ಕೆಆರ್ಎಸ್ ಕ್ರೆಸ್ಟ್ಗೇಟ್ ಹಿಂದಿನ ಇತಿಹಾಸ |
ಪ್ರಕಟಿಸಿದ ದಿನಾಂಕ : 2008-08-22
ಬೆಂಗಳೂರು: ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಮೈಸೂರಿನ ಕೃಷ್ಣರಾಜ ಸಾಗರ ಅಣೆಕಟ್ಟೆ ನಿರ್ಮಾಣದ ಹಿಂದೆ ಭವ್ಯ ಚರಿತ್ರೆ ಅಡಗಿದೆ.
ಅಣೆಕಟ್ಟೆ ನೀರು ಸಂಗ್ರಹಿಸಲು ಯಾಂತ್ರೀಕೃತವಾಗಿ ತೆರೆದು-ಮುಚ್ಚಿಕೊಳ್ಳುವ ಕ್ರೆಸ್ಟ್ಗೇಟ್ಗಳ ವಿನ್ಯಾಸವನ್ನು ರೂಪಿಸಿದ್ದು ಆಗಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯನವರು. ಅದು ಕೆಆರ್ಎಸ್ ಅಣೆಕಟ್ಟು ನಿರ್ಮಾಣಕ್ಕೂ 20 ವರ್ಷ ಮೊದಲು.

ವಿಶ್ವೇಶ್ವರಯ್ಯ ಸಿದ್ಧಪಡಿಸಿದ ಕ್ರೆಸ್ಟ್ಗೇಟ್ ವಿನ್ಯಾಸವನ್ನು ಬಹುವಾಗಿ ಮೆಚ್ಚಿಕೊಂಡ ಬ್ರಿಟಿಷರು ಅದನ್ನು ಲಂಡನ್ನಲ್ಲಿ ಸಿದ್ಧಪಡಿಸಿ, ಪೂನಾದಲ್ಲಿನ ಜಲಾಶಯವೊಂದಕ್ಕೆ ಅಳವಡಿಸಿದ್ದರು. ಈ ಜಲಾಶಯದಲ್ಲಿ ಕ್ರೆಸ್ಟ್ಗೇಟ್ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿತ್ತು.
ವಿನ್ಯಾಸ ಉತ್ತಮಪಡಿಸಿದರು: ಅನಂತರ ಮೈಸೂರು ಸಂಸ್ಥಾನಕ್ಕೆ ದಿವಾನರಾದ ನಂತರ 1911 ರಲ್ಲಿ ಕೆಆರ್ಎಸ್ ಅಣೆಕಟ್ಟೆ ನಿರ್ಮಾಣಕ್ಕೆ ವಿಶ್ವೇಶ್ವರಯ್ಯ ಮುಂದಾದರು. ಈ ಸಂದರ್ಭದಲ್ಲಿ ಈ ಹಿಂದೆಯೇ ಸಿದ್ಧಪಡಿಸಿದ್ದ ಕ್ರೆಸ್ಟ್ಗೇಟ್ನ ವಿನ್ಯಾಸವನ್ನು ಮತ್ತಷ್ಟು ಉತ್ತಮಪಡಿಸಿದರು.
ಈ ಬದಲಾದ ವಿನ್ಯಾಸದಂತೆ ಬ್ರಿಟಿಷರು ಲಂಡನ್ನಲ್ಲಿ ಕ್ರೆಸ್ಟ್ಗೇಟ್ಗಳ ನಿರ್ಮಾಣ ಮಾಡಿದರು ಎಂದು ಹೇಳುತ್ತಾರೆ ವಿಶ್ವೇಶ್ವರಯ್ಯನವರ ಮೇಲೆ ಪ್ರೌಢಪ್ರಬಂಧ ಬರೆದು ಡಾಕ್ಟರೆಟ್ ಪದವಿ ಪಡೆದ ಮೈಸೂರಿನ ಡಾ| ಡಿ.ಎಸ್. ಜಯಪ್ಪಗೌಡ.
