ಪ್ರಕೃತಿ ಸೌಂದರ್ಯ ನಡುವೆ ಬೆಂಗಳೂರಿಗೆ ಪಯಣ; ಹಗಲು ರೈಲಿಗೆ ದಾರಿಯುದ್ದಕ್ಕೂ ಹಾರತುರಾಯಿಗಳ ಸ್ವಾಗತ |
ಪ್ರಕಟಿಸಿದ ದಿನಾಂಕ : 2009-08-30
ಹಾಸನ, ಆ.೨೯. ಅಬ್ಬಾ.. ಆ ಟ್ರಾಫಿಕ್ ಜಾಮ್... ಗುಂಡಿಮಯ ರಸ್ತೆ... ರಸ್ತೆಯುದ್ದಕ್ಕೂ ಅಪಘಾತಗಳ ಅವಘಡ, ಇಡೀ ದಿನ ಪ್ರಯಾಣಿಸಲಾಗದ ದುಸ್ಥಿತಿ... ಶಿರಾಡಿ ರಸ್ತೆಯಲ್ಲಿ ಹೋಗುವುದು ಬೇಡಪ್ಪ... ಈಗ ಈ ಭಯ, ಆತಂಕ, ಅವಾಂತರಗಳಿಂದ ಜನರು ಪಾರಾಗುವ ಸುಸಮಯ. ಏಕೆಂದರೆ, ಮಂಗಳೂರು-ಹಾಸನ-ಬೆಂಗಳೂರು ಹಗಲು ರೈಲು ಸಂಚಾರ ಆರಂಭಿಸಿರುವುದು ಈ ಎಲ್ಲ ಸಮಸ್ಯೆಗಳಿಗೆ ತೆರೆಯೆಳಿದಿದೆ.

ಪ್ರಯಾಣಿಕರು ಈಗ ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯ ಸವಿಯುತ್ತಾ ಪ್ರಯಾಣಿಸಬ ಹುದು. ಸುಬ್ರಹ್ಮಣ್ಯ- ಸಕಲೇಶಪುರ ನಡುವಿನ ರೈಲು ಮಾರ್ಗ ಪ್ರಯಾಣಿಕರ ಸಂಚಾರಕ್ಕೆ ಯೋಗ್ಯವೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಿದ ದಕ್ಷಿಣ ರೇಲ್ವೆ ಭದ್ರತೆ ವಿಭಾಗ ಸಂಚಾರ ಯೋಗ್ಯ ಎಂದು ಪ್ರಮಾಣಪತ್ರ ನೀಡಿದ ಬಳಿಕ ಹಗಲು ರೈಲು ಓಡಿಸುವುದಕ್ಕೆ ಅನುಮೋದನೆ ನೀಡಲಾಗಿತ್ತು.
ಸಕಲೇಶಪುರ -ಸುಬ್ರಹ್ಮಣ್ಯ ನಡುವಿನ ೫೫ ಕಿ.ಮೀ.ನಲ್ಲಿರುವ ಸುರಂಗಗಳು ಹಾಗೂ ಅತ್ಯಾಧುನಿಕ ಮಾದರಿಯಲ್ಲಿ ನಿರ್ಮಿಸಿರುವ ಹಳಿಗಳ ಸಾಮರ್ಥ್ಯ ಮತ್ತು ಅಲ್ಲಿ ನಿರ್ಮಿಸಿರುವ ಅಂಡರ್ ಮತ್ತು ಓವರ್ ಬ್ರಿಡ್ಜ್ಗಳನ್ನು ತಂಡವು ಪರೀಕ್ಷಿಸಿತ್ತು.
