ಪ್ರಕೃತಿ ವೈಭವದೊಳಗೆ ಸಂತಸದ ಪಯಣ ... |
ಪ್ರಕಟಿಸಿದ ದಿನಾಂಕ : 2009-08-30
ಸಕಲೇಶಪುರ *೫೭ ಸುರಂಗಗಳು * ೨೪೧ ಸೇತುವೆಗಳು * ೧೧೦ ತಿರುವುಗಳು *೨ ಗಂಟೆ ಪ್ರಯಾಣ
ಮಂಗಳೂರು, ಆ. ೨೯: ಇದು ಬರೇ ರೈಲು ಪ್ರಯಾಣವಲ್ಲವಣ್ಣ, ಪ್ರಕೃತಿ ಸೊಬಗಿನ ಸೌಂದರ್ಯಾರಾಧನೆ.
ಗಗನಕ್ಕೆ ಮುತ್ತಿಡುವ ಗಿರಿಬೆಟ್ಟಗಳು, ಅದನ್ನು ಹೊದ್ದು ಮಲಗಿದ ಹಸಿರು ಕಾನನ. ಮಧ್ಯೆ ಝುಳು ಝಳು ನಿನಾದದೊಂದಿಗೆ ಹಾಲ್ನೊರೆಯೊಂದಿಗೆ ಹರಿಯುವ ಹಳ್ಳ ತೊರೆಗಳು. ಅಗಾಗ ಮಿಂಚಿ ಮಾಯವಾಗುವ, ಕೈಗೆ ಸಿಕ್ಕಂತೆ ಭಾಸವಾಗುವ ಬೆಳ್ಳಿಮೋಡಗಳು, ಮಳೆಯ ಹನಿಯೊಂದಿಗೆ ಮಿನುಗುವ ಹುಲ್ಲಿನ ಸಾಲು. ಇವೆಲ್ಲರ ನಡುವೆ ಬಳುಕುತ್ತಾ, ಬಾಗುತ್ತಾ , ತಿರುಗುತ್ತಾ ಮೇಲೇರುತ್ತದೆ ಸಾಗುತ್ತದೆ ನಮ್ಮೂರಿನ ಹೊಸ ಚಿಕುಪುಕು ರೈಲು.ಇನ್ನೇನು ಗಿರಿಶಿಖರ ಏರಿದೆವು ಎನ್ನುವಾಗ ಇನ್ನೊಂದು ತಿರುವು. ಮತ್ತೊಂದು ಬೆಟ್ಟದತ್ತ ಬಂಡಿ ನಡೆ.

ಈ ಪ್ರಯಾಣದಿಂದ ಕಣ್ಣಿಗೆ ಹಬ್ಬ, ಮನಸ್ಸಿಗೆ ಆನಂದೋಲ್ಲಾಸ. ಅಕ್ಷರಗಳಲ್ಲಿ ಬಣ್ಣಿಸು ವುದು, ಛಾಯಾಚಿತ್ರಗಳಲ್ಲಿ ಸೆರೆ ಹಿಡಿಯುವುದು ಅಸಾಧ್ಯವೆನ್ನುವ ರೀತಿಯಲ್ಲಿ ಕ್ಷಣ ಕ್ಷಣಕ್ಕೂ ಬದಲಾದ ಚಿತ್ರಣ. ಕಣ್ಣರಪ್ಪೆ ತೆರೆಯುವಷ್ಟರಲ್ಲಿ ಹೊಸ ಬೆಡಗು ಸಿದ್ಧ.
ಮಂಗಳೂರು- ಬೆಂಗಳೂರು ನಡುವಿನ ಹಗಲು ರೈಲಿನಲ್ಲಿ ಪ್ರಯಾಣಿಸಿದರೆ ಮಾತ್ರ ಈ ಪ್ರಕೃತಿ ವೈಭವವನ್ನು ಸವಿಯಲು ಸಾಧ್ಯ. ಜೀವನದಲ್ಲಿ ನೋಡು ಒಮ್ಮೆ ಜೋಗದ ಗುಂಡಿ ಎಂದು ರಾಜರತ್ನಂ ಹೇಳಿದ್ದರು. ಆದರೆ ಅದನ್ನು ಸ್ವಲ್ವ ತಿದ್ದುಪಡಿಸಿದರೆ ಜೀವನದಲ್ಲಿ ಒಮ್ಮೆಯಾದರೂ ಈ ರೈಲಿನಲ್ಲಿ ಪ್ರಯಾಣಿಸಿ ಪ್ರಕೃತಿ ಸೌಂದರ್ಯ ಸವಿಯಬೇಕು.