ವಿಶ್ವೇಶ್ವರಯ್ಯನವರು ವಿನ್ಯಾಸ ಪಡಿಸಿದ ಈ ಕ್ರೆಸ್ಟ್ಗೇಟ್ಗಳು ಆಗಿನ ಕಾಲಕ್ಕೆ ವಿನೂತನವೆನಿಸುವಂತಿದ್ದವು. ಈಗ ಸರ್ಕಾರ ಅವುಗಳನ್ನು ಬದಲಾಯಿಸಲು ಮುಂದಾಗಿದ್ದರೆ, ಸೂಕ್ತ ಅಧ್ಯಯನ ನಡೆಸಿ ಸಾಧಕ-ಬಾಧಕ ಪರಿಶೀಲಿಸುವ ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ, ಅನಾಹುತ ಎದುರಿಸಬೇಕಾದೀತು ಎಂದು ಎಚ್ಚರಿಸುತ್ತಾರೆ.
35 ವರ್ಷ ಬಾಳಿಕೆ ಅವಧಿ: ಒಟ್ಟು 173 ಕ್ರೆಸ್ಟ್ ಗೇಟ್ಗಳನ್ನು ಕೆಆರ್ಎಸ್ಗೆ ಅಳವಡಿಸಲಾಗಿದೆ. ನಿರ್ಮಾಣ ಸಂದರ್ಭದಲ್ಲಿ ಈ ಕ್ರೆಸ್ಟ್ ಗೇಟ್ಗಳು 35 ವರ್ಷ ಬಾಳಿಕೆ ಬರುತ್ತವೆ ಎಂದು ಅಂದಾಜಿಸಲಾಗಿತ್ತು. ಆದರೆ, ಈ ಅಂದಾಜನ್ನು ಮೀರಿ ಈ ಕ್ರೆಸ್ಟ್ಗೇಟ್ಗಳು 75 ವರ್ಷ ಬಾಳಿಕೆ ಬಂದಿರುವುದು ಆಗಿನ ಕಾಲದ ಕಾಮಗಾರಿಯ ಗುಣಮಟ್ಟಕ್ಕೆ ಉತ್ತಮ ನಿದರ್ಶನ.
ಇದುವರೆಗೂ ಗಟ್ಟಿಮುಟ್ಟಾಗಿದ್ದ ಕ್ರೆಸ್ಟ್ ಗೇಟ್ಗಳ ಪೈಕಿ ಒಂದು ಕ್ರೆಸ್ಟ್ಗೇಟ್ ಕಳೆದ ಮೂರು ವರ್ಷದ ಹಿಂದೆ ಶಿಥಿಲಗೊಂಡಿತ್ತು. ಆಗ ಸ್ಪಾಟ್ ಪ್ಲಗ್ ತಂತ್ರಜ್ಞಾನ ಬಳಸಿ ಶಿಥಿಲಗೊಂಡಿದ್ದ ಕ್ರೆಸ್ಟ್ಗೇಟ್ ಬದಲಿಸಲಾಯಿತು. ಈ ಘಟನೆಯ ನಂತರ ಕ್ರೆಸ್ಟ್ಗೇಟ್ಗಳನ್ನು ಬದಲಿಸುವ ಅಗತ್ಯವನ್ನು ಮನಗಂಡ ಸರ್ಕಾರ ಕ್ರೆಸ್ಟ್ಗೇಟ್ಗಳನ್ನು ಬದಲಾಯಿಸಲು ಮುಂದಾಗಿದೆ.

173 ಕ್ರೆಸ್ಟ್ಗೇಟ್ಗಳು: ಕೆಆರ್ಎಸ್ ಅಣೆಕಟ್ಟನ್ನು ನೋಡಿದವರಿಗೆ 173 ಕ್ರೆಸ್ಟ್ಗೇಟ್ಗಳು ಎಲ್ಲಿವೆ? ಎಂಬ ಅಚ್ಚರಿ ಹುಟ್ಟಬಹುದು.