ಕಡಿದಾದ ಕಣಿವೆ: ಪ್ರಪಾತಗಳು, ಕಡಿದಾದ ಕಣಿವೆಗಳು, ಹಚ್ಚ ಹಸಿರಿನ ನಡುವೆ ಹರಿಯುವ ಝರಿ- ತೊರೆಗಳ ನಡುವೆ ನಿರ್ಮಿಸಿರುವ ೩೬ ಕಠಿಣ ತಿರುವುಗಳು, ೫೮ ಸುರಂಗಗಳು ಹಾಗೂ ಶಿರಿವಾಗಿಲು ಬಳಿ ೧೨೦ ಅಡಿ ಎತ್ತರ ಮತ್ತು ೫೮೩ ಮೀಟರ್ ಉದ್ದದ ಸೇತುವೆ ಈ ಮಾರ್ಗದಲ್ಲಿದೆ.
ದೋಣಿಗಾಲ್, ಎಡಕುಮೇರಿ ಮತ್ತು ಶಿರಿವಾಗಿಲು ಬಳಿ ತೀರ ಇಳಿಜಾರು ಪ್ರದೇಶವಿದೆ. ಅಲ್ಲಿ ರೈಲು ನಿಲ್ಲಲು ವಿಶೇಷ ಮಾದರಿ ನಿಲ್ದಾಣ ಸ್ಥಾಪಿಸಲಾಗಿದೆ. ಎಷ್ಟು ಇಳಿಜಾರು ಇರುತ್ತದೆಯೇ ಅಷ್ಟೇ ಎತ್ತರದಲ್ಲಿ ನಿಲ್ದಾಣ ಸ್ಥಾಪಿಸಲಾಗಿದೆ. ಅದಕ್ಕೆ ...ಎಂದು ಕರೆಯಲಾಗುತ್ತದೆ.
ಗೋವಾಕ್ಕೆ ಹೋಗುವ ಛಛಡಡಿಟಜ ಠಛ್ಛನಿಲ್ದಾ ಮಾದರಿಯ- ದಶಕಗಳ ನಂತರ:
೧೯೬೩ ರಿಂದ ೧೯೮೪ ರವರೆಗೆ ನಡೆದ ಸರ್ವೆ ಕೆಲಸ ಪೂರ್ಣಗೊಂಡ ನಂತರ ಘಟ್ಟದೊಳಗೆ ರೈಲುಗಳು ೧೪ ವರ್ಷಗಳು ಮೀಟರ್ಗೇಜ್ನಲ್ಲಿ ಪ್ರಯಾಣಿಸಿತ್ತು. ೧೯೯೭ಅಕ್ಟೋಬರ್ನಲ್ಲಿ ಬ್ರಾಡ್ಗೇಜ್ ಪರಿವರ್ತನೆಗೆಂದು ನಿಂತು ಹೋದ ರೈಲು ಸಂಚಾರ ಆರಂಭವಾಗಿರುವುದು ದಶಕದ ನಂತರ.
ಮಂಗಳೂರು -ಬೆಂಗಳೂರು ನಡುವೆ ರೈಲು ಸಂಚಾರ ಆರಂಭವಾಗಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ಸಂಭವಿಸುತ್ತಿರುವ ಅಪಘಾತ ಮತ್ತು ಪರಿಸರ ಮಾಲಿನ್ಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ರಾಜ್ಯ, ರಾಷ್ಟ್ರ ಮಟ್ಟದ ವ್ಯಾಪಾರ, ವಹಿವಾಟು ವೃದ್ಧಿಯಾಗುತ್ತದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುವ ಪೆಟ್ರೋಲ್, ಡೀಸೆಲ್ ದಂಧೆಗೂ ಕಡಿವಾಣ ಬೀಳಲಿದೆ.

