ದಿನವೂ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಅಬ್ಬಿ ಫಾಲ್ಸ್ |
ಪ್ರಕಟಿಸಿದ ದಿನಾಂಕ : 2008-08-11
ಮಡಿಕೇರಿ: ಕನ್ನಡ ನಾಡಿನ ಪ್ರಮುಖ ಜಲಧಾರೆಗಳಲ್ಲಿ ಮಡಿಕೇರಿಯ ಅಬ್ಬಿ ಜಲಪಾತವು ಒಂದಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಪ್ರತಿದಿನವೂ ದೇಶ -ವಿದೇಶಗಳ ಪ್ರವಾಸಿಗರನ್ನು ಹೆಚ್ಚು ಹೆಚ್ಚಾಗಿ ಆಕರ್ಷಿಸುತ್ತಿದೆ. ಪ್ರಸ್ತುತ ಮಳೆಗಾಲವಾದ್ದರಿಂದ ಅಬ್ಬಿ ಫಾಲ್ಸ್ ಮೈದುಂಬಿ ಹರಿಯುತ್ತಿದೆ.
ಮಡಿಕೇರಿ ನಗರದಿಂದ Z೮ ಕಿ. ಮೀ. ದೂರದಲ್ಲಿರುವ ಈ ಅಬ್ಬಿ ಫಾಲ್ಸ್ ಎಂಬ ಜಲಕನ್ಯೆ ಬಳುಕುತ್ತ ಕಾಫಿ - ಏಲಕ್ಕಿ ತೋಟಗಳ ನಡುವೆ ಸುಮಾರು ೮೦ ಅಡಿ ಎತ್ತರದ ಕರಿ ಬಂಡೆಗಳಿಂದ ಧುಮ್ಮಿಕ್ಕುತ್ತಿದೆ. ಹಾಲ್ನೊರೆಯಾಗಿ ಭೋರ್ಗರೆಯುತ್ತ ಧುಮ್ಮಿಕ್ಕುವ ಅಬ್ಬಿಯ ಸೌಂದರ್ಯವನ್ನು ಕಂಡು ಸಂತಸ ಪಡದವರೇ ಇಲ್ಲ. ನಿತ್ಯ ಸಂದರ್ಶಕರಿಗಂತೂ ಕೊರತೆ ಇಲ್ಲ.
ಅಬ್ಬಿಯ ಎದುರಿಗಿನ ತೂಗು ಸೇತುವೆಯಲ್ಲಿ ನಿಂತು. ಹಾಲ್ನೊರೆಯ ಸೊಬಗನ್ನು ಸವಿಯಬಹುದು. ಜಲನಾಟ್ಯವನ್ನು ಮನದಣಿಯೇ ಆಸ್ವಾದಿಸಬಹುದು.
ಬ್ರಿಟಿಷ್ ಅಧಿಕಾರಿಯಾಗಿದ್ದಾತ ತನ್ನ ಪುತ್ರಿ “ಜೆಸ್ಸಿ"ಯ ಸವಿನೆನಪಿಗಾಗಿ ಜೆಸ್ಸಿ ಫಾಲ್ಸ್ ಎಂದು ನಾಮಕರಣ ಮಾಡಿದ್ದನಂತೆ. ಅನಂತರ ಇದು “ಅಬ್ಬೆ" ಜಲಪಾತವಾಗಿ ಕಾಲಕ್ರಮೇಣ ಅಬ್ಬೆ ಹೋಗಿ “ಅಬ್ಬಿ"ಯಾಗಿ ಇದೀಗ ಅಬ್ಬಿ ಫಾಲ್ಸ್ ಆಗಿ ಪ್ರಚಲಿತದಲ್ಲಿದೆ. ಹರಿಯುವ ನೀರಿಗೆ ಕೊಳಕಂಟದು ಎಂಬ ಮಾತನ್ನೇ ನಂಬಿಕೊಂಡು ಅಬ್ಬಿಯ ಚೆಲುವು ಕೊಂಡಾಡಿ, ಪ್ರವಾಸಿ ತಾಣವಾಗಿ ಅಬ್ಬಿ ಜಲಪಾತವಾಗಿದೆ.