ಮಂಗಳೂರಿನಿಂದ ಹಸಿರು ಗದ್ದೆ, ಅಡಿಕೆ ತೋಟಗಳ ನಡುವೆ ಹಾದು ಹೋಗುವ ರೈಲು ಸುಬ್ರಹ್ಮಣ್ಯ ರೋಡ್ ನಂತರ ಪ್ರಕೃತಿ ಪ್ರಿಯರಿಗೆ ರಸದೌತಣ ನೀಡಲು ಆರಂಭಿಸುತ್ತದೆ. ಸುಬ್ರಹ್ಮಣ್ಯದಿಂದ ಸಕಲೇಶಪುರದ ವರೆಗೆ ೫೫ ಕಿ.ಮೀ. ದೂರ. ಪ್ರಯಾಣದ ಸಮಯ ಸುಮಾರು ೨.೧೫ ಗಂಟೆ. ೧೧ ಗಂಟೆಗೆ ಸುಬ್ರಹ್ಮಣ್ಯ ತಲುಪುವ ರೈಲು ಮಧ್ಯಾಹ್ನ ೧ ಗಂಟೆ ಆಸುಪಾಸಿನಲ್ಲಿ ಸಕಲೇಶಪುರಕ್ಕೆ ಹೋಗುತ್ತದೆ. ಈ ಅವಧಿಯೇ ಈ ಪ್ರಯಾಣದ ಹೈಲೈಟ್.

೫೭ ಸುರಂಗಗಳು, ೨೪೧ ಸೇತುವೆಗಳು, ೧೧೦ ತಿರುವುಗಳು. ಇವುಗಳ ಮಧ್ಯೆ ರೈಲು ಮೇಲೇರುತ್ತಾ ಸಾಗುವುದು ಅದ್ಭುತ ರಮ್ಯ ಅನುಭವ. ಇಲ್ಲಿ ಪ್ರಕೃತಿ ರಮಣೀಯ ಸೌಂದರ್ಯ ಜೊತೆಯಲ್ಲಿ ರುದ್ರತೆಯ ಅನುಭವವೂ ದೊರೆಯುತ್ತದೆ. ವನಸಿರಿಯ ನಡುವಿನ ಸೇತುವೆಗಳ ಮೇಲೆ ರೈಲು ಹರಿಯುತ್ತಿದ್ದಂತೆ ಕೆಳಗೆ ನೋಡಿದರೆ ಎದೆ ‘ಡವಡವ’ ಎನ್ನುವುದು ಖಂಡಿತ. ಮೇಲೆ ಕಾನನ ಛಾವಣಿ, ಕೆಳಗೆ ಪ್ರಪಾತ. ಏಕಕಾಲದಲ್ಲಿ ವಿಭಿನ್ನ ಅನುಭವ ಪ್ರಯಾಣಿಕರಿಗೆ.

ಘಾಟಿ ಶ್ರೇಣಿಯುದ್ಧಕ್ಕೂ ಅಲ್ಲಲ್ಲಿ ಧುಮುಕುವ ಜಲಧಾರೆಗಳು ಮನಕ್ಕೆ, ಕಣ್ಣಿಗೆ ಹಬ್ಬ ವನ್ನುಂಟು ಮಾಡುತ್ತವೆ. ಮುಗಿಲು ಚುಂಬಿಸುವ ಮರಗಳು. ಅವುಗಳನ್ನು ಅಪ್ಪಿ ಕೊಂಡಿ ರುವ ಬಳ್ಳಿಗಳು. ದಾರಿಯುದ್ದಕ್ಕೂ ಶೃಂಗಾರ ಮಾಡಿರುವ ಕಾನನ ಹೂಗಳು. ಗಾಳಿಗೆ ಅತ್ತಿತ್ತ ಬಳುಕುವ ಹುಲ್ಲು. ಸೊಗಸಾಗಿ ಬೆಳೆದು ನಿಂತಿರುವ ಕಾಫಿ, ಏಲಕ್ಕಿ ಗಿಡಗಳು. ಮಧ್ಯೆ ಮಧ್ಯೆ ಸುತ್ತಿಬೆಳೆಯುತ್ತಿರುವ ಕರಿ ಮೆಣಸು. ಎಲ್ಲವೂ ಖುಷಿ ನೀಡುತ್ತದೆ. ಕಣ್ಣು ರೆಪ್ಪೆ ಕ್ಷಣವೂ ಮುಚ್ಚದಂತೆ ಹುಚ್ಚಾಗಿಸುತ್ತದೆ.