ಏಕೆಂದರೆ, ಹೊರ ನೋಟಕ್ಕೆ ಕೆಲವು ಮಾತ್ರ ಕಾಣುತ್ತವೆ (ನದಿ ಭಾಗಕ್ಕೆ ಹೋಗುವ ಗೇಟ್ಗಳು ಮಾತ್ರ). ಉಳಿದ ಗೇಟ್ಗಳ ಮುಂದೆ ಗೋಡೆ ನಿರ್ಮಾಣವಾಗಿರುವುದರಿಂದ ಬಹುತೇಕ ಗೇಟ್ಗಳು ಕಾಣುವುದಿಲ್ಲ. ಈ ಗೇಟ್ಗಳನ್ನು ಒಂದರ ಮೇಲೆ ಒಂದು ಜೋಡಿಸಲಾಗಿಲ್ಲ. ಬದಲಿಗೆ ಸಾಲಾಗಿ ಇಡಲಾಗಿದೆ.
1911 ರಲ್ಲಿ ಆರಂಭ: ವಿಶ್ವೇಶ್ವರಯ್ಯ ಅವರ ನೇತೃತ್ವದಲ್ಲಿ ಕೆಆರ್ಎಸ್ ಅಣೆಕಟ್ಟೆಯ ನಿರ್ಮಾಣ 1911 ರಲ್ಲಿ ಆರಂಭಗೊಂಡು 1933ರಲ್ಲಿ ಮುಕ್ತಾಯಗೊಂಡಿತು. ಅಣೆಕಟ್ಟು ನಿರ್ಮಾಣಕ್ಕೆ ಆಗ ತಗುಲಿದ ಒಟ್ಟಾರೆ ವೆಚ್ಚ 323 ಕೋಟಿ ರುಪಾಯಿಗಳು.
ಈ ಅಣೆಕಟ್ಟೆಯು 44.8 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಕಾವೇರಿ 113 ಟಿಎಂಸಿ ನೀರು, ತಮಿಳುನಾಡಿನಲ್ಲಿ 252 ಟಿಎಂಸಿ ಮತ್ತು ಕರ್ನಾಟಕದಲ್ಲಿ 425ಟಿಎಂಸಿ ನೀರು ನದಿ ಸೇರುತ್ತದೆ.
ಕೆಆರ್ಎಸ್ನ ಶಿಥಿಲ ಕ್ರೆಸ್ಟ್ಗೇಟ್ ಬದಲು
ಬೆಂಗಳೂರು: ವಿಶ್ವವಿಖ್ಯಾತ ಕೆಆರ್ಎಸ್ ಅಣೆಕಟ್ಟೆಗೆ 75 ವರ್ಷ ತುಂಬಿದ ಪ್ರಯುಕ್ತ, ಅಣೆಕಟ್ಟೆಯ ಶಿಥಿಲಗೊಂಡಿರುವ ಕ್ರೆಸ್ಟ್ ಗೇಟುಗಳನ್ನು ಬದಲಿಸಲು ನಿರ್ಧರಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಯೋಗಿಕವಾಗಿ ಕೆಆರ್ಎಸ್ ಜಲಾಶಯದ ಒಂದು ಕ್ರೆಸ್ಟ್ ಗೇಟನ್ನು ಈಗಾಗಲೇ ಬದಲಾಯಿಸಲಾಗಿದೆ.
