ಉಡುಪಿಯಲ್ಲಿ ಗೊಬ್ಬುಲೆನ ಪಂಥ: ಉದ್ಯಾವರದ ಗಣಪತಿ ದೇವಸ್ಥಾನದ ಎದುರು ತುಳು ಜಾನಪದ ಗೊಬ್ಬು |
ಪ್ರಕಟಿಸಿದ ದಿನಾಂಕ : 2009-11-09
{ ತುಂಬಾ ಚಿತ್ರಗಳಿವೆ }
ಉಡುಪಿ, ನ.೮: ವಿಶ್ವ ತುಳು ಸಮ್ಮೇಳನದ ಅಂಗವಾಗಿ ‘ತುಳು ಜಾನಪದ ಗೊಬ್ಬುಲೆನ ಪಂಥ’ದಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ 35 ವಾರ್ಡುಗಳೊಂದಿಗೆ, ತೆಂಕನಿಡಿ ಯೂರು, ಕೆಳಾರ್ಕಳಬೆಟ್ಟು, ಕಲ್ಯಾಣಪುರ ಹಾಗೂ ಉಪ್ಪೂರು ಗ್ರಾಪಂ ವ್ಯಾಪ್ತಿಯನ್ನು ಒಳಗೊಂಡ ಉಡುಪಿ ವಲಯ ಮಟ್ಟದ ಸ್ಪರ್ಧೆಗಳನ್ನು ರವಿವಾರ ಉಡುಪಿ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಲಾಗಿತ್ತು.
ಕ್ರೀಡಾಕೂಟವನ್ನು ಕಡಿಯಾಳಿ ದೇವಸ್ಥಾನದ ಧರ್ಮದರ್ಶಿ ಅನಂತರಾಮ ಉಪಾಧ್ಯ ಉದ್ಘಾಟಿಸಿದರು. ನಗರಸಭಾ ಮಾಜಿ ಸದಸ್ಯೆ ಶಾಂತ ವಿ.ಆಚಾರ್ಯ ಆಟಕ್ಕೆ ಚಾಲನೆ ನೀಡಿದರು. ನಗರಸಭಾ ಸದಸ್ಯರಾದ ಭಾರತಿ ಚಂದ್ರಶೇಖರ್ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಲ್ಪೆಯ ಯುವ ಉದ್ಯಮಿ ಪ್ರಮೋದ್ ಮಧ್ವರಾಜ್ ಮಾತನಾಡಿ, ತುಳು ಸಂಸ್ಕೃತಿ ಹಾಗೂ ಪರಂಪರೆ ಉತ್ಕೃಷ್ಠವಾದುದು. ಅದನ್ನು ಕ್ರೀಡೆಯ ಮೂಲಕ ಪುನರುಜ್ಜೀವಗೊಳಿಸುವ ಕೆಲಸ ನಡೆಸಬೇಕಾಗಿದೆ. ಗ್ರಾಮೀಣ ಪ್ರದೇಶಗಳಿಂದಾಗಿ ಇಂದು ತುಳು ಸಂಸ್ಕೃತಿಯ ಬೇರು ಇನ್ನೂ ಭದ್ರವಾಗಿ ತಳವೂರಿದೆ ಎಂದರು.

ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರಾದ ಕೇಶವ ಗೌಡ, ಈಶ್ವರ ಚಿಟ್ಪಾಡಿ, ಉಡುಪಿ ವಲಯ ಸಮಿತಿಯ ಗೌರವಾಧ್ಯಕ್ಷ ರವಿರಾಜ್ ಹೆಗ್ಡೆ, ಉಪಾಧ್ಯಕ್ಷ ರಮೇಶ್ ಬಂಗೇರ, ದಿನೇಶ್ ಬಂಗೇರ ಉಪಸ್ಥಿತರಿದ್ದರು. ಅಧ್ಯಕ್ಷ ಜನಾರ್ದನ ತೋನ್ಸೆ ಸ್ವಾಗತಿಸಿ ದರು. ಪಾಂಡುರಂಗ ನಾಯಕ್ ವಂದಿಸಿದರು. ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ದರು.
ಇದಕ್ಕೂ ಮುನ್ನಾ ನಡೆದ ಮೆರವಣಿಗೆ ಕಡಿಯಾಳಿ ದೇವಸ್ಥಾನದಿಂದ ಹೊರಟು ಎಂಜಿಎಂ ಮೈದಾನದಲ್ಲಿ ಸಮಾಪ್ತಿಗೊಂಡಿತು. ವೈಭವದ ವಿಶಿಷ್ಟ ಮೆರವಣಿಗೆಯಲ್ಲಿ ಕಂಬಳದ ಕೋಣಗಳು, ಯಕ್ಷಗಾನ, ಮಹಿಳೆಡೊಳ್ಳು ಕುಣಿತ ಗಮನ ಸೆಳೆಯಿತು.