ಸದ್ಯ ಮಳೆಗಾಲ. ಆಗಾಗ ಮಳೆ ಸಿಂಚನವಾಗುವ ಸಾಧ್ಯತೆಗಳು ಜಾಸ್ತಿ. ಮಳೆ, ಬಿಸಿಲು ಆಟವಾಟವಾಡಿದರಂತೂ ಸ್ವರ್ಗಕ್ಕೆ ಮೂರೇ ಗೇಣು. ರೈಲಿನಲ್ಲೇ ಕುಣಿದು ಕುಪ್ಪಳಿಸೋಣ ಎನ್ನುವಷ್ಟು ಸಂತಸ ಉಂಟಾಗುತ್ತದೆ. ಶನಿವಾರ ಮೊದಲ ದಿನದ ಪ್ರಯಾಣದಲ್ಲಿ ಪ್ರಯಾಣಿಕರಿಗೆ ಈ ಅನುಭವ ದೊರೆತಿದೆ. ನಿಮಿಷಕ್ಕೊಮ್ಮೆ ಹನಿಯುತ್ತಿದ್ದ ಮಳೆ, ಗಳಿಗೆ ಗೊಮ್ಮೆ ಕಾಣಿಸಿಕೊಳ್ಳುತ್ತಿದ್ದ ಸೂರ್ಯ. ಇದು ಗಿರಿಶಿಖರಗಳ ಸಾಲಿನಲ್ಲಿ ಅತ್ಯಾಕರ್ಷಕ ಚಿತ್ತಾರ ಮೂಡಿಸಿತ್ತು.
ಸುಬ್ರಹ್ಮಣ್ಯದಿಂದ ಸಕಲೇಶಪುರ ನಡುವಿನ ರೈಲು ನಿಲ್ದಾಣಗಳಲ್ಲಿ ಜನ ಸಂಪರ್ಕವಿಲ್ಲ. ಜೊತೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲ. ಸದ್ಯ ಜನರೇಟರ್ ಹಾಗೂ ಸೌರವಿದ್ಯುತ್ ಮಾತ್ರ. ಸುರಂಗಗಳಲ್ಲೂ ಕತ್ತಲೆ.
ನನ್ನತ್ತರಕ್ಕೆ ಏರಬಲ್ಲೆಯಾ ಎಂದು ಸವಾಲೊಡ್ಡುವ ಈ ಘಾಟಿ ಶ್ರೇಣಿಯಲ್ಲಿ ಹಳಿಗಳನ್ನು ನಿರ್ಮಿಸಿದ ತಂತ್ರಜ್ಞರ ಕೌಶಲ್ಯ, ಸಾಧನೆ ನಿಜಕ್ಕೂ ಅತ್ಯದ್ಭುತ.

ರೈಲು ಸಂಚಾರ ವೃತ್ತಾಂತ
೧೯೭೯ರಲ್ಲಿ ಮಂಗಳೂರು- ಬೆಂಗಳೂರು ಮಧ್ಯೆ ಮೀಟರ್ಗೇಜ್ ರೈಲು ಪ್ರಾರಂಭ ವಾಯಿತು. ಬಳಿಕ ೧೯೯೬ ರಲ್ಲಿ ಬ್ರಾಡ್ಗೇಜ್ ಪರಿವರ್ತನೆಗೆ ಸಂಚಾರ ಸ್ಥಗಿತಗೊಂಡಿತು.