ರೈಲಿನಲ್ಲಿ ಸರಕು ಸಾಗಣೆ ವೆಚ್ಚ ಕಡಿಮೆ ಆಗುತ್ತದೆ. ಆದ್ದರಿಂದ ಸಹಜವಾಗಿ ವ್ಯಾಪಾರ ವಹಿವಾಟು ಹೆಚ್ಚಾಗಿದೆ. ಕರಾವಳಿ ಮತ್ತು ಹಳೆ ಮೈಸೂರು ಪ್ರಾಂತ್ಯದ ನಡುವೆ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆ ಬೆಳವಣಿಗೆ ಮಾತ್ರವೇ ಅಲ್ಲ. ಪ್ರವಾಸೋದ್ಯಮ ಪ್ರಗತಿಗೂ ಈ ರೈಲು ಸಂಚಾರ ಸಹಕಾರಿಯಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಮಂಗಳೂರು-ಚನ್ನೈ ಬಂದರುಗಳಿಗೆ ನೇರ ಸಂಪರ್ಕ ಕಲ್ಪಿಸಬಹುದಲ್ಲದೆ, ಗೋವಾ-ಮಹಾರಾಷ್ಟ್ರ-ಕೇರಳ-ತಮಿಳುನಾಡು ಮತ್ತು ಆಂಧ್ರಪ್ರದೇಶ ನಡುವಿನ ವಹಿವಾಟು ದ್ವಿಗುಣವಾಗಲಿದೆ. ಇದು ದೇಶದ ಆರ್ಥಿಕ ಬೆಳವಣಿಗೆ ಪೂರಕ ಎಂದು ಹಾಸನ ವಾಣಿಜ್ಯ ಒಕ್ಕೂಟದ ಸಂಚಾಲಕ ದಲಿಚಂದ್ ಜೈನ್ ಹೇಳುತ್ತಾರೆ.
೩ ದಿನ ಮಾತ್ರ: ಕರಾವಳಿ, ಹಾಸನ ಮತ್ತು ಬೆಂಗಳೂರು ಸಂಪರ್ಕಿಸುವ ಹಗಲು ರೈಲು ಸಂಚಾರದ ಕನಸು ನನಸಾಗಿರುವ ಸಂತಸ ಜನರಲ್ಲಿ ಮನೆ ಮಾಡಿರುವ ಸಂದರ್ಭದಲ್ಲೇ ವಾರಕ್ಕೆ ಮೂರು ಬಾರಿ ಮಾತ್ರ ಈ ಹಗಲು ರೈಲು ಸಂಚಾರಕ್ಕೆ ಅವಕಾಶ ಮಾಡಿರುವುದು ಅಸಮಾಧಾಕನಕ್ಕೆ ಕಾರಣವಾಗಿದೆ.
ಬೆಂಗಳೂರಿನಿಂದ ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ಬೆಳಗ್ಗೆ ೭-೩೦ಕ್ಕೆ ಹೊರಡುವ ಪ್ರಯಾಣಿಕರ ರೈಲು ಹಾಸನದ ಮೂಲಕ ಸಕಲೇಶಪುರ ಮಾರ್ಗವಾಗಿ ಮಂಗಳೂರು ತಲುಪಲಿದೆ. ಮಂಗಳೂರಿನಿಂದ ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಗ್ಗೆ ೮.೨೦ಕ್ಕೆ ಹೊರಡುವ ರೈಲು ಸಕಲೇಶಪುರಕ್ಕೆ ಮಧ್ಯಾಹ್ನ ೧.೩೦ಕ್ಕೆ ತಲುಪಲಿದ್ದು, ಮಧ್ಯಾಹ್ನ ೨.೩೦ಕ್ಕೆ ಹಾಸನಕ್ಕೆ ಆಗಮಿಸಲಿದೆ. ಅರಸೀಕೆರೆ ಮಾರ್ಗವಾಗಿ ಸಂಜೆ ಬೆಂಗಳೂರು ತಲುಪಲಿದೆ.
