ಶುಭಾಶಯಗಳು! ಕರಾವಳಿ ಕನ್ನಡಿಗರ ಬಹುದಿನಗಳ ಬೇಡಿಕೆ ಈಡೇರಿಕೆ: ನಾಳೆಯಿಂದ ಬೆಂಗಳೂರು-ಮಂಗಳೂರು ಹಗಲು ರೈಲು |
ಪ್ರಕಟಿಸಿದ ದಿನಾಂಕ : 2009-08-28
ಬೆಂಗಳೂರು - ಮಂಗಳೂರು- ಊಡುಪಿ- ಕುಂದಾಪುರ-ಕಾರವಾರ ಯಾವಾಗ?
ನವದೆಹಲಿ, ಆ.೨೭. ಬೆಂಗಳೂರು- ಮಂಗಳೂರು ನಡುವೆ ಹಗಲು ರೈಲು ಸಂಚಾರ ಆರಂಭಿಸಬೇಕು ಎಂಬ ದಕ್ಷಿಣ ಕನ್ನಡದ ಜನರ ಬಹುದಿನಗಳ ಬೇಡಿಕೆ ಶನಿವಾರ ಈಡೇರಲಿದೆ.
ಬೆಂಗಳೂರು- ಮಂಗಳೂರು ನಡುವಣ ಹಾಲಿ ರಾತ್ರಿ ರೈಲಿನ ಸಂಚಾರವನ್ನು ಕೇರಳದ ಕಣ್ಣೂರಿನ ತನಕ ವಿಸ್ತರಿಸುವ ಘೋಷಣೆಯನ್ನು ಕೇಂದ್ರ ಸರ್ಕಾರ ಇನ್ನೂ ಜಾರಿಗೆ ತಂದಿಲ್ಲ.
ಎರಡು ವರ್ಷಗಳ ಹಿಂದೆಯೇ ಘೋಷಣೆ ಮಾಡಿದ್ದರೂ ಬಾಕಿ ಉಳಿದಿದ್ದ ಹಗಲು ರೈಲಿನ ಸಂಚಾರವನ್ನು ಆರಂಭಿಸಿ ಮಂಗಳೂರು ಪ್ರದೇಶದ ಜನರನ್ನು ‘ಸಾಂತ್ವನ’ಗೊಳಿಸಿದ ನಂತರ ರಾತ್ರಿ ರೈಲಿನ ಸಂಚಾರವನ್ನು ಕಣ್ಣೂರಿನ ತನಕ ವಿಸ್ತರಿಸುವ ಉದ್ದೇಶ ಕೇಂದ್ರ ಸರ್ಕಾರಕ್ಕಿದೆ.
ರಾತ್ರಿ ರೈಲಿನ ಬರ್ತ್ಗಳನ್ನು ಮಂಗಳೂರಿನ ತನಕ ಮತ್ತು ಕಣ್ಣೂರಿನ ತನಕ ಎಂದು ಎರಡು ಕೋಟಾಗಳಲ್ಲಿ ವಿಭಜಿಸಿ ಹಂಚಿಕೆ ಮಾಡಲಾಗುವುದು. ಮಂಗಳೂರಿಗೆ ಸಿಂಹಪಾಲು ಕೋಟಾ ದೊರೆಯಲಿದೆ ಎಂಬ ಇಂಗಿತವನ್ನು ರೇಲ್ವೆ ಮೂಲಗಳು ವ್ಯಕ್ತಪಡಿಸಿವೆ.
ಆದರೆ ಇದೇ ರೈಲಿನ ಜನರಲ್ ಕಂಪಾರ್ಟ್ಮೆಂಟ್ನಲ್ಲಿ ಪ್ರಯಾಣ ಮಾಡುವ ಮಂಗಳೂರಿಗರು ಕಣ್ಣೂರಿಗೆ ಹೋಗುವ ಕೇರಳಿಗರ ಜೊತೆ ಸ್ಪರ್ಧೆ ಮಾಡಲೇಬೇಕು. ಜನರಲ್ ಕಂಪಾರ್ಟ್ಮೆಂಟ್ನಲ್ಲಿ ಮೀಸಲು ಅಥವಾ ಕೋಟಾ ಹಂಚಿಕೆ ಮಾಡಲು ಬರುವುದಿಲ್ಲ ಎಂಬುದು ಈ ಮೂಲಗಳ ಅಂಬೋಣ.
