮ ನಾಲ್ಕು ವೇದಗಳ ಕಲ್ಪನೆಯನ್ನೇ ಬದಲಾಯಿಸಿಕೊಳ್ಳ ಬೇಕೆಂದು ಅಭಿಪ್ರಾಯ ಪಟ್ಟಿದ್ದರು. ಅವರು ಹೇಳುವಂತೆ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದಗಳೆಂಬವು ಅವುಗಳ ಕಾಲಕ್ಕೆ ನಾಲ್ಕು ವೇದಗಳಾಗಿದ್ದವು. ಈಗ ಅರಿವು ವಿಸ್ತರಿಸಿದೆ. ಈ ನಾಲ್ಕು ವೇದಗಳನ್ನು ಒಂದು ವೇದವಾಗಿಯೂ ಬೈಬಲ್, ಕುರಾನ್ ಹಾಗೂ ಬೌದ್ಧ ಗ್ರಂಥಗಳನ್ನು ಇನ್ನುಳಿದ ಮೂರು ವೇದಗಳನ್ನಾಗಿಯೂ ಪರಿಗಣಿಸಬೇಕು.
ಯಾವ ಕ್ರೈಸ್ತ ಪಾದ್ರಿಯೂ ನಮ್ಮ ಭಾರತೀಯ ಸಂತ ಪರಂಪರೆ, ಸಾಹಿತ್ಯ ಪರಂಪರೆ ಟೀಕಿಸಿದಷ್ಟು ಕಟುವಾಗಿ, ಆಳವಾಗಿ ಹಿಂದೂ ಆಚರಣೆಗಳನ್ನು ಟೀಕಿಸಲಾರರು. ಸತತ ವಿಮರ್ಶೆಯ ಅಗ್ನಿದಿವ್ಯದಲ್ಲಿ ತನ್ನ ಚೈತನ್ಯವನ್ನು ಜೀವಂತಗೊಳಸಿಕೊಳ್ಳುವ ನಮ್ಮ ಹಿಂದೂ ನಾಗರಿಕತೆಯನ್ನು, ಕಾಪಾಡುವ ನೆವದಲ್ಲಿ, ಸಂಘಪರಿವಾರದವರು ನಾಶಮಾಡುತ್ತ ಇದ್ದಾರೆ. (ಒಂದು ಕಥೆಯಿದೆ: ವಿವೇಕಾನಂದರು ಕಾಶ್ಮೀರದಲ್ಲಿ ದೇವಿಯ ಎದುರು ನಿಂತು ಹಲಬುತ್ತಾರೆ: ’ತಾಯಿ, ನಿನ್ನನ್ನು ನಾನು ಕಾಪಾಡಲಾರದೇ ಹೋದೆನಲ್ಲ!’ ಆಗ ದೇವಿ ಹೀಗೆ ಉತ್ತರಿಸುತ್ತಾಳೆ: "ನೀನು ನನ್ನನ್ನು ಕಾಪಾಡುವುದೊ? ಅಥವಾ ನಾನು ನಿನ್ನನ್ನು ಕಾಪಾಡಬೇಕಾದವಳೊ?’)
ದೇವರ ಅಗತ್ಯವನ್ನೇ ದಾಟಿಬಿಡಲು ಹವಣಿಸುವ ಆಧ್ಯಾತ್ಮಿಕ ಅನುಭಾವದ ಈ ನಾಡಿನ ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಿಜೆಪಿಯ ರಾಜ ಕಾರಣದ ಕ್ಷುದ್ರತೆಯನ್ನು ಅಲ್ಪತೆಯನ್ನು ನಾವೆಲ್ಲರೂ ಗಾಂಧೀಜಿ ತೋರಿದ ದಾರಿಯಲ್ಲಿ ನಡೆದು ತೊರೆಯಬೇಕು. ಯಾಕೆಂದರೆ ಸಂಘಪರಿವಾರ ಬಿತ್ತಲು ಯತ್ನಿಸುವ ವಿಷದ ಬೀಜ ನಮ್ಮಲ್ಲಿ ಹಲವರಲ್ಲಿ ಗುಪ್ತವಾದ ಭಾವನೆಯಾಗಿರಬಹುದು ಎಂಬ ಅನುಮಾನ ನನಗೆ ಇದೆ.
