ಬೆಳ್ತಂಗಡಿ ತಾಲೂಕು ಮಟ್ಟದ ತುಳು ಕ್ರೀಡಾಕೂಟಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಚಾಲನೆ
ಪ್ರಕಟಿಸಿದ ದಿನಾಂಕ : 2009-11-09
ಬೆಳ್ತಂಗಡಿ, ನ.೮: ತುಳು ಸಂಸ್ಕೃತಿಗೆ ಜಾತಿ-ಮತಗಳ ಭೇದವಿಲ್ಲ, ತುಳುವರೆಲ್ಲರೂ ಒಟ್ಟಾಗಿ ಕಲೆತು ತಮ್ಮ ಜಾನಪದ ಸಂಸ್ಕೃತಿಯನ್ನು ಸ್ಮರಿಸಿ ಕೊಳ್ಳುವುದಕ್ಕಾಗಿ ತುಳು ಜಾನಪದ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಬೆಳ್ತಂಗಡಿಯಲ್ಲಿ ತಾಲೂಕು ಮಟ್ಟದ ತುಳು ಜಾನಪದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತ ನಾಡುತ್ತಿದ್ದರು. ಉಜಿರೆಯಲ್ಲಿ ನಡೆಯಲಿರುವ ವಿಶ್ವ ತುಳು ಸಮ್ಮೇಳನವು ತುಳುವರನ್ನು ಒಗ್ಗೂಡಿಸಿ ತುಳು ಸಂಸ್ಕೃತಿ, ಭಾಷೆಯ ಅಳಿವುಉಳಿವಿನ ಕುರಿತು ಚಿಂತನೆ ನಡೆಸಲು ವೇದಿಕೆಯಾಗಲಿದೆ ಎಂದು ಹೆಗ್ಗಡೆ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳ್ತಂಗಡಿ ಸೋಮನಾಥೇಶ್ವರ ದೇವಳದ ಆಡಳಿತ ಮೊಕ್ತೇಸರ ಜಯವರ್ಮರಾಜ್ ಬಲ್ಲಾಳ್, ತುಳು ಜಾನಪದ ಕ್ರೀಡೆಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಅನಿವಾರ್ಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕ ಕೆ.ವಸಂತ ಬಂಗೇರ, ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಫಾ.ಜೋಸೆಫ್ ಮಾತನಾಡಿ ಶುಭ ಹಾರೈಸಿದರು.
ಕ್ರೀಡಾ ಸಮಿತಿಯ ತಾಲೂಕು ಅಧ್ಯಕ್ಷ ಗಂಗಾಧರ ಮಿತ್ತಮಾರು ಸ್ವಾಗತಿಸಿದರು. ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.