ಅಂದ ಹಾಗೆ ಹೊಸ ರೈಲಿನ ಸಂಚಾರವನ್ನು ಇದೇ ಶನಿವಾರ ಬೆಳಗ್ಗೆ ಬೆಂಗಳೂರಿನಲ್ಲಿ ಕೇಂದ್ರ ರೇಲ್ವೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಮತ್ತು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಸಿರು ಬಾವುಟ ತೋರಿ ಉದ್ಘಾಟನೆ ಮಾಡಲಿದ್ದಾರೆ.
ದಿನ ಬಿಟ್ಟು ದಿನ ಸಂಚಾರ: ಸದ್ಯಕ್ಕೆ ದಿನಬಿಟ್ಟು ದಿನ ಸಂಚರಿಸುವ ಈ ಹೊಸ ರೈಲು ಬೆಂಗಳೂರಿನಿಂದ ಬೆಳಗ್ಗೆ ೭.೩೦ಕ್ಕೆ ಹೊರಟು ಸಂಜೆ ೬.೪೦ಕ್ಕೆ ಮಂಗಳೂರು ತಲುಪ ಲಿದೆ.
ಮಂಗಳೂರಿನಿಂದ ಬೆಳಗ್ಗೆ ೮.೪೦ಕ್ಕೆ ಹೊರಟು ರಾತ್ರಿ ೭.೩೦ಕ್ಕೆ ಬೆಂಗಳೂರು ತಲುಪಲಿದೆ.
ಈ ಹೊಸ ಹಗಲು ರೈಲು ಅರಸೀಕೆರೆ ಹಾಸನ ಸಕಲೇಶಪುರದ ಮಾರ್ಗವಾಗಿ ಸಂಚರಿಸಲಿದೆ. ರಾತ್ರಿ ರೈಲಿನಂತೆ ಮೈಸೂರನ್ನು ಹಾದು ಹೋಗುವುದಿಲ್ಲ.
ಪರಿಣಾಮವಾಗಿ ಪ್ರಯಾಣದ ಅವಧಿ ಕೂಡ ಸುಮಾರು ಮೂರು ಗಂಟೆಗಳಷ್ಟು ತಗ್ಗಲಿದೆ ಎಂದು ರೇಲ್ವೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಬೆಂಗಳೂರಿನಿಂದ ಮಂಗಳವಾರ, ಗುರುವಾರ ಹಾಗೂ ಶನಿವಾರ ಮತ್ತು ಮಂಗಳೂರಿ ನಿಂದ ಸೋಮವಾರ, ಬುಧವಾರ ಹಾಗೂ ಶುಕ್ರವಾರದಂದು ಈ ರೈಲು ಸಂಚರಿಸಲಿದೆ.
ಈ ಮಾರ್ಗದಲ್ಲಿ ಹಗಲು ವೇಳೆ ಈಗಾಗಲೆ ಮೂರು ಸರಕು ಸಾಗಣೆ ರೈಲುಗಾಡಿಗಳು ಸಂಚರಿಸುತ್ತಿವೆ. ಈ ಪೈಕಿ ಒಂದರ ಸಂಚಾರವನ್ನು ಸ್ಥಗಿತಗೊಳಿಸಿ ಪ್ರಯಾಣಿಕರ ರೈಲು ಸಂಚಾರ ಆರಂಭಿಸುತ್ತಿದ್ದೇವೆ. ಪ್ರಯಾಣಿಕರ ಅನುಕೂಲಕ್ಕಾಗಿ ಲಕ್ಷಾಂತರ ರುಪಾಯಿ ನಷ್ಟವನ್ನು ರೇಲ್ವೆ ಇಲಾಖೆ ಭರಿಸಲು ಹಿಂಜರಿದಿಲ್ಲ ಎಂದು ಸಚಿವರು ತಿಳಿಸಿದರು.
ಸರಕು ಸಾಗಣೆ ರೈಲುಗಾಡಿಯನ್ನು ಮಾರ್ಗಮಧ್ಯದಲ್ಲಿ ನಿಲ್ಲಿಸಿಕೊಂಡು ಪ್ರಯಾಣಿಕರ ಗಾಡಿಗೆ ದಾರಿ ಮಾಡಿಕೊಡಲು ಸೂಕ್ತ ಸ್ಥಳವೊಂದನ್ನು ಗುರುತಿಸಲಾಗಿದೆ. ಈ ಸ್ಥಳದಲ್ಲಿ ‘ಲೂಪ್’ಗಳನ್ನು ಹಾಕಿ ನಿಲ್ದಾಣ ನಿರ್ಮಿಸುವ ಕಾರ್ಯವನ್ನು ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳಿಸಲಿದ್ದೇವೆ. ಆಗ ಸರಕು ಸಾಗಣೆಯ ಗಾಡಿಗಳೂ ಪೂರ್ಣ ಪ್ರಮಾಣದಲ್ಲಿ ಸಂಚರಿಸುವುದು ಸಾಧ್ಯ ಎಂದು ಅವರು ವಿವರಿಸಿದರು.