ಉಳಿದ ಶಿಥಿಲಗೊಂಡಿರುವ ಕ್ರೆಸ್ಟ್ ಗೇಟ್ಗಳ ಬದಲಾವಣೆ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಷ್ಟು ಗೇಟ್ಗಳು ಶಿಥಿಲಗೊಂಡಿವೆ. ಇವುಗಳ ದುರಸ್ಥಿಗೆ ಎಷ್ಟು ವೆಚ್ಚವಾಗಲಿದೆ ಎಂಬಿತ್ಯಾದಿ ಮಾಹಿತಿಯನ್ನು ವರದಿ ಒಳ್ಳಗೊಳ್ಳಲಿದೆ. ಈ ವರದಿ ಬಂದ ನಂತರ ಕ್ರೆಸ್ಟ್ ಗೇಟುಗಳ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಲಾಶಯ ತುಂಬಿರುವಾಗಲೇ ಕ್ರೆಸ್ಟ್ ಗೇಟ್ ಬದಲಾವಣೆ ಹೇಗೆ ಸಾಧ್ಯ ಎಂಬ ಪ್ರಶ್ನೆಗೆ, ‘ಸ್ಟಾಪ್ ಪ್ಲಗ್’ ಎಂಬ ತಂತ್ರಜ್ಞಾನದಿಂದ ನೀರು ಇರುವಾಗಲೇ ಗೇಟ್ ಬದಲಾವಣೆ ಸಾಧ್ಯವಿದೆ. ಈ ತಂತ್ರಜ್ಞಾನದಲ್ಲಿ ನೀರನ್ನು ತಡೆಹಿಡಿಯುವಂತೆ ಮತ್ತೊಂದು ತಾತ್ಕಾಲಿಕ ಗೇಟ್ ನಿರ್ಮಿಸಿ, ಕ್ರೆಸ್ಟ್ಗೇಟ್ ಬದಲಾಯಿಸಬಹುದು. ಈ ತಂತ್ರಜ್ಞಾನ ಬಳಸಿ ಒಂದು ಕ್ರೆಸ್ಟ್ಗೇಟ್ ಬದಲಿಸಲಾಗಿದೆ ಎಂದು ಹೇಳಿದರು.
ನೀರಾವರಿಗೆ ಹಣದ ಕೊರತೆ ಇಲ್ಲ: ಅದೇ ರೀತಿ ಮೈಸೂರು ಮಹಾರಾಜರು ನಿರ್ಮಿಸಿದ ಹಲವಾರು ಅಣೆಕಟ್ಟೆಗಳಿಗೂ 75 ವರ್ಷ ತುಂಬಿದೆ. ಇವುಗಳಲ್ಲಿ ಕೆಲವು ಶಿಥಿಲಗೊಂಡಿದ್ದರೆ, ಕೆಲವು ಮಣ್ಣಿನಲ್ಲಿ ಮುಚ್ಚಿಹೋಗಿವೆ. ಇವೆಲ್ಲವನ್ನೂ ದುರಸ್ತಿಗೊಳಿಸಲು ನಿರ್ಧರಿಸಲಾಗಿದ್ದು ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ತುಂಗಭದ್ರ ಅಣೆಕಟ್ಟು ಆಧುನೀಕರಣ ಕುರಿತು ಕೆಲವೇ ದಿನಗಳಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ರಾಜ್ಯದ ನೀರಾವರಿ ಯೋಜನೆಗಳಿಗೆ ಹಣದ ಕೊರತೆಯಿಲ್ಲ. ಮುಂಗಡಪತ್ರದಲ್ಲಿ ಮೂರು ಸಾವಿರ ಕೋಟಿ ರು.ಗೂ ಅಧಿಕ ಹಣ ಇಡಲಾಗಿದೆ. ಇದಲ್ಲದೆ, ಇನ್ನೂ ಹೆಚ್ಚಿನ ಹಣದ ಅಗತ್ಯ ಬಿದ್ದರೆ, ಕೇಂದ್ರದ ಅನುದಾನ ಹಾಗೂ ವಿದೇಶಿ ಸಾಂಸ್ಥಿಕ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಾದರೂ ಹಣ ಒದಗಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದರು.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-08-22
|
|
|