ಮನಾಮಾ: ಬಹರೇನ್ ಕನ್ನಡ ಸಂಘದಲ್ಲಿ ವರ್ಣರಂಜಿತ ಛದ್ಮವೇಷ ಸ್ಪರ್ಧೆ |
ಪ್ರಕಟಿಸಿದ ದಿನಾಂಕ : 2008-09-21
(ಒಟ್ಟು 65 ಚಿತ್ರಗಳಿವೆ)
ಮನಸೂರೆಗೊಂಡ ಪುಟಾಣಿಗಳು : ವರ್ಣಮಯ ಮಾಯಾಲೋಕ ಅನಾವರಣ
ಮನಾಮಾ, ಸೆಪ್ಟೆಂಬರ್ 21: ಇಲ್ಲಿನ ಕನ್ನಡ ಸಂಘ ಆಯೋಜಿಸಿದ್ದ ಛದ್ಮವೇಶ ಸ್ಪರ್ಧೆಯ ವರ್ಣರಂಜಿತ ಸಂಜೆಯಲ್ಲಿ ವಿವಿಧ ವಯೋಮಿತಿಯ ಪುಟಾಣಿಗಳು ವೈವಿಧ್ಯಮಯ ವೇಷಭೂಷಣಗಳನ್ನು ತೊಟ್ಟು ಸಂಭ್ರಮಪಟ್ಟರು. ಮಾತ್ರವಲ್ಲದೇ ತಮ್ಮ ಹಾವ ಭಾವ, ಅಭಿನಯ ಕೌಶಲ್ಯ, ಅನುಸರಣೆಗಳಿಂದ ನೆರೆದ ನೂರಾರು ಪ್ರೇಕ್ಷಕರ ಮನಸೂರೆಗೊಂಡರು.
ಶಿಕ್ಷಕ, ತರಕಾರಿ ಮಾರುವಾಕೆ, ಭಿಕ್ಷುಕ, ಹುಚ್ಚ, ಮಂಗ, ಚಮ್ಮಾರ, ಕಥಕ್ಕಳಿ ವೇಷಧಾರಿ.... ಹೀಗೆ ನಾನಾ ತರಹದ ಪಾತ್ರಪೋಷಣೆಗಳಿಂದ ರಂಜಿಸಿದ ಪುಟಾಣಿಗಳಲ್ಲಿ ಮೂರರ ವಯೋಮಿತಿಯ ಪುಟಾಣಿಗಳೇ ತಮ್ಮ ವಯಸ್ಸಿಗೆ ಮೀರಿದ ಪ್ರತಿಭೆಯನ್ನು ಪ್ರದರ್ಶಿಸಿದ್ದು ಎಲ್ಲರಿಗೆ ಅಚ್ಚರಿಗೆ ಕಾರಣವಾಗಿತ್ತು.

ಕಾರ್ಯಕ್ರಮದ ಉಸ್ತುವಾರಿಯನ್ನು ಮನೋರಂಜನಾ ಕಾರ್ಯದರ್ಶಿ ದೂಮಣ್ಣ ರೈ ಯವರು ವಹಿಸಿದ್ದರೆ ಸಂಘದ ಸಾಂಸ್ಕೃತಿಕ ತಂಡವಾದ -ಕೃಷ್ಣಾ- ತಂಡವು ಕಾರ್ಯಕ್ರಮವನ್ನು ಸಂಯೋಜಿಸಿತ್ತು. ಈ ಸಂದರ್ಭದಲ್ಲಿ -ಕೃಷ್ಣಾ- ತಂಡವು ಹಾಡುಗಾರಿಕೆ, ಮ್ಯಾಜಿಕ್ ಶೋ, ಮುಂತಾದ ಇನ್ನಿತರ ಕಲಾ ಪ್ರದರ್ಶನಗಳನ್ನು ನೀಡಿ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ನೀಡಿತ್ತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಅನಿಲ್ ಬಾಸಗಿಯವರು ಸ್ವಾಗತಿಸಿದರೆ ದೂಮಣ್ಣ ರೈಯವರು ಕಾರ್ಯಕ್ರಮದ ಕಿರುಪರಿಚಯ ನೀಡಿದರು. ಛದ್ಮವೇಷದ ತೀರ್ಪುಗಾರರಾಗಿ ಶ್ರೀಯುತ ಜಗನ್ನಾಥ ಕಡೆಕಾರ್, ಸತ್ಯನಾರಾಯಣ ಹಾಗೂ ಶ್ರೀಮತಿ ಸೌಮ್ಯರವರು ಸಹಕರಿಸಿ ಸ್ಪರ್ಧೆಯ ಬಗ್ಗೆ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಮಂಡಿಸಿದರು. ಅಧ್ಯಕ್ಷರಾದ ಆಸ್ಟಿನ್ ಸಂತೋಷ್ ರವರು ಮಾತನಾಡಿ ಸದಸ್ಯರ ಉತ್ಸಾಹದಿಂದ ಭಾಗವಹಿಸಿದುದನ್ನು ಶ್ಲಾಷಿಸಿದರು. 
ಇದೇ ಸಂದರ್ಭದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಎಲ್ಲಾ ಮಕ್ಕಳ ಹುಟ್ಟುಹಬ್ಬವನ್ನು ಸಾಮೂಹಿಕವಾಗಿ ಆಚರಿಸಲಾಯಿತು.
ಪುಟಾಣಿಗಳಾದ ದೀಪ ಹಚ್ಚಿ, ಕೇಕ್ ಕತ್ತರಿಸಿ ಸಿಹಿ ಹಂಚಿ ತಮ್ಮ ಸಂಭ್ರಮವನ್ನು ಹಂಚಿಕೊಂಡರು. -ಕೃಷ್ಣಾ- ತಂಡದ ವಿಜಯ ಸತ್ಯನಾರಾಯಣ, ಚೇತನಾ ಹೆಗಡೆ ಹಾಗೂ ಸುಧೀರ್ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.
ವಯೋಮಿತಿಗನುಸಾರವಾಗಿ ಛದ್ಮವೇಶ ಸ್ಪರ್ಧೆಯ ಫಲಿತಾಂಶ ಈ ಕೆಳಗಿನಂತಿದೆ:
(ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳು:)
ವಯೋಮಿತಿ 3 ರಿಂದ 5 ವರ್ಷ: ದಯಾ ಗಿರೀಶ್, ರಿಶಿ ಶೆಟ್ಟಿ, ಮಹಾಲಸಾ ವಯೋಮಿತಿ 5 ರಿಂದ 8 ವರ್ಷ: ತಾನ್ಯಾ ಗಿರೀಶ್, ಕಿಶನ್, ಕೌಶಿಕಾ ಶೆಟ್ಟಿ ವಯೋಮಿತಿ 8 ರಿಂದ 13 ವರ್ಷ: ಸಂಪತ್ ಜತ್ತನ್ನ, ತಕ್ಷಕ್ ಪೈ, ನಿಹಾರ್ ಕರೀಮ್ ವಯೋಮಿತಿ 18ಕ್ಕೆ ಮೇಲ್ಪಟ್ಟು: ಚೇತನಾ ಹೆಗಡೆ, ಶಂಕರ್ ಜತ್ತನ್ನ
{ಚಿತ್ರ, ವರದಿ: ಕಮಲಾಕ್ಷ ಅಮೀನ್, ಮನಾಮಾ, ಬಹರೇನ್}
ವರದಿಯ ವಿವರಗಳು |
 |
ಕೃಪೆ : ಕಮಲಾಕ್ಷ ಅಮೀನ್,ಬಹರೇನ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-09-21
|
|
|