ಸೆಪ್ಟೆಂಬರಲ್ಲಿ ಶಿವಮೊಗ್ಗ- ಬೆಂಗಳೂರು ಇಂಟರ್ಸಿಟಿ
ಇತ್ತೀಚಿನ ರೇಲ್ವೆ ಬಜೆಟ್ನಲ್ಲಿ ಪ್ರಕಟಿಸಲಾದ ಶಿವಮೊಗ್ಗ- ಬೆಂಗಳೂರು ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲು ಸಂಚಾರ ಮುಂದಿನ ತಿಂಗಳು (ಸೆಪ್ಟೆಂಬರ್) ಆರಂಭ ಆಗಲಿದೆ.
ಮೈಸೂರು- ತಿರುಪತಿ ನಡುವಣ ರೈಲುಗಾಡಿಯ ಸಂಚಾರವನ್ನು ಚಾಮರಾಜನಗರದ ತನಕ ವಿಸ್ತರಿಸುವ ಘೋಷಣೆಯೂ ಮುಂದಿನ ತಿಂಗಳು ಈಡೇರಲಿದೆ. ರೇಲ್ವೆ ಸಚಿವೆ ಮಮತಾ ಬ್ಯಾನರ್ಜಿಯವರೇ ರಾಜ್ಯಕ್ಕೆ ಭೇಟಿ ನೀಡಿ ಈ ಎರಡೂ ಘೋಷಣೆಗಳನ್ನು ಕಾರ್ಯರೂಪಕ್ಕೆ ತರಲಿದ್ದಾರೆ ಎಂದು ರೇಲ್ವೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
2012 ಕ್ಕೆ ಬೆಂಗಳೂರು-ಮೈಸೂರು ಜೋಡಿ ಮಾರ್ಗ
ಬೆಂಗಳೂರು- ಮೈಸೂರು ನಡುವೆ ಜೋಡಿ ರೈಲು ಮಾರ್ಗ (ಡಬ್ಲಿಂಗ್) ನಿರ್ಮಾಣ ಕಾರ್ಯ ಮುಂಬರುವ ಎರಡೂವರೆ ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ರೇಲ್ವೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಬೆಂಗಳೂರಿನಿಂದ ರಾಮನಗರದ ತನಕ ಡಬ್ಲಿಂಗ್ ಕಾರ್ಯ ಈಗಾಗಲೆ ಪೂರ್ಣ ಗೊಂಡಿದೆ. ರಾಮನಗರದಿಂದ ಮೈಸೂರಿನ ನಡುವಣ ಕಾಮಗಾರಿಯನ್ನು ಚುರುಕುಗೊಳಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ.
ಈ ಮಾರ್ಗದಲ್ಲಿ ಹಲವಾರು ನದಿಗಳು ಕಾಲುವೆಗಳು ಎದುರಾಗುವ ಕಾರಣ ೪೨ ದೊಡ್ಡ ಸೇತುವೆಗಳು ಸೇರಿದಂತೆ ಒಟ್ಟು ೧೨೬ ಸೇತುವೆಗಳನ್ನು ನಿರ್ಮಿಸಬೇಕಿದೆ. ಸೇತುವೆ ನಿರ್ಮಾಣ ದೀರ್ಘ ಸಮಯ ಹಿಡಿಯುವ ಕಾಮಗಾರಿ. ಸೇತುವೆ ನಿರ್ಮಾಣದ ಟೆಂಡರ್ ಗಳನ್ನು ಅಂತಿಮಗೊಳಿಸಿದ್ದು ಮುಂಬರುವ ಅಕ್ಟೋಬರ್ನಲ್ಲಿ ಕಾಮಗಾರಿ ಆರಂಭ ಆಗಲಿದೆ. ಈ ಕಾಮಗಾರಿ ಪೂರ್ಣಗೊಳ್ಳಲು ಎರಡೂವರೆ ವರ್ಷಗಳು ಬೇಕು. ಆದರೆ ಈ ಕಾಮಗಾರಿಯ ಜೊತೆ ಜೊತೆಗೇ ಉಳಿದ ಭಾಗದಲ್ಲಿ ಹಳಿ ನಿರ್ಮಿಸುವ ಕಾರ್ಯ ಆರಂಭಿಸಿ ಪೂರ್ಣಗೊಳಿಸಲಿದ್ದೇವೆ ಎಂದು ಅವರು ವಿವರಿಸಿದರು.