ಉಡುಪಿ, ನ.೮: ಉಜಿರೆಯಲ್ಲಿ ನಡೆಯಲಿರುವ ವಿಶ್ವ ತುಳು ಸಮ್ಮೇಳನದ ಅಂಗವಾಗಿ ಉದ್ಯಾವರ ವಲಯದ ಜಾನಪದ ಕ್ರೀಡೆ ‘ತುಳು ಜಾನಪದ ಗೊಬ್ಬು’ ರವಿವಾರ ಉದ್ಯಾವರದ ಗಣಪತಿ ದೇವಸ್ಥಾನದ ಎದುರಿನ ಯುಎಫ್ಸಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.
ಪುರುಷರಿಗೆ ಲಗೋರಿ, ಕುಟ್ಟಿದೊನ್ನೆ, ಬಚ್ಚ(ಬೀಜದ ಗೊಬ್ಬು), ಮಹಿಳೆಯರಿಗೆ ಜುಬಿಲಿ, ಕಲ್ಲಾಟ, ಟೊಂಕ, ಮಕ್ಕಳಿಗೆ ಲಗೋರಿ, ಬೆರ್ಚೆಂಡೆ, ಟೊಂಕ ಹಾಗೂ ಸಾರ್ವಜನಿಕರಿಗೆ ಚೆನ್ನೆಮಣೆ, ಕ್ರಿಕೆಟ್(ಕೊತಳಿಗೆ ಬ್ಯಾಟ್) ಆಟ ಏರ್ಪಡಿಸಲಾಗಿತ್ತು. ಇದರಲ್ಲಿ ಹೆಚ್ಚಿನ ಜನ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಅತ್ತ ಕ್ರೀಡಾಂಗಣದಲ್ಲಿ ಕ್ರೀಡೆಗಳು ನಡೆಯುತ್ತಿದ್ದರೆ ಇತ್ತ ಚಿತ್ರ ಕಲಾವಿದರಾದ ಶೇಖರ್, ಕೆ.ಎಲ್.ಆಚಾರ್ಯ, ರಮೇಶ್ ಕಿದಿಯೂರು ಮೊದಲಾದ ಕಲಾವಿದರ ಕುಂಚದಿಂದ ಕ್ಯಾನ್ವಾಸ್ ಮೇಲೆ ಜಾನಪದ ಕ್ರೀಡೆಗಳ ಚಿತ್ರಗಳು ಮೂಡಿಬಂದವು. ಜಾನಪದ ಕ್ರೀಡೆಯ ಜೊತೆ ಜೊತೆಗೆ ಕೊರಗ ಜನಾಂಗದ ರವಿ ಅಂಬಲ್ಪಾಡಿ ಮತ್ತು ಬಳಗದವರಿಂದ ಜಾನ ಪದ ಡೋಲು ಮತ್ತು ಕೊಳಲು ವಾದನ ಗಮನ ಸೆಳೆಯಿತು. ಭಾಗವಹಿಸುವ ಎಲ್ಲರಿಗೂ ಗ್ರಾಮೀಣ ತುಳು ಸಂಸ್ಕೃತಿಯ ಊಟ ಉಪಚಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕ್ರೀಡಾಕೂಟಕ್ಕೆ ಚಾಲನೆ: ಕ್ರೀಡಾಕೂಟವನ್ನು ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್, ಉದ್ಯಾವರ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ನ ಧರ್ಮಗುರು ರೆ.ಫಾ.ವಿಲಿಯಂ ಮಾರ್ಟಿಸ್, ಉದ್ಯಾವರ ಜಾಮೀಯಾ ಮಸೀದಿಯ ಧರ್ಮಗುರು ಮೌಲಾನ ಅಬ್ದುಲ್ ರಶೀದ್ ರೆಹಮಾನಿ ಜೊತೆಯಾಗಿ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ತಾಲೂಕು ತುಳು ಜಾನಪದ ಕ್ರೀಡಾ ಸಮಿತಿಯ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಜುನಾಥ ಉದ್ಯಾವರ, ವಿಜಯ ಕುಮಾರ್ ಉದ್ಯಾವರ, ಸೋಮನಾಥ ಬಿ.ಕೆ., ಸುಧೀರ್ ಹೆಗ್ಡೆ, ಜಯಶೀಲ, ಉದ್ಯಾವರ ಗ್ರಾ.ಪಂ. ಅಧ್ಯಕೆ ರಜನಿ ಅಂಚನ್, ಮಣಿಪುರ ಅಧ್ಯಕ್ಷೆ ಚಂದ್ರಾವತಿ ಕೋಟ್ಯಾನ್, ಅಲೆವೂರು ಅಧ್ಯಕ್ಷೆ ಶಶಿಕಲಾ ಶೆಟ್ಟಿ, ಶ್ರೀನಿವಾಸ ಹೆಗ್ಡೆ ಉಪಸ್ಥಿತರಿದ್ದರು. ತುಳು ಜಾನಪದ ಗೊಬ್ಬುಲೆನ ಸಮಿತಿಯ ಅಧ್ಯಕ್ಷ ಎ.ಹರೀಶ್ ಕಿಣಿ ಸ್ವಾಗತಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2009-11-09
|
|
|