ಬಂಟ್ವಾಳ/ಬಜಪೆ: ಇಬ್ಬರಿಗೆ ತಂಡದಿಂದ ಹಲ್ಲೆ: ಬಂಟ್ವಾಳ, ಬಜಪೆ ಉದ್ವಿಗ್ನ |
ಪ್ರಕಟಿಸಿದ ದಿನಾಂಕ : 2008-08-28
ಬಂಟ್ವಾಳ/ಬಜಪೆ, ಆ. ೨೭: ಬಿ.ಸಿ. ರೋಡ್ ಮತ್ತು ಬಜಪೆಯಲ್ಲಿ ಇಂದು ರಾತ್ರಿ ಯುವಕರಿಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಎರಡೂ ಕಡೆಗಳಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.

ಬಂಟ್ವಾಳದಲ್ಲಿ ಭಾಸ್ಕರ್ (೩೫) ಮತ್ತು ಬಜಪೆಯಲ್ಲಿ ಅನಿಲ್ (೩೦) ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಇಬ್ಬರನ್ನೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ಕಡೆ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ. ಬಿ.ಸಿ.ರೋಡ್ ಕೈಕಂಬದಲ್ಲಿ ದುಷ್ಕರ್ಮಿಗಳು ಪರ್ಲಿಯಾ ನಿವಾಸಿ ಭಾಸ್ಕರ ಟೈಲರ್ ಅವರನ್ನು ತಲವಾರಿನಿಂದ ಕಡಿದು ಗಂಭೀರವಾಗಿ ಗಾಯಗೊಳಿಸಿದ ತಂಡ ಕತ್ತಲಲ್ಲಿ ಪರಾರಿಯಾಗಿದೆ.
ಈ ಸಂದರ್ಭ ವಿದ್ಯುತ್ ಕಡಿತವಾಗಿತ್ತು. ಭಾಸ್ಕರ ಅವರು ತನ್ನ ಅಂಗಡಿಯನ್ನು ಮುಚ್ಚುತ್ತಿದ್ದ ಸಂದರ್ಭ ಹಿಂದಿನಿಂದ ಬಂದ ದುಷ್ಕರ್ಮಿಗಳು ತಲವಾರಿನಿಂದ ಕಡಿದರು. ದುಷ್ಕರ್ಮಿಗಳು ರಿಕ್ಷಾ ಮತ್ತು ಬೈಕ್ನಲ್ಲಿ ಬಂದಿದ್ದರೆನ್ನಲಾಗಿದೆ. ಬಿ.ಸಿ.ರೋಡ್ನಲ್ಲಿ ಜನರು ರಿಕ್ಷಾವೊಂದನ್ನು ತಡೆದಾಗ ಅದರಲ್ಲಿದ್ದವರು ಕೂಡಲೇ ಹಿಂದಿನಿಂದ ಬರುತ್ತಿದ್ದ ಬೈಕ್ನಲ್ಲಿ ಪರಾರಿಯಾಗಿದ್ದರೆನ್ನಲಾಗಿದೆ.

ಲಾಠಿ ಚಾರ್ಜ್ ಘಟನೆಯ ಸುದ್ದಿ ಹರಡುತ್ತಿದ್ದಂತೆ ಬಿ.ಸಿ. ರೋಡ್ನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಕೆಲವೆಡೆ ಹಲವು ಅಂಗಡಿಗಳಿಗೆ ಕಲ್ಲು ತೂರಾಟ ನಡೆದಿದೆ. ರಾತ್ರಿ ೧೦.೩೦ರ ಸುಮಾರಿಗೆ ಬಿ.ಸಿ. ರೋಡ್ನಲ್ಲಿ ಮತ್ತಷ್ಟು ಜನ ಜಮಾಯಿಸಿದ್ದರಿಂದ ಪೊಲೀಸರು ಲಾಠಿಚಾರ್ಜ್ ಮಾಡಿ ಚದುರಿಸಿದರು. ಆರೋಪಿಗಳ ಪತ್ತೆಗಾಗಿ ತಂಡ ರಚಿಸಲಾಗಿದೆ ಎಂದು ಪ್ರಭಾರ ಡಿವೈಎಸ್ಪಿ ಮಂಜುನಾಥ ಕವರಿ ತಿಳಿಸಿದ್ದಾರೆ. ಸ್ಥಳಕ್ಕೆ ಕೆ.ಎಸ್.ಆರ್.ಪಿ., ಜಿಲ್ಲಾ ಸಶಸ್ತ್ರ ದಳ, ಅಗ್ನಿಶಾಮಕ ದಳವನ್ನು ಕರೆಸಿಕೊಳ್ಳಲಾಗಿದೆ. ಸ್ಥಳಕ್ಕೆ ಐಜಿಪಿ ಎ.ಎಂ. ಪ್ರಸಾದ್, ಎಸ್ಪಿ ಸತೀಶ್ ಕುಮಾರ್ ಭೇಟಿ ನೀಡಿದ್ದಾರೆ.

ಬಜಪೆ ಪ್ರಕರಣ ಬಜಪೆಯಲ್ಲಿ ಇಂದು ರಾತ್ರಿ ವಿಮಾನ ನಿಲ್ದಾಣದಲ್ಲಿ ಕೆಲಸ ನಿರ್ವಹಿಸಿ ಬೈಕ್ನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದ ಅನಿಲ್ ಅವರನ್ನು ತಂಡವೊಂದು ತಡೆದು ಹಲ್ಲೆ ನಡೆಸಿದೆ. ಬಜಪೆಯ ಓಲ್ಡ್ ಕಾನ್ವೆಂಟ್ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಅನಿಲ್ ಅವರಿಗೆ ಓರ್ವ ರಾಡ್ನಿಂದ ಮತ್ತೊಬ್ಬ ಮಚ್ಚಿನಿಂದ ಹಲ್ಲೆ ನಡೆಸಿದ ಎನ್ನಲಾಗಿದೆ. ದುಷ್ಕರ್ಮಿಗಳು ಬಜಪೆ ಪರಿಸರದವರು ಎನ್ನಲಾಗಿದೆ. ಬಜಪೆ ಮತ್ತು ಬಂಟ್ವಾಳ ಘಟನೆಗಳ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದಾರೆ. ರಾತ್ರಿ ಗಸ್ತನ್ನು ಬಿಗುಗೊಳಿಸಲಾಗಿದೆ. ಬಜಪೆ ಪರಿಸರಕ್ಕೆ ಕೂಡಲೇ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ| ವಾರ್ತಾಭಾರತಿ ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2008-08-28
|
|
|