ಡಬ್ಲಿಂಗ್ ಜೊತೆ ಜೊತೆಗೆ ವಿದ್ಯುದೀಕರಣದ ಕೆಲಸವೂ ಪೂರ್ಣಗೊಳ್ಳಲಿದೆ. ಈ ಕಾರ್ಯ ಮುಗಿದ ನಂತರ ಬೆಂಗಳೂರು- ಮೈಸೂರು ನಡುವೆ ತಡೆರಹಿತ ವೇಗದ ರೈಲುಗಾಡಿಗಳ ಸಂಚಾರ ಆರಂಭಸಲಿದ್ದೇವೆ. ಅಲ್ಲಿಯ ತನಕ ಎಲ್ಲ ಮುಖ್ಯ ನಿಲ್ದಾಣಗಳಲ್ಲಿ ನಿಲುಗಡೆ ಅನಿವಾರ್ಯ. ಮಹಾರಾಜರ ಕಾಲದ ಮೈಸೂರು ರೇಲ್ವೆ ವರ್ಕ್ಷಾಪ್ನ ಪುನರುದ್ಧಾರದ ಕುರಿತು ಇದೇ ೨೯ರಂದು ಮೈಸೂರಿನಲ್ಲಿ ವಿಮರ್ಶಾ ಸಭೆ ನಡೆಸಲಿದ್ದೇವೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ದಾವಣಗೆರೆ- ಚಿತ್ರದುರ್ಗ; ಕುಡಚಿ- ಬಾಗಲಕೋಟೆ: ಬಾಗಲಕೋಟೆ- ಕುಡಚಿ ಮತ್ತು ದಾವಣಗೆರೆ- ಚಿತ್ರದುರ್ಗದ ನಡುವೆ ರೈಲು ಮಾರ್ಗ ನಿರ್ಮಿಸಬೇಕೆಂಬ ಬಹುಕಾಲದ ಬೇಡಿಕೆಯನ್ನು ತೀವ್ರ ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ. ಈ ಮಾರ್ಗಗಳ ಸಮೀಕ್ಷೆಗಳು ಈಗಾಗಲೆ ಮುಗಿದಿವೆ. ಬಂಗಾರಪೇಟೆ- ಯಲಹಂಕ ನಡುವಣ ಕಾಮಗಾರಿ ೨೦೧೦ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ.
ಶಿವಮೊಗ್ಗ- ಹರಿಹರದ ನಡುವೆ ರೈಲು ಮಾರ್ಗ ನಿರ್ಮಾಣವನ್ನು ಕೈಗೆತ್ತಿಕೊಂಡರೆ ಶೇ.೫೦ರಷ್ಟು ವೆಚ್ಚವನ್ನು ಭರಿಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂಬ ಪ್ರಸ್ತಾವವನ್ನು ಮುಖ್ಯಮಂತ್ರಿಗಳು ಲಿಖಿತವಾಗಿ ಶೀಘ್ರ ಕೇಂದ್ರಕ್ಕೆ ಸಲ್ಲಿಸಲಿದ್ದಾರೆ. ನೆಲಮಂಗಲ- ಶ್ರವಣ ಬೆಳಗೊಳದ ನಡುವಣ ರೈಲು ಮಾರ್ಗ ನಿರ್ಮಾಣವನ್ನು ಆದಷ್ಟು ತ್ವರಿತವಾಗಿ ಪೂರ್ಣ ಗೊಳಿಸಲಿದ್ದೇವೆ. ಬೆಂಗಳೂರು- ಹುಬ್ಬಳ್ಳಿ- ಧಾರವಾಡ ವಿಸ್ತರಣೆಯ ಕಾಮಗಾರಿ ಯನ್ನು ಆದ್ಯತೆಯ ಮೇಲೆ ನಡೆಸಲಾಗುವುದು ಎಂದರು
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2009-08-28
|
|
|