ಆಸ್ಟ್ರೇಲಿಯಾದ ಸಿಡ್ನಿ ಕನ್ನಡ ಸಂಘಕ್ಕೀಗ 25 ವರ್ಷ.. |
ಪ್ರಕಟಿಸಿದ ದಿನಾಂಕ : 2008-07-20
ಆಸ್ಟ್ರೇಲಿಯಾದ ಸಿಡ್ನಿ ಎಂದರೆ ಕೆಲವರಿಗೆ ಕ್ರಿಕೆಟ್ ಮ್ಯಾಚ್ ನೆನಪಾಗುತ್ತದೆ. ಇನ್ನು ಕೆಲವರಿಗೆ ಒಪೆರಾ ಹೌಸ್ ಅಥವಾ ಡಾರ್ಲಿಂಗ್ ಹಾರ್ಬರ್. ಮಾಸ್ಟರ್ ಹಿರಣ್ಣಯ್ಯ, ಮಿಮಿಕ್ರಿ ದಯಾನಂದ್, ಬಿ.ಆರ್.ಛಾಯಾ ಮುಂತಾದ ಕಲಾವಿದರಿಗೆ ಕನ್ನಡ ನೆನಪಾಗುತ್ತದೆ!
ಕನ್ನಡವೆಂಬ ಭಾಷೆಯೊಂದಿದೆ ಎಂಬುದೇ ಗೊತ್ತಿಲ್ಲದ ಜನರಿರುವ ಸಿಡ್ನಿಯ ಮಣ್ಣಿಗೆ ಕನ್ನಡದ ವಾಸನೆ ಬಂದಿದ್ದು ಹೇಗೆ ಎಂದಿರಾ? ಅದು ಅಲ್ಲಿನ ಕನ್ನಡ ಸಂಘದ ಕೊಡುಗೆ. ಮೇಲೆ ಹೇಳಿದ ಕಲಾವಿದರೆಲ್ಲ ಅಲ್ಲಿಗೆ ಹೋಗಿ ಕಾರ್ಯಕ್ರಮ ಕೊಟ್ಟು ಬಂದವರು. ಆ ಸಂಘಕ್ಕೀಗ 25 .
ಕರ್ನಾಟಕದಲ್ಲಿ ಕನ್ನಡದ ಹೆಸರಿನ ಸಂಘಟನೆ ಐವತ್ತು ವರ್ಷ ಪೂರೈಸುವುದು ಅಚ್ಚರಿಯೇನಲ್ಲ. ಆದರೆ, ದೂರದ ಸಿಡ್ನಿಯಲ್ಲಿ, ಕನ್ನಡ ಮಾತಾಡುವುದು ಅನಿವಾರ್ಯ ಅಲ್ಲ ಎಂಬ ಜಾಗದಲ್ಲೂ ಕನ್ನಡ ಸಂಘವೊಂದು 25 ವರ್ಷವನ್ನು ಕ್ರಿಯಾಶೀಲವಾಗಿ ಪೂರೈಸುತ್ತದೆ ಅಂದರೆ ಅದು ವಿಶೇಷ.
ಅಮೆರಿಕ, ಬ್ರಿಟನ್ನಿನಲ್ಲಾದರೆ ರಸ್ತೆ ರಸ್ತೆಗೆ ಕನ್ನಡಿಗರು ಸಿಗುತ್ತಾರೆ. ಅವರನ್ನು ಸೇರಿಸಿ ಕೊಂಡು ಸಂಘ ಸಂಸ್ಥೆ ಕಟ್ಟುವುದು ಸುಲಭ. ಆದರೆ ಸಿಡ್ನಿಯಲ್ಲಿ ಹಾಗಲ್ಲ. ಅಲ್ಲಿರುವ ಕನ್ನಡಿಗರ ಸಂಖ್ಯೆ 4000 ಮಾತ್ರ. ಅವರಲ್ಲೇ ಆಸಕ್ತಿ ಇರುವವರನ್ನು ಕೂಡಿಸಿಕೊಂಡು ಸಂಘಕ್ಕೆ ಜೀವ ತುಂಬಿ, ಕೊನೇ ಪಕ್ಷ ನಮ್ಮ ಭಾಷೆ- ಸಂಸ್ಕೃತಿ ಮರೆಯದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದವರು ಡಾ|ಸಿದ್ಧಲಿಂಗೇಶ್ವರ ಒರೆಕೊಂಡಿ. ಅವರೇ ಈ ಸಂಘ ಕಟ್ಟಿದವರು.