ವಾರದಲ್ಲಿ ಪ್ರತಿ ದಿನವೂ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಮಂದುವರಿಸುವಂತೆ ಸಕಲೇಶಪುರದ ಶಾಸಕ ಎಚ್.ಕೆ.ಕುಮಾರಸ್ವಾಮಿ ಕೇಂದ್ರದ ಚಾಲನೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಹಗಲು ರೈಲಿಗೆ ದಾರಿಯುದ್ದಕ್ಕೂ ಹಾರತುರಾಯಿಗಳ ಸ್ವಾಗತ

ಹಾಸನ: ಹಸಿರು ನಿಶಾನೆ ಪಡೆದು ಮಂಗಳೂರಿನಿಂದ ಪ್ರಯಾಣ ಆರಂಭಿಸಿದ ಬೆಂಗಳೂರು-ಮಂಗಳೂರು ಹಗಲು ರೈಲಿಗೆ ಜಿಲ್ಲೆಯಲ್ಲಿ ಹಾರತುರಾಯಿಗಳ ಅದ್ಧೂರಿ ಸ್ವಾಗತ ಶುಕ್ರವಾರ ನಗರದಲ್ಲಿ ದೊರೆಯಿತು.
ಏಕೆಂದರೆ ಇದು ಜಿಲ್ಲೆ ಜನತೆಯ ಬಹುದಿನದ ಕನಸಾಗಿತ್ತು. ಆ ಕನಸು ಇಂದು ನನಸಾಗಿದ್ದಕ್ಕೆ ಜಿಲ್ಲೆಯಲ್ಲಿ ಎಲ್ಲಿಲ್ಲದ ಸಂಭ್ರಮ.
ಹೊಸ ರೈಲಿಗೆ ಮಂಗಳೂರಿನಲ್ಲಿ ಬೆಳಗ್ಗೆ ೮ ಕ್ಕೆ ಹಸಿರು ಬಾವುಟ ತೋರಲಾಯಿತು.
ಕರಾವಳಿ ಅಲೆಗಳನ್ನು ದಾಟಿ ಪಶ್ಚಿಮಘಟ್ಟ ಪ್ರವೇಶಿಸುತ್ತಿದ್ದಂತೆಯೇ ನಿಲುಗಡೆ ನೀಡಿದ ಲ್ಲೆಲ್ಲಾ ಹಾರ, ಬಾಳೆಕಂಬ, ಮಾವಿನ ಸೊಪ್ಪು, ತೆಂಗಿನ ಕಾಯಿಗಳ ಗೊನೆಗಳನ್ನೇ ಕಟ್ಟಿ ನೂತನ ರೈಲನ್ನು ನವ ವಧುವಿನಂತೆ ಸ್ವಾಗತಿಸಲಾಯಿತು.

೨.೪೦ಕ್ಕೆ ಹಾಸನಕ್ಕೆ: ಈ ರೈಲಿಗೆ ಜಿಲ್ಲೆಯಲ್ಲಿ ಎರಡನೇ ಸ್ವಾಗತ ಹಾಸನದಲ್ಲಿ. ಹಾಗಾಗಿ ನಗರದ ಜನರೂ ರೈಲಿನ ಬರುವಿಕೆಗಾಗಿ ನಿಲ್ದಾಣದಲ್ಲಿ ಕಾದು ಕುಳಿತಿದ್ದರು.
ಮೊಬೈಲ್ಗಳಲ್ಲಿ ರೈಲಿನ ಬರುವಿಕೆಯ ಪ್ರತಿಕ್ಷಣದ ಮಾಹಿತಿ ಪಡೆಯುತ್ತಿದ್ದ ಜನರ ನಿರೀಕ್ಷೆಯಂತೆ ರೈಲು ೨.೪೦ ಕ್ಕೆ ನಿಲ್ದಾಣದಲ್ಲಿ ಬಂದು ನಿಂತಿತು.
ರೈಲು ನಿಲ್ದಾಣ ಪ್ರವೇಶಿಸುತ್ತಿದ್ದಂತೆಯೇ ಹೊರಗೆ ಪಟಾಕಿಗಳ ಸದ್ದು ಮೊಳಗಿತು. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರೈಲಿಗೆ ಬೃಹತ್ ಹೂಮಾಲೆಯನ್ನು ಹಾಕಿ ಸ್ವಾಗತ ಕೋರಿದರು. ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು. ಇದು ಜಿಲ್ಲೆಯ ಜನತೆಯ ಹೋರಾಟಕ್ಕೆ ದೊರೆತ ಫಲ ಎಂದು ಕರವೇ ಮುಖಂಡ ಸತೀಶ್ ಪಟೇಲ್ ಸಂತಸ ವ್ಯಕ್ತಪಡಿಸಿದರು.