ಕ್ರೈಸ್ತಧರ್ಮ, ಹಾಗೂ ಇಸ್ಲಾಂ ಧರ್ಮ ನಮ್ಮ ಭಾರತವನ್ನು ಶ್ರೀಮಂತಗೊಳಿಸಿ, ನಮ್ಮ ಮಾನವೀಯ ಅನುಕಂಪವನ್ನು ವಿಶಾಲಗೊಳಿಸಿವೆ ಎಂದೇ ಹಿಂದೂಗಳಾದ ನಾವೆಲ್ಲರೂ ಕೃತಜ್ಷತೆಯಲ್ಲಿ ತಿಳಿಯಬೇಕು. ತಾವು ನಂಬುವ ದೇವರಲ್ಲಿ ಗಾಂಧಿಯಂತೆ ಎಲ್ಲರೂ ಪ್ರಾರ್ಥಿಸಬೇಕು: ಸಬಕೋ ಸನ್ಮತಿ ದೇ ಭಗವಾನ್
ಎಲ್ಲ ಬಗೆಯ ಭಯೋತ್ಪಾದಕತೆಯನ್ನು, ಅದು ಇಸ್ಲಾಮ್ ಹೆಸರಿನಲ್ಲಿ ಇರಬಹುದು, ಹಿಂದೂ ಸಂಘಟನೆಯ ಹೆಸರಿನಲ್ಲಿ ಇರಬಹುದು, ನಾವು ಈ ನೆಲದಿಂದ ಉಚ್ಛಾಟಿಸ ಬೇಕು. ಯಾಕೆಂದರೆ ಈ ಟೆರರಿಸಂ ಧರ್ಮ ವಿರೋಧಿ; ಜೀವ ವಿರೋಧಿ. ಅಭಯ ದಲ್ಲಿ ನಾವೆಲ್ಲರೂ ಬದುಕಬೇಕೆಂಬುದು ನಮ್ಮ ಉಪನಿಷತ್ತಿನ ಪ್ರಾರ್ಥನೆ.
ವರದಿಯ ವಿವರಗಳು |
 |
ಕೃಪೆ : ಋಜುವಾತು ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-21
|
|
| Ullekh hegde, Dubai | 2008-10-05 | | Mr. Ananthamoorty i hope you must have read the news about bangladeshi migrants killing the tribals in assam. so now are you going to assam to protest and pray god to give these bangladeshi illegal migrants. when these bangaldeshi migrants were entering india and when the so called "communal" people(according to you and your intellectual community) started demanding to throw them out people like you protested arguing about their human rights. now where has the human rights of the people who have died in the riots gone. they have lost their right to live and that too because they were born in india and they are not muslims or christians. now area you people happy. i know nobody from your human rights or intellectual community will step forward to say one word about these atrocities committed by these bangladeshis. now you people must be happy. i would only pray god to give "sanmathi" to people like you who are only interested in cheap publicity but not in national interest. |
| Ullekh hegde, Dubai | 2008-09-30 | | manya anathamoorthiyavara samajadha bagge kaalaji hosadhenalla.aadare adhu avara prachaarakke maathra. avaru yaavagalu hindu samaja haagu hindu smaaajada sangatanegalannu heeyalisuvudharalle khushi paduvavaru. moothiyavare illi neevu hindu devera avaamanavannu yaake marethubittidheera?? neevu devarige pooje maadadha naasthikaragirabahudu aadhare naavu devarannu nambuva haagu gouravisuva aasthikaru. bari hindugalige shanthi mantra helikoduvudhannu nillisi. naavu hindugalu namma dharmada aagiruva thappugalanu oppikondu adhannu thidduva svbhavadhavaru.. aadhare nammannu avaamaanisuva janarannu ashtu sulabhavagi mareyalu sadhyavilla. poorva raajyagalalli khristharu hindugalannu samharisi thamma dharma prachaaara maduvaaga nimmantha vicharavaadhiglau malgiruthare yaakendare alli nimage bekhaadha prachara dhoreuvudilla allave??swalpa aathmashodhane maadi moorthiyavare..kaiyalli lekhani idheyendhu manasige bandha haaage bareuvudhannu nillisi. hindugalu eegagale echethidhaare. modi maadidha olle abhivrdhi kelasa nimage khaanuvudhe illa.innu mundhe aadharu swalpa yochisi aamele bareyiri. |
|