ಆಗ ಇದು ಡಾಕ್ಟರ ಸಂಘ 1983 ರಲ್ಲಿ ಒರೆಕೊಂಡಿಯವರು ಇಲ್ಲೊಂದು ಕನ್ನಡ ಸಂಘ ಕಟ್ಟಬೇಕು ಎಂದು ಯೋಚಿಸಿದಾಗ ಸಿಡ್ನಿಯಲ್ಲಿ ಇದ್ದ ಕನ್ನಡಿಗರು 40 ಮಂದಿ ಮಾತ್ರ. ಅವರೆಲ್ಲರೂ ಡಾಕ್ಟರುಗಳು. ಅವರಿಂದಲೇ ಶುರುವಾದ ಸಂಘ ಕ್ರಮೇಣ ಎಂಜಿನಿಯರುಗಳು, ತಂತ್ರಜ್ಞರು ಹೀಗೆ ಸಿಡ್ನಿಗೆ ಬಂದ ಕನ್ನಡಿಗರನ್ನೆಲ್ಲ ಸೇರಿಸಿಕೊಂಡು ಬೆಳೆಯುತ್ತ ಇಂದು ಸುಮಾರು ೪೦೦೦ ಸದಸ್ಯರನ್ನು ಹೊಂದಿದೆ.
ಕನ್ನಡ ರೇಡಿಯೋ! ಬೆಂಗಳೂರಿನಲ್ಲಿರುವ ಎಫ್ಫೆಮ್ ಚಾನಲ್ಲುಗಳಲ್ಲೇ ಕನ್ನಡವನ್ನು ಹುಡುಕಿ ತೆಗೆಯಬೇಕಾದ ಸಂದರ್ಭ ಬಂದಿರುವಾಗ ಸಿಡ್ನಿ ಕನ್ನಡಿಗರು ವಾರಕ್ಕೊಂದು ದಿನ ಅಚ್ಚ ಕನ್ನಡದ ಕಾರ್ಯಕ್ರಮ ಕೇಳುತ್ತಾರೆ ಎಂದರೆ ಕರ್ನಾಟಕದ ಕನ್ನಡಿಗರಲ್ಲಿ ಅಸೂಯೆ ಹುಟ್ಟಬೇಕು!
ಸಿಡ್ನಿಯ ಎಸ್ಬಿಎಸ್ ರೇಡಿಯೋದಲ್ಲಿ ಪ್ರತಿ ಭಾನುವಾರ 5 ರಿಂದ 6 ಗಂಟೆಯ ಪ್ರೈಮ್ ಟೈಮ್ನಲ್ಲಿ ಕನ್ನಡ ಕಾರ್ಯಕ್ರಮ ಪ್ರಸಾರ ಮಾಡುವ ವ್ಯವಸ್ಥೆಯನ್ನು ಸಂಘ ಮಾಡಿಕೊಂಡಿದೆ. ಅದರ ಮೂಲಕ ಕರ್ನಾಟಕದ ಹಾಗೂ ಭಾರತದ ಸುದ್ದಿ, ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆಗೆ ಸಂಬಂಧಿಸಿದ ವಿಚಾರಗಳು, ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆಗಳನ್ನು ಕೇಳುವ ಅವಕಾಶ ಕನ್ನಡಿಗರಿಗೆ.
ಆಸ್ಟ್ರೇಲಿಯಾದಲ್ಲೂ ಚಂದನ ಟಿವಿ! ಆಸ್ಟ್ರೇಲಿಯಾದಲ್ಲೂ ‘ಚಂದನ’ ಕನ್ನಡ ವಾಹಿನಿ ಪ್ರವಹಿಸುತ್ತಿದೆ. ಇದು ನಮ್ಮ ದೂರದರ್ಶನದ ಚಂದನವಲ್ಲ!!.