ಅಬ್ಬಿ ಜಲಧಾರೆಯನ್ನು ಮಾತ್ರ ನೋಡಿದರೆ, ಆನಂದ ಪಟ್ಟರೆ, ಬೆಡಗನ್ನು ಸವಿದರೆ ಸಾಕು. ಆದರೆ, ಧಾರೆಯ ಬದಿಯಲ್ಲಿ ಜಳಕದಾಟವಾಡಲು ಹೋಗಿ ಪ್ರಾಣವನ್ನು ಕಳೆದುಕೊಂಡ ಯುವಕರ ಸಂಖ್ಯೆ ಹೆಚ್ಚು. ಜಲಪಾತದ ತಪ್ಪಲಲ್ಲಿ ಸದಾ ದುರಂತ ಆಹ್ವಾನಿಸುವ ಮಡು ಇದೆ. ನೀರಿನ ಸೆಳೆತದಲ್ಲಿ ವರ್ಷಂಪ್ರತಿ ಕೆಲವು ಜೀವಗಳು ಇಲ್ಲಿ ಬಲಿಯಾಗುತ್ತಲೇ ಇರುತ್ತವೆ. ಜಲಧಾರೆ, ಜಲನಾಟ್ಯದ ಮೋಹಕತೆಗೆ ಮಾರು ಹೋಗಿ ನೀರಿನ ಸೆಳೆತದಿಂದ ಮೇಲೆ ಬರಲಾಗದೆ ಅಲ್ಲೇ ಪ್ರಾಣ ಬಿಟ್ಟ ಜೀವಗಳು ನೂರಾರು. ‘ಜಲಪಾತದ ಬಳಿ ತೆರಳದಿರಿ. ದೂರದಲ್ಲೇ ನಿಂತು ವೀಕ್ಷಿಸಿ ಆನಂದಿಸಿ’ ಎಚ್ಚರಿಕೆಯ ನಾಮಫಲಕ ಇದ್ದರೂ ಅದನ್ನು ಪ್ರವಾಸಿ ಯುವಕರು ಲೆಕ್ಕಿಸದೆ ನೀರಿಗಿಳಿಯುವರು, ಕರಿಬಂಡೆ ಮೇಲೇರುವರು.
ಅಲ್ಲಿಂದ ಉರುಳಿ ನೀರಿನಾಳಕ್ಕೆ ಬಿದ್ದು ಎರಡು ದಿನಗಳ ಅನಂತರ ಶವವಾಗಿ ಮೇಲೆ ಬರುವರು. ಯಾರಾದರೂ ಎಚ್ಚರಿಕೆಯ ಸಲಹೆ, ಸೂಚನೆ ನೀಡಿದರೂ ಅದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಸಾವನ್ನು ತಡೆಗಟ್ಟಲು ‘ಅಬ್ಬಿ ಫಾಲ್ಸ್’ಗೆ ಓರ್ವ ಪೊಲೀಸ್ ಕಾನ್ಸ್ಟೇಬಲನ್ನು ನಿಯೋಜಿಸಲಾಗಿದೆ.
ಇಲ್ಲಿ ಚುಡಾಯಿಸುವ ಪುಂಡರನ್ನು, ನೀರಿನೊಳಗೆ ಇಳಿಯುವವರನ್ನು, ಬಂಡೆ ಮೇಲೇರುವವರನ್ನು ತಡೆಗಟ್ಟಲು ಈ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಆಕಸ್ಮಿಕವಾಗಿ ಯಾರಾದರೂ ನೀರಿಗಿಳಿದು ಆಟ ಆಡುವಾಗ, ಕೈಕಾಲು ತೊಳೆಯುವಾಗ ಮುಳುಗಿದರೆ, ಬಿದ್ದರೆ ಅಂತಹವರನ್ನು ರಕ್ಷಿಸಲು ಈಜು ಅಥವಾ ಮುಳುಗು ತಜ್ಞರು ಇಲ್ಲ.
ಅಬ್ಬಿ ಫಾಲ್ಸ್ಗೆ ಮಡಿಕೇರಿಯಿಂದ ತೆರಳಲು ಯಾವುದೇ ಖಾಸಗಿ ಅಥವಾ ಸರಕಾರಿ ಬಸ್ಗಳ ಸೌಲಭ್ಯವಿಲ್ಲ, ದುಬಾರಿ ಬಾಡಿಗೆ ಹಣ ತೆತ್ತು ಬೇರೆ ವಾಹನಗಳಲ್ಲಿ, ಆಟೋಗಳಲ್ಲಿ ಹೋಗಿಬರಬೇಕಾಗಿದೆ ಅಥವಾ ಪ್ರವಾಸಿಗರು ದೂರದೂರುಗಳಿಂದ ಬಂದ ಸ್ವಂತ ವಾಹನಗಳಲ್ಲಿ ಹೋಗಿ ಬರಬೇಕಾಗುತ್ತದೆ.
ಜಿಲ್ಲಾಡಳಿತ, ಸರಕಾರ, ಪ್ರವಾಸೋದ್ಯಮ ಇಲಾಖೆ ಅಬ್ಬಿ ಫಾಲ್ಸ್ ಅನ್ನು ಮತ್ತಷ್ಟು ಸಜ್ಜುಗೊಳಿಸಬೇಕು, ಪ್ರವಾಸಿಗರಿಗೆ ಅನುಕೂಲ, ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ, ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಿ, ರಸ್ತೆಗಳನ್ನು ವಿಸ್ತರಿಸಿ, ಹೊಂಡ ಗುಂಡಿಗಳನ್ನು ಮುಚ್ಚಿಸಿ, ಡಾಮರೀಕರಣಗೊಳಿಸಿಯಾದರೂ ಮತ್ತಷ್ಟು ಪ್ರವಾಸಿಗರು ಭೇಟಿ ನೀಡುವಂತೆ ಮಾಡಬೇಕಾಗಿದೆ.
ಅಬ್ಬಿಯ ಸಹಜ ಚೆಲುವಿನಂತೆಯೇ ಈ ಜಲಧಾರೆ ಸಂದರ್ಶಕರ ಪಾಲಿಗೆ ಎಂದೆಂದೂ ಮಧುರ ನೆನಪಾಗುವಂತಾಗಲಿ ಎಂದು ಹಾರೈಸೋಣ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-08-11
|
|
|