೨೦೦೩ ರ ಡಿಸೆಂಬರ್ ೨೮ ರಂದು ಮಂಗಳೂರು-ಕಬಕ- ಪುತ್ತೂರುವರೆಗೆ ಪರಿವರ್ತಿತ ಮಾರ್ಗದಲ್ಲಿ ಮತ್ತೆ ಸಂಚಾರ ಆರಂಭ. ಅಲ್ಲಿಂದ ಮುಂದೆ ೪ ವರ್ಷಗಳ ಕಾಲ ರೈಲು ಓಡಲೇ ಇಲ್ಲ. ಜನರು ಹೋರಾಟ ಹಾದಿಯನ್ನು ಹಿಡಿದರು.
ಹೋರಾಟ ತೀವ್ರಗೊಳ್ಳತೊಡಗಿದಾಗ ೨೦೦೭ ರ ಡಿ.೮ ರಂದು ಮಂಗಳೂರು- ಬೆಂಗಳೂರು ಮಧ್ಯೆ ರಾತ್ರಿ ರೈಲು ಪ್ರಾರಂಭವಾಯಿತು. ಆಗಿನ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಆ ಸಂದರ್ಭದಲ್ಲಿ ಎರಡು ತಿಂಗಳೊಳಗೆ ಹಗಲು ರೈಲು ಪ್ರಾರಂಭಿಸುವ ಭರವಸೆ ನೀಡಲಾಗಿತ್ತು. ಇದು ಕೇವಲ ಭರವಸೆಯಾಗಿಯೇ ಉಳಿದಾಗ , ಎರಡು ತಿಂಗಳು ಕಳೆದು ಎರಡು ವರ್ಷಗಳಾಗುತ್ತಾ ಬಂದರೂ ಹಗಲು ರೈಲು ಪ್ರಾರಂಭವಾಗದಿದ್ದಾಗ ಮತ್ತೆ ಜನತೆ ಹೋರಾಟಕ್ಕಿಳಿಯುವುದು ಅನಿವಾರ್ಯವಾಯಿತು.
ಇದೀಗ ಹಗಲು ರೈಲು ಪ್ರಾರಂಭಗೊಂಡಿದೆ. ಆದರೆ ಇದು ಯಶವಂತಪುರದವರೆಗೆ ಮಾತ್ರ ಓಡುತ್ತದೆ.
ವರದಿಯ ವಿವರಗಳು |
 |
ಕೃಪೆ : ಸುರೇಂದ್ರ ಎಸ್.ವಾಗ್ಳೆ| ಉದಯವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2009-08-30
|
|
| MANJUNATH, bangalore | 2010-01-29 | | its so buaitfull |
| ಗಣೇಶ್ ರೈ, ಕೊಡಗು / ಶಾರ್ಜಾ | 2009-08-30 | | ನಿತ್ಯ ಹರಿದ್ವರ್ಣ ಕಾನನ, ಮೇಘರಾಜನನ್ನು ಮುತ್ತಿಕ್ಕುವ ಮರಗಳ ಸಾಲು, ಧುಮ್ಮಿಕ್ಕಿ ಹರಿಯುವ ಜಲಧಾರೆಗಳು... ವರ್ಣನೆಗೆ ಶಬ್ಧಗಳು ಅಲಭ್ಯ.... ಪ್ರತ್ಯಕ್ಷವಾಗಿ ವನಸಿರಿಯ ಸೌಂದರ್ಯವನ್ನು ಅಸ್ವಾಧಿಸುವ ಆ ಅನುಭವ ಕೇವಲ ಕೆಲವೇ ಚಿತ್ರದಲ್ಲಿ ಪಡೆದಿದ್ದೇವೆ. ಧನ್ಯವಾದಗಳು! ಗಲ್ಫ್ ಕನ್ನಡಿಗಕ್ಕೆ. ಪ್ರಕೃತಿ ಪ್ರಿಯರಿಗೆ ಒಮ್ಮೆಯಾದರೂ ಪ್ರಕೃತಿ ಮಾತೆಯ ವಿರಾಟ ವಿಶ್ವರೂಪ ದರ್ಶನ ವೀಕ್ಷಿಸುವ ಅವಕಾಶ ಲಭ್ಯವಾಗಲಿ. |
|