ರೇಡಿಯೋದ ಹಾಗೆಯೇ ಕನ್ನಡ ಸಂಘ ಅಲ್ಲಿ ಪ್ರಾರಂಭಿಸಿರುವ ಕನ್ನಡ ಟಿವಿ ವಾಹಿನಿಗೆ ಇಟ್ಟ ಹೆಸರಿದು. ಇದರಲ್ಲಿ ಕನ್ನಡ ಗಂಧದ ಬಗೆಬಗೆಯ ಕನ್ನಡ ಕಾರ್ಯಕ್ರಮಗಳು ಪ್ರಸಾರವಾಗಿ ಅಲ್ಲಿನ ಕನ್ನಡ ಮನಸ್ಸುಗಳನ್ನು ತಣಿಸುತ್ತದೆ.
ಲಿವರ್ಪೂಲ್ ಮತ್ತು ಸ್ಟ್ರಾತ್ಫೀಲ್ಡ್ ಗ್ರಂಥಾಲಯಕ್ಕೆ ಕನ್ನಡ ಸಂಘ ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ದೇಣಿಗೆ ಕೊಟ್ಟಿದೆ. ಇದರಿಂದಾಗಿ ಸಿಡ್ನಿ ಮತ್ತು ನ್ಯೂ ಸೌತ್ ವೇಲ್ಸ್ನ ಯಾವುದೇ ಗ್ರಂಥಾಲಯದಲ್ಲೂ ಕನ್ನಡಿಗರು ಬಯಸಿದರೆ ಕನ್ನಡದ ಪುಸ್ತಕ ತರಿಸಿ ಓದಬಹುದು.
ವಿದೇಶಗಳಲ್ಲಿರುವ ಕನ್ನಡಿಗರು ಅನುಭವಿಸುವ ಸಾಮಾನ್ಯ ಕಷ್ಟವೆಂದರೆ ಇ-ಮೇಲ್ ಓದುವಂತೆ ಕಷ್ಟಪಟ್ಟು ಇ-ಪುಸ್ತಕ ಓದುವುದು. ಈ ಕಾಟಾಚಾರದ ಕೆಲಸದಿಂದ ಆಸ್ಟ್ರೇಲಿಯಾದ ಕನ್ನಡಿಗರು ಮುಕ್ತರು.
ಕಾಂಗರೂ ನಾಡಲ್ಲಿ ಕನ್ನಡ ಶಾಲೆ ಆಸ್ಟ್ರೇಲಿಯಾದಲ್ಲಿ ಹುಟ್ಟುವ ಕನ್ನಡದ ಮಕ್ಕಳಿಗೆ ಮಾತೃಭಾಷೆಯಲ್ಲೂ ಶಿಕ್ಷಣ ಕೊಡುವ ವ್ಯವಸ್ಥೆಯನ್ನು ಸಂಘ ಮಾಡಿಕೊಂಡಿದೆ. ಅದಕ್ಕಾಗಿ ಲಿವರ್ಪೂಲ್ ಮತ್ತು ಬ್ಲಾಕ್ ಟೌನ್ನಲ್ಲಿ ಕನ್ನಡ ಶಾಲೆಯನ್ನೇ ಆರಂಭಿಸಿದೆ. ಮಕ್ಕಳು ಬಿಡುವಿನ ಸಮಯದಲ್ಲಿ ಅಲ್ಲಿ ತಮ್ಮ ಭಾಷೆ, ಸಂಸ್ಕೃತಿಯ ಪರಿಚಯ ಮಾಡಿಕೊಳ್ಳುತ್ತಾರೆ.
ಪ್ರತಿವರ್ಷ ಕರ್ನಾಟಕದಿಂದ ಪ್ರಸಿದ್ಧ ಕಲಾವಿದರನ್ನು ಕರೆಸಿ ಕಾರ್ಯಕ್ರಮ ಏರ್ಪಡಿಸುವುದು ಮೊದಲಿನಿಂದ ನಡೆದುಕೊಂಡು ಬಂದ ಅಭ್ಯಾಸ. 2004 ರಲ್ಲಿ ಕರ್ನಾಟಕದ ಜೊತೆ ಜೊತೆಗೇ ಕುವೆಂಪು ಜನ್ಮ ಶತಮಾನೋತ್ಸವ ನಡೆಸಿದ್ದು ವಿಶೇಷ. 2003 ರಲ್ಲಿ ನಮ್ಮ ಸಂಘಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕೂಡ ಸಿಕ್ಕಿದೆ ಎನ್ನುತ್ತಾರೆ ಸಂಘದ ಸಂಸ್ಥಾಪಕ ಅಧ್ಯಕ್ಷ ಸಿದ್ಧಲಿಂಗೇಶ್ವರ ಒರೆಕೊಂಡಿ.