ಸಕಲೇಶಪುರದಲ್ಲೂ ರೈಲಿಗೆ ಭರ್ಜರಿ ಸ್ವಾಗತ
ಸಕಲೇಶಪುರ, ಆ.೨೯. ಶನಿವಾರದಿಂದ ಪ್ರಾರಂಭವಾಗಿರುವ ಮಂಗಳೂರು -ಬೆಂಗಳೂರು ನಡುವಿನ ಹಗಲು ವೇಳೆ ಸಂಚರಿಸುವ ಪ್ರಯಾಣಿಕ ರೈಲು ಶನಿವಾರ ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದಂತೆ ನಾನಾ ಸಂಘಟನೆಯ ಪ್ರಮುಖರು ಹಾಗೂ ಪಟ್ಟಣದ ಜನತೆ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಪಟ್ಟಣದ ರೈಲು ನಿಲ್ದಾಣದಲ್ಲಿ ಸಂಭ್ರಮಿಸಿದರು.
ಶನಿವಾರ ಮಧ್ಯಾಹ್ನ ೧.೩೦ಕ್ಕೆ ಪಟ್ಟಣದ ರೈಲು ನಿಲ್ದಾಣಕ್ಕೆ ರೈಲು ಆಗಮಿಸಿದ ನಂತರ ಪೂಜೆ ಸಲ್ಲಿಸಿದ ನಾಗರಿಕರು ಮುಗಿಲು ಮುಟ್ಟುವಂತೆ ಘೋಷಣೆ ಕೂಗಿ ಆನಂದಿಸಿದರು. ೧೯೯೭ ರಿಂದ ಸ್ಥಗಿತಗೊಂಡಿದ್ದ ಪ್ರಯಾಣಿಕರ ರೈಲನ್ನು ಪುನರ್ ಆರಂಭಿಸುವಂತೆ ಹಲವು ದಿನಗಳಿಂದ ಪ್ರಬಲ ಬೇಡಿಕೆ ಇಟ್ಟಿದ್ದಲ್ಲದೆ, ಅನೇಕ ಭಾರಿ ಪ್ರತಿಭಟನೆ ಸಹ ನಡೆಸಿದ್ದರು. ಇವರ ಹೋರಾಟಕ್ಕೆ ಮಣಿದ ಸರ್ಕಾರ ಕೊನೆಗೂ ಹಗಲು ವೇಳೆ ಪ್ರಯಾಣಿಕರ ರೈಲು ಸಂಚಾರಕ್ಕೆ ಆರಂಭಕ್ಕೆ ಅನುಮತಿ ನೀಡಿರುವುದರಿಂದ ಪಟ್ಟಣದ ರೈಲು ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದಲ ಜನತೆ ರೈಲನ್ನು ಹತ್ತಿ ಕುಣಿದು ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರೇಲ್ವೆ ಪ್ರಯಾಣಿಕರ ಹಿತ ರಕ್ಷಣೆ ಸಮಿತಿಯ ಅಧ್ಯಕ್ಷ ನಾರಾಯಣ ಆಳ್ವ, ಹಗಲು ವೇಳೆ ಪ್ರಯಾಣಿರಕರ ರೈಲು ಸಂಚಾರಕ್ಕೆ ತಾಲೂಕಿನ ಪ್ರಗತಿ ಪರ ಸಂಘಟನೆಗಳು ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ದೊರಕಿದೆ ಎನ್ನುತ್ತಾ ಇದು ಹೋರಾಟಗಾರರಿಗೆ ಸಂದ ಜಯ ಎಂದು ಹೇಳಿದರು.ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮಾತನಾಡಿ, ಬೆಂಗಳೂರು -ಮಂಗಳೂರು ನಡುವೆ ಹಗಲು ವೇಳೆ ರೈಲು ಸಂಚಾರಕ್ಕೆ ಈ ಹಿಂದೆ ಹೋರಾಟ ನಡೆಸಿದ ಚಳವಳಿಗಾರರ ಶ್ರಮ ಅತಿ ಮುಖ್ಯವಾಗಿದ್ದು, ಈ ಹೋರಾಟದಿಂದ ನಾನು ಸೇರಿದಂತೆ ಇತರ ೭ ಜನರು ಇಂದಿಗೂ ನ್ಯಾಯಾಲಯಕ್ಕೆ ಅಲೆಯಬೇಕಾಗಿದೆ. ಈ ರೈಲು ಸಂಚಾರ ಆರಂಭದಿಂದ ಶಿರಾಡಿ ರಸ್ತೆ ಸಂಚಾರ ಸುಗಮವಾಗಲಿ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಾಗರಿಕ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಮಲ್ನಾಡ್ ಮೆಹಬೂಬ್ ಮಾತನಾಡಿ, ರೈಲು ಸಂಚಾರ್ಕಕೆ ಸಂಬಂಧಿಸಿದಂತೆ ನಡೆದ ಹೋರಾಟ್ಕೆ ಈ ಹಿಂದೆ ೭ ಜನರು ಇಂದಿಗೂ ನ್ಯಾಯಾಲಯಕ್ಕೆ ಅಲೆಯಬೇಕಾಗಿದೆ. ಈ ರೈಲು ಸಂಚಾರ ಆರಂಭದಿಂದ ಶಿರಾಡಿ ರಸ್ತೆ ಸಂಚಾರ ಸುಗಮವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಾಗರಿಕ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಮಲ್ನಾಡ್ ಮೆಹಬೂಬ್ ಮಾತನಾಡಿ, ರೈಲು ಸಂಚಾರಕ್ಕೆ ಸಂಬಂಧಿಸಿದಂತೆ ನಡೆದ ಹೋರಾಟಕ್ಕೆ ಈ ಹಿಂದೆ ೭ ಜನರ ಮೇಲೆ ಇತ್ತೀಚೆಗೆ ೧೩ ಜನರ ಮೇಲೆ ಮೊಕದ್ದಮೆ ದಾಖಲಿಸಲಾಗಿದ್ದು, ಇವುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ನಾಗರಿಕ ಸಂರಕ್ಷಣಾ ಸಮಿತಿಯ ಬ್ಯಾಕರವಳ್ಳಿ ಜಯರಾಜ್, ರವಿಕುಮಾರ್, ಜಯ ಕರ್ನಾಟಕ ಸಂಘದ ಸುಪ್ರದೀಪ್, ಕರವೇಯ ಸುರೇಶ್ಗೌಡ, ರೈಲು ಪ್ರಯಾಣಿಕರ ಹಿತರಕ್ಷಣಾ ವೇದಿಕೆಯ ದಯಾನಂದ್, ಬಿಎಸ್ಪಿ ಮುಖಂಡ ಲಕ್ಷ್ಮಣ್ಕೀರ್ತಿ, ಪುರಸಭೆ ಅಧ್ಯಕ್ಷ ಇಬ್ರಾಹಿಂ ಯಾದ್ಗಾರ್, ಕಾಂಗ್ರೆಸ್ ಮುಖಂಡ ಡಿ.ಸಿ.ಸಣ್ಣಸ್ವಾಮಿ, ಹೆಗ್ಗೊವೆ ಸಂಜಯ್, ಬಿಜೆಪಿ ಮುಖಂಡ ಹೆತ್ತೂರು ದೇವರಾಜ್ ಇತರರು ಭಾಗವಹಿಸಿದ್ದರು.
ವರದಿಯ ವಿವರಗಳು |
 |
ಕೃಪೆ : ದಯಾಶಂಕರ ಮೈಲಿ| ಕನ್ನಡಪ್ರಭ| ಉದಯವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2009-08-30
|
|
|