ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನ ೨೦೦೭, ಕುವೈತ್ |
ಪ್ರಕಟಿಸಿದ ದಿನಾಂಕ : 2007-10-01
ಕುವೈತ್ ಕನ್ನಡ ಕೂಟ
ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನ ೨೦೦೭, ಕುವೈತ್
ಆಹ್ವಾನ ಪತ್ರಿಕೆ
ಕುವೈತ್ ಕನ್ನಡ ಕೂಟ ಹಾಗೂ ಕರ್ನಾಟಕದ ಪ್ರಖ್ಯಾತ ಕಾರ್ಯಕ್ರಮ ಆಯೋಜಕರಾದ ಹೃದಯವಾಹಿನಿ ಸಂಸ್ಥೆ ಜಂಟಿಯಾಗಿ ೬೦ನೆಯ ಸ್ವಾತಂತ್ಯೋತ್ಸವ ಹಾಗೂ ಕರ್ನಾಟಕ ರಾಜ್ಯ ಸುವರ್ಣ ಮಹೋತ್ಸವದ ಅಂಗವಾಗಿ ನವೆಂಬರ್ ೩೦ ಹಾಗೂ ಡಿಸೆಂಬರ್ ೧ ರಂದು "ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ- ೨೦೦೭" ಸಮ್ಮೇಳನವನ್ನು ಕುವೈತಿನ ಅಮೇರಿಕನ್ ಇಂಟರ್ನಾಶನಲ್ ಶಾಲೆಯ ಡಾ. ಕಾಮಿಲ್ ಅಲ್ ರೇಯೀಸ್ ಆಡಿಟೋರಿಯಂ ಸಭಾಂಗಣದಲ್ಲಿ ಆಚರಿಸಲಿವೆ. ಹೃದಯವಾಹಿನಿ ಸಂಸ್ಥೆ ಈ ಮೊದಲೇ ಹಲವಾರು ಕನ್ನಡ ಸಾಂಸ್ಕೃತಿಕ ಸಮ್ಮೇಳನಗಳನ್ನು ಅಬುಧಾಬಿ, ಸಿಂಗಾಪುರ ಹಾಗೂ ಬಹ್ರೈನ್ ಗಳಲ್ಲಿ ಯಶಸ್ವಿಯಾಗಿ ನಡೆಸಿಕೊಟ್ಟಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ರಾಷ್ಟ್ರಕವಿ ಶ್ರೀ ಜಿ.ಎಸ್.ಶಿವರುದ್ರಪ್ಪ ಅವರು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಕರ್ನಾಟಕದ ಹೆಸರಾಂತ ಕವಿಗಳು, ಕಲಾವಿದರು, ಹಾಸ್ಯ ಸಾಹಿತಿಗಳು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜಗತ್ತಿನ ವಿವಿಧೆಡೆಗಳಿಂದ ಪ್ರಮುಖ ವ್ಯಕ್ತಿಗಳು ಆಗಮಿಸುವ ನೀರೀಕ್ಷೆ ಇದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಹೊರತಾಗಿ ಕವನ, ಆರೋಗ್ಯ, ಮಾಧ್ಯಮ, ಕೈಗಾರಿಕೆ, ಹಾಸ್ಯ ಮೊದಲಾದ ವಿಷಯಗಳ ಕುರಿತಾಗಿ ಚರ್ಚೆ ಹಾಗೂ ಗೋಷ್ಠಿ ಆಯಾ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವವರ ಹಾಗೂ ಸಭಿಕರ ನಡುವೆ ನಡೆಯಲಿದೆ. ಕಲೆ ಮತ್ತು ಪುಸ್ತಕಗಳ ಪ್ರದರ್ಶನವನ್ನೂ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರಗಳನ್ನು www.kuwaitkannadakoota.org ಅಂತರ್ಜಾಲ ತಾಣದಿಂದ ಪಡೆಯಬಹುದಾಗಿದೆ.
ಕುವೈತ್ ಕನ್ನಡ ಕೂಟ ಈ ಮೂಲಕ ಎಲ್ಲಾ ಕನ್ನಡ ಸಂಘಗಳ ಪ್ರಮುಖ ಸ್ಥಾನಗಳಲ್ಲಿರುವವರಿಗೆ, ಕಲಾವಿದರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡುತ್ತಿದೆ. ಕಲಾವಿದರಿಗೆ ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲಾವಧಿಯಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಅವಕಾಶವಿದೆ. ಆಸಕ್ತರು ಈ ಅವಕಾಶದ ಉಪಯೋಗ ಪಡೆದುಕೊಳ್ಳಬೇಕಾಗಿ ಕೋರಿದೆ.
ಸಮ್ಮೇಳನಕ್ಕೆ ಭಾಗವಹಿಸಲಿಚ್ಛಿಸುವ ಪ್ರಮುಖರಿಗೆ ಹಾಗೂ ಕಲಾವಿದರಿಗೆ ಅಗತ್ಯ ವಿವರಗಳ ಪರಿಶೀಲನೆಯ ಬಳಿಕ ಕುವೈತ್ ರಾಷ್ಟ್ರಕ್ಕೆ ಪ್ರವೇಶಿಸಲು ಬೇಕಾದ ವೀಸಾ ಪಡೆಯಲು ಸಹಾಯ, ಕುವೈತ್ ನಲ್ಲಿದ್ದಷ್ಟು ದಿನ ಊಟ ಹಾಗೂ ವಸತಿ ಸೌಕರ್ಯ ಕನ್ನಡ ಕೂಟ ಕುವೈತ್ ವತಿಯಿಂದ ಒದಗಿಸಲಾಗುವುದು.
ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅಥವಾ ತಮ್ಮ ಅನಿಸಿಕೆ ಮತ್ತು ಸಲಹೆಗಳನ್ನು president@kuwaitkannadakoota.org ಈ-ಮೇಲ್ ವಿಳಾಸಕ್ಕೆ ಈ ಮೇಲ್ ಕಳಿಸುವುದರ ಮೂಲಕ ಅಥವಾ ದೂರವಾಣಿ ಸಂಖ್ಯೆ: 00965 9535328 ಕ್ಕೆ ಕರೆ ಮಾಡುವುದರ ಮೂಲಕ ಪಡೆಯಬಹುದಾಗಿದೆ.
ವರದಿಯ ವಿವರಗಳು |
 |
ಕೃಪೆ : ಕನ್ನಡ ಕೂಟ ಕುವೈತ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-10-01
|
|
|