26 ರಂದು ಬೆಳ್ಳಿಹಬ್ಬ ಇಷ್ಟು ವರ್ಷ ಕನ್ನಡದ ಚಟುವಟಿಕೆಯಲ್ಲಿ ತೊಡಗಿದ್ದ ಸಂಘ ಇದೀಗ ಜುಲೈ 26 ರಂದು ನಡೆಯುವ ಬೆಳ್ಳಿಹಬ್ಬದ ಸಂಭ್ರಮಕ್ಕೆ ಸಿದ್ಧವಾಗುತ್ತಿದೆ. ಸಿಡ್ನಿಯ ಬ್ಲಾಕ್ ಟೌನ್ನಲ್ಲಿರುವ ಬೌಮನ್ ಹಾಲ್ನಲ್ಲಿ ಅಂದು ವೈಭವಪೂರ್ಣ ಸಮಾರಂಭ. ಕರ್ನಾಟಕದಿಂದ ಹಾಸ್ಯ ಕಲಾವಿದ ಪ್ರಾಣೇಶ್, ಗಾಯಕಿ ಎಂ.ಡಿ.ಪಲ್ಲವಿ ಅಲ್ಲಿರುತ್ತಾರೆ. ಸ್ಥಳೀಯ ಕಲಾವಿದರಿಂದ ಸಂಗೀತ, ನೃತ್ಯ, ನಾಟಕ ಮುಂತಾದ ಕಾರ್ಯಕ್ರಮವಿದೆ.
ಈಗಾಗಲೇ ಬೆಳ್ಳಿಹಬ್ಬದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ನೇಮಿಸಲಾಗಿದೆ. ಇದು ಸಿಡ್ನಿ ಕನ್ನಡಿಗರು ಮರೆಯಲಾಗದ ದಿನವಾಗಬೇಕು ಎಂಬ ಇಚ್ಛೆಯಿಂದ ಅವೆಲ್ಲ ಉತ್ಸಾಹದಲ್ಲಿ ಕೆಲಸ ಮಾಡುತ್ತಿವೆ ಎನ್ನುತ್ತಾರೆ ಸಂಘದ ಉಪಾಧ್ಯಕ್ಷೆ ಗೀತಾ ಗೋಪಿನಾಥ್.
ಅಮೆರಿಕದಲ್ಲಿ ಅಕ್ಕ ಸಂಘಟನೆ ವಿಶ್ವ ಕನ್ನಡ ಸಮ್ಮೇಳನ ನಡೆಸಿದಂತೆ ಸಿಡ್ನಿಯಲ್ಲೂ ಅಂತಹುದೇ ಬೃಹತ್ ಸಮಾರಂಭ ನಡೆಸುವ ಉದ್ದೇಶವಿದೆ ಎನ್ನುವ ಮೂಲಕ ಸಂಘದ ಅಧ್ಯಕ್ಷೆ ಡಾ|ನಾಗಮ್ಮ ಪ್ರಕಾಶ್ ಇನ್ನಷ್ಟು ನಿರೀಕ್ಷೆ ಹುಟ್ಟಿಸಿದ್ದಾರೆ.
ಸಂಘದ ಹೆಗ್ಗಳಿಕೆ ~ 1974 ರಲ್ಲಿ ಎಸ್ಬಿಎಸ್ ರೇಡಿಯೋದಲ್ಲಿ ಮೊಟ್ಟಮೊದಲ ಕನ್ನಡ ಕಾರ್ಯಕ್ರಮ. ಅದು ಇಂದಿಗೂ ಪ್ರತಿವಾರ ಪ್ರಸಾರವಾಗುತ್ತಿದೆ.
~ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸಲು ಲಿವರ್ಪೂಲ್ ಮತ್ತು ಬ್ಲಾಕ್ ಟೌನ್ನಲ್ಲಿ ಕನ್ನಡ ಶಾಲೆ. ಕನಕಾಪುರ ನಾರಾಯಣ, ವಿಜಯಕುಮಾರ ಹಲಗಲಿ ಶಿಕ್ಷಕರು. ~ ಪ್ರತಿವರ್ಷ 2-3 ಸಾಂಸ್ಕೃತಿಕ ಕಾರ್ಯಕ್ರಮ. ಕರ್ನಾಟಕದಿಂದ ಬಂದು ಕಾರ್ಯಕ್ರಮ ನಡೆಸಿಕೊಟ್ಟ ಪ್ರಸಿದ್ಧ ಕಲಾವಿದರು ಎಂ.ಎಲ್.ವಸಂತ ಕುಮಾರಿ, ಮಾಸ್ಟರ್ ಹಿರಣ್ಣಯ್ಯ, ರಾಜು ಅನಂತಸ್ವಾಮಿ, ಮಿಮಿಕ್ರಿ ದಯಾನಂದ, ಬಿ.ಆರ್.ಛಾಯಾ, ಸುಧಾ ಬರಗೂರು, ಮಂಜುಳಾ ಗುರುರಾಜ್, ಪ್ರೊ|ಕೃಷ್ಣೇಗೌಡ.
~ 2006 ರಲ್ಲಿ ಕುವೆಂಪು ಜನ್ಮ ಶತಮಾನೋತ್ಸವ. ಡಾ|ಎಂ.ಎಂ. ಕಲಬುರ್ಗಿ ಅಧ್ಯಕ್ಷತೆಯಲ್ಲಿ ಕವಿ ಸಮ್ಮೇಳನ. ~ 2006 ರಲ್ಲಿ ಸಂಘದ ಯುವ ಘಟಕ ಸ್ಥಾಪನೆ. ಆಗ ಜೋಕುಮಾರಸ್ವಾಮಿ ನಾಟಕ ಪ್ರದರ್ಶನ. ~ 2007 ರಲ್ಲಿ ಮಕ್ಕಳ ದಿನಾಚರಣೆ. ಎಲ್ಲ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದು ಹಾಗೂ ಅದರಲ್ಲಿ ಭಾಗವಹಿಸಿದ್ದು ಮಕ್ಕಳೇ. ~ ಸಂಘದ ಕ್ರಿಯಾಶೀಲತೆಗೆ ಬಹುಮಾನವಾಗಿ 2003 ರಲ್ಲಿ ಸಂಘಕ್ಕೆ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ. ~ ಸಿಡ್ನಿಯಲ್ಲಿ ಸಂಘದ ವಿವಿಧ ಘಟಕಗಳ ವತಿಯಿಂದ ಇಂಡಿಯನ್ ಫೇರ್. ಈಗ ರಜತ ಮಹೋತ್ಸವಕ್ಕೆ ಸಿದ್ಧತೆ. ಜುಲೈ ೨೬ರಂದು ಅದ್ಧೂರಿ ಸಮಾರಂಭ.
ಇಷ್ಟು ವರ್ಷ ಕನ್ನಡದ ಚಟುವಟಿಕೆಯಲ್ಲಿ ತೊಡಗಿದ್ದ ಸಂಘ ಇದೀಗ ಜುಲೈ 26 ರಂದು ನಡೆಯುವ ಬೆಳ್ಳಿಹಬ್ಬದ ಸಂಭ್ರಮಕ್ಕೆ ಸಿದ್ಧವಾಗುತ್ತಿದೆ. ಸಿಡ್ನಿಯ ಬ್ಲಾಕ್ ಟೌನ್ನಲ್ಲಿರುವ ಬೌಮನ್ ಹಾಲ್ನಲ್ಲಿ ಅಂದು ವೈಭವಪೂರ್ಣ ಸಮಾರಂಭ. ಕರ್ನಾಟಕದಿಂದ ಹಾಸ್ಯ ಕಲಾವಿದ ಪ್ರಾಣೇಶ್, ಗಾಯಕಿ ಎಂ.ಡಿ.ಪಲ್ಲವಿ ಅಲ್ಲಿರುತ್ತಾರೆ.
ಕನ್ನಡ ಸಂಘದ ಬಗೆಗೆ ಮಾಹಿತಿ ಬೇಕಾದರೆ: www.kannada.org.au
ವರದಿಯ ವಿವರಗಳು |
 |
ಕೃಪೆ : ಎಂ.ಕೋದಂಡರಾಮ ಕುಡ್ವ, ಆಸ್ಟ್ರೇಲಿಯ| ಕನ್ನಡ ಪ್ರಭ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-07-